ಜೀವನದಲ್ಲಿ ಅಂಬೇಡ್ಕರ್‌ ಆದರ್ಶ ಅಳವಡಿಸಿಕೊಳ್ಳಿ

| Published : May 11 2025, 01:26 AM IST

ಸಾರಾಂಶ

ದಲಿತ ಸಂಘರ್ಷ ಸಮಿತಿ ಹಾಗೂ ಬಹುಜನ ಚಳವಳಿ ಬಹುದೊಡ್ಡ ಹೋರಾಟವನ್ನು ರೂಪಿಸಿವೆ ಎಂಬುದು ನಿಜ. ಆದರೆ ಪ್ರಸ್ತುತ ಹೋರಾಟಗಳಿಗೆ ವಿಶ್ವಾಸಾರ್ಹತೆಯ ಕೊರತೆ ಕಾಡುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿಯೊಬ್ಬರೂ ಜೀವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‌. ಭಗವಾನ್‌ ಕರೆ ನೀಡಿದರು.

ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪ.ಜಾತಿ, ವರ್ಗದ ಅಧಿಕಾರಿಗಳ, ನೌಕರರ ಪರಿಷತ್‌, ಕರ್ನಾಟಕ ದಲಿತ ವೆಲ್ಫೇರ್‌ ಟ್ರಸ್ಟ್‌ ವತಿಯಿಂದ ಶನಿವಾರ ರಾಮಕೃಷ್ಣನಗರದ ದಿಗಂತ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಈ ಸಂಸ್ಥೆಗಳ ಸಂಸ್ಥಾಪಕ ಪ್ರದಾನ ಕಾರ್ಯದರ್ಶಿ ಚಿಕ್ಕಂದಾನಿ ಅವರನ್ನು 75ನೇ ಜನ್ಮದಿನ ಹಾಗೂ ಹರಿಹರ ಆನಂದಸ್ವಾಮಿ ಅವರನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರಶಸ್ತಿ ಪಡೆದಿದ್ದಕ್ಕಾಗಿ ಅಭಿನಂದಿಸಿ ಅವರು ಮಾತನಾಡಿದರು

ಅಂಬೇಡ್ಕರ್‌ ಅವರ ಆಶಯಗಳು ಏನಿತ್ತು? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ಅವರ ಕೃತಿಗಳನ್ನು ಹೆಚ್ಚೆಚ್ಚು ಓದಬೇಕು ಎಂದು ಸಲಹೆ ಮಾಡಿದರು.

ಹೋರಾಟಗಳಿಗೆ ವಿಶ್ವಾಸಾರ್ಹತೆಯ ಕೊರತೆ

ದಲಿತ ಸಂಘಟನೆಗಳ ಮುಂದಿರುವ ಸವಾಲುಗಳು ಕುರಿತು ವಿಷಯ ಮಂಡಿಸಿದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್‌ ಮಾತನಾಡಿ, ದಲಿತ ಸಂಘರ್ಷ ಸಮಿತಿ ಹಾಗೂ ಬಹುಜನ ಚಳವಳಿ ಬಹುದೊಡ್ಡ ಹೋರಾಟವನ್ನು ರೂಪಿಸಿವೆ ಎಂಬುದು ನಿಜ. ಆದರೆ ಪ್ರಸ್ತುತ ಹೋರಾಟಗಳಿಗೆ ವಿಶ್ವಾಸಾರ್ಹತೆಯ ಕೊರತೆ ಕಾಡುತ್ತಿದೆ ಎಂದರು.

ಜಾತಿ ದೌರ್ಜನ್ಯಗಳು ಹೆಚ್ಚಿರುವ ಪ್ರಸ್ತುತ ಸಂದರ್ಭದಲ್ಲಿ ಹೋರಾಟದ ಸ್ವರೂಪ ಬದಲಿಸಬೇಕಾದ ಅಗತ್ಯತೆ ಇದೆ. ಅಂಬೇಡ್ಕರ್‌ ಅವರಂತೆ ಮಾನವೀಯ ಸ್ವಾತಂತ್ರ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದು ಅವರು ಹೇಳಿದರು.

