ಮಾಗಡಿ: ಜನಪದ ಸಾಹಿತ್ಯ ಅಳಿವಿನಂಚಿನಲ್ಲಿದೆ ಎಂಬ ಅಭಿಪ್ರಾಯ ಸರಿಯಲ್ಲ, ಪುಣ್ಯಭೂಮಿ ಮಾಗಡಿ ನೆಲದಲ್ಲಿ ಮೂಲಜನಪದ ಕಲಾವಿದರಿದ್ದು, ದೇಶವಿದೇಶಗಳನ್ನು ಸುತ್ತಿ ಜನಪದ ಸಂಗೀತ, ಸಾಹಿತ್ಯ, ಪ್ರದರ್ಶನ ಕಲೆಗಳನ್ನು ಪ್ರದರ್ಶಿಸುವ ಮೂಲಕ ಮೂಲ ಪರಂಪರೆ ಉಳಿಸಲು ಶ್ರಮಿಸುತ್ತಿರುವ ಜೋಗಿಲ ಸಿದ್ದರಾಜು ಅವರು ಮಂಡಿಸಿದ್ದ ಪ್ರಬಂದಕ್ಕೆ ಪಿಎಚ್.ಡಿ ಲಭಿಸಿರುವುದು ಸಂತಸ ತಂದಿದೆ ಹಿರಿಯ ವಕೀಲ ಪ್ರಕಾಶ್ ಎಂದು ಹೇಳಿದರು.
ತಾಲೂಕಿನ ಸಾವನದುರ್ಗ ಜಂಗಲ್ ರೆಸಾರ್ಟನಲ್ಲಿ ಬೆಂಗಳೂರಿನ ನಾಗರಬಾವಿ ಕ್ಲಬ್ ಮತ್ತು ಮಾಗಡಿ ಕ್ಲಬ್ ಸಂಸ್ಥಾಪಕ ಹಾಗೂ ಹಿರಿಯ ವಕೀಲ ಪ್ರಕಾಶ್, ಸಂಸ್ಕೃತಿ ಚಿಂತಕ ಮಲ್ಲಿಗೆ ಜಗದೀಶ್ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜಾನಪದ ಗಾಯಕ ಡಾ.ಜೋಗಿಲ ಸಿದ್ದರಾಜು ಮಂಡಿಸಿದ್ದ ಜನಪ್ರಿಯ ಜನಪದ ಗೀತೆಗಳು ಪರಂಪರೆ ಮತ್ತು ಪ್ರಯೋಗ ಎಂಬ ಪ್ರಬಂಧಕ್ಕೆ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಡಾಕ್ಟರ್ ಆಫ್ ಲಿಟರೇಚರ್ (ಡಿ,ಲಿಟ್ )ಪದವಿಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.ಜಾನಪದ ಗಾಯಕ ಡಾ.ಜೋಗಿಲ ಸಿದ್ದರಾಜು ಮಾತನಾಡಿ, ನಮ್ಮ ಅಮ್ಮ ಹಾಡುತ್ತಿದ್ದ ಜೋಗುಳ ಪದಗಳನ್ನು ಕೇಳಿಸಿಕೊಂಡು ಬೆಳೆದವನು ನಾನು. ಜನಪದ ದೈವಗಳ ಕಥನ ಕಾವ್ಯ, ಸೋಬಾನೆ ಪದ, ದೇವರ ಪದ, ಬಳೆಗಾರ ಚೆನ್ನಯ್ಯನ ಪದ, ಮಂಟೇಸ್ವಾಮಿ, ಜುಂಜಪ್ಪ, ಮಲೆಮಹದೇಶ್ವರ, ಸಿದ್ದಪ್ಪಾಜಿ, ಬಯಲುಸೀಮೆಯ ತಿಪ್ಪೇಸ್ವಾಮಿ, ಕಾಡುಗೊಲ್ಲರ, ಇರುಳಿಗ, ಸೋಲಿಗ, ಮೇದ, ಭೈರವನ ಪದಗಳನ್ನು ಕೇಳಿಸಿಕೊಂಡು ಮೂಲ ಜನಪದದಲ್ಲಿ ಹಾಡುವ ಮೂಲಕ 18 ದೇಶಗಳನ್ನು ಸುತ್ತಿ ಬಂದಿದ್ದೇನೆ. ಕೆಂಪೇಗೌಡರ ಮಾಗಡಿ ಸೀಮೆಯಲ್ಲಿ ಗೆಳೆಯರು ಅಭಿನಂದಿಸಿದ್ದು ತುಂಬಾ ಸಂತೋಷ ತಂದಿದೆ.ಇನ್ನೂ ಜವಾಬ್ದಾರಿ ಹೆಚ್ಚಿದೆ ಎಂದರು.
ಈ ವೇಳೆ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ದೊಡ್ಡಬಾಣಗೆರೆ ಮಾರಣ್ಣ, ಮಲ್ಲಿಗೆ ಜಗದೀಶ್, ಬಿಡಿಎ ಚಿಕ್ಕಣ್ಣ, ಆನಂದ್.ಕೆ, ಪ್ರಕಾಶ್, ಹರೀಶ್, ಶರವಣ, ಲೋಕೇಶ್, ವಕೀಲ ಚಂದ್ರಶೇಖರ್, ಯತೀಶ್, ಜಿ.ವೆಂಕಟೇಶ್, ಅಂಜನಮೂರ್ತಿ, ಶಂಕರೇಗೌಡ, ಅಣ್ಣಾಜಿಗೌಡ ಇತರರು ಪಾಲ್ಗೊಂಡಿದ್ದರು.