ಆದರೆ ಸಂಘಟನೆಗಳು ಅಧಿಕಾರ ಮತ್ತಿತರ ಆಮಿಷಗಳಿಗೆ ಬಲಿಯಾಗುವುದರಿಂದ ಸಾರ್ವಜನಿಕವಾಗಿ ಬೆಂಬಲ ಸಿಗುತಿಲ್ಲ. ಆದ್ದರಿಂದ ಹೋರಾಟಗಾರರು, ಮಾಧ್ಯಮಗಳು ಸದಾ ವಿರೋಧಪಕ್ಷದಂತೆ ಕೆಲಸ ಮಾಡಿದರೆ ಮಾತ್ರ ನೈಜ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದು ಅವರು ಹೇಳಿದರು.

ಪರ್ಯಾಯ ಆಗಲಿಲ್ಲ

ಸನ್ಮಾನ ಸ್ವೀಕರಿಸಿದ ದಲಿತ ಹೋರಾಟಗಾರ ಹರಿಹರ ಆನಂದಸ್ವಾಮಿ ಮಾತನಾಡಿ, ಎಲ್ಲಾ ಚಳವಳಿಗಳ ತಾಯಿಯಾದ ದಲಿತ ಹೋರಾಟ ಪರ್ಯಾಯ ವ್ಯವಸ್ಥೆ ಆಗಬೇಕಿತ್ತು. ಆದರೆ ನಾಯಕರಿಂದಾಗಿ ಚಳವಳಿ ದಿಕ್ಕು ತಪ್ಪಿದ್ದರಿಂದಾಗಿ ಆ ಕೆಲಸ ಆಗಲಿಲ್ಲ ಎಂದರು.

ಮತ್ತೊರ್ವ ಸನ್ಮಾನಿತ ಚಿಕ್ಕಂದಾನಿ ಮಾತನಾಡಿ, ಅಂಬೇಡ್ಕರ್‌ ಅವರ ಆಶಯಗಳಂತೆ ದಲಿತ ವರ್ಗದ ನೌಕರರಿಗೆ ಸಂವಿಧಾನಬದ್ಧವಾದ ಹಕ್ಕುಗಳನ್ನು ಕೊಡಿಸುವುದಕ್ಕಾಗಿ ಶ್ರಮ ಮತ್ತು ಶಿಸ್ತುನಿಂದ ಹೋರಾಟ ಮಾಡಿದ್ದರಿಂದ ಸಂಘಟನೆ ಈ ಸಾಧನೆ ಮಾಡಲು ಕಾರಣವಾಯಿತು ಎಂದರು.

ಪ್ರೇಮಾ ಬೋದಿ ಮಾತನಾಡಿದರು. ದಲಿತ ವೆಲ್ಬೇರ್‌ ಟ್ರಸ್ಟ್‌ ಅಧ್ಯಕ್ಷ ಎಚ್‌. ರಾಜು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮುಖ್ಯ ಅತಿಥಿಯಾಗಿದ್ದರು. ಜಯಕುಮಾರ್‌ ಇದ್ದರು.

ಪುರುಷೋತ್ತಮ್‌ ಬುದ್ಧವಂದನೆ ಮೂಲಕ ಪ್ರಾರ್ಥಿಸಿದರು. ಡಾ.ಎಂ. ನಾಗರಾಜು ಸ್ವಾಗತಿಸಿದರು. ಪರಿಷತ್‌ ಅಧ್ಯಕ್ಷ ಡಾ.ಟಿ.ಎಂ. ಮಹೇಶ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಸನ್ಮಾನಿತರನ್ನು ಡಿ.ಟಿ. ಸಿದ್ದಸ್ವಾಮಿ, ನಂಜುಂಡಸ್ವಾಮಿ ಪರಿಚಯಿಸಿದರು. ಶಿವಸ್ವಾಮಿ ವಂದಿಸಿದರು. ಸುರೇಂದ್ರಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.