ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೊರಟಗೆರೆ ಪಟ್ಟಣದ ೪ನೇ ವಾರ್ಡ್‌ನ ಹಿಂದುಳಿದ ಬಲಿಜ ಸಮುದಾಯದ ಕೆ.ಎಸ್.ಲಕ್ಷ್ಮೀಶ್ ಸಿವಿಲ್ ನ್ಯಾಯಧೀಶರ ಪರೀಕ್ಷೆಯಲ್ಲಿ ೨೫ ರ್‍ಯಾಂಕ್ ಗಳಿಸಿದ ಹಿನ್ನೆಲೆ ತಾಲೂಕು ಬಲಿಜ ಸಮುದಾಯದಿಂದ ಸನ್ಮಾನಿಸಲಾಯಿತು.

ಪಟ್ಟಣದ ೪ನೇ ವಾರ್ಡ್‌ನ ಗಿರಿನಗರದ ವಾಸಿ ಶ್ರೀನಿವಾಸ ಮತ್ತು ಯಶೋಧಮ್ಮ ಅವರ ೪ನೇ ಪುತ್ರ ಕೆ.ಎಸ್.ಲಕ್ಷ್ಮೀಶ್ ಅವರು ೨೦೨೫-೨೬ ಸಾಲಿನಲ್ಲಿ ನಡೆದ ಸಿವಿಲ್ ನ್ಯಾಯಧೀಶರ ಪರೀಕ್ಷೆಯಲ್ಲಿ ೨೫ ನೇ ರ್‍ಯಾಂಕ್ ಪಡೆದು ಸಿವಿಲ್ ನ್ಯಾಯಧೀಶರಾಗಿ ಅಯ್ಕೆಯಾಗಿದ್ದಾರೆ. ತಂದೆ ಶ್ರೀನಿವಾಸ್ ಸಾಮಿಲ್‌ನಲ್ಲಿ ಮರಕೂಯ್ಯುವ ಕೆಲಸ, ತಾಯಿ ಯಶೋಧಮ್ಮ ಮನೆಯಲ್ಲಿ ಬೀಡಿ ಸುತ್ತುವ ಕೆಲಸ ಮಾಡುತ್ತಾರೆ. ಮೂರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗುವಿನೊಂದಿಗೆ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದು, ಇತ್ತೀಚೆಗೆ ಒಂದು ಪುಟ್ಟ ಮನೆ ಕಟ್ಟಕೊಂಡಿದ್ದಾರೆ. ಕೆ.ಎಸ್.ಲಕ್ಷ್ಮೀಶ್ ಮಾತನಾಡಿ, ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ನನ್ನ ತಂದೆ ತಾಯಿ ಸಾಕಷ್ಟು ಕಷ್ಟಟ್ಟು ಓದಿಸಿದ್ದಾರೆ. ನನಗೆ ಆಶೀರ್ವಾದ ಮಾಡಿದ್ದಾರೆ. ನನ್ನ ಸಾಧನೆಗೆ ಅವರ ಶ್ರಮ ದೊಡ್ಡದು. ಆದ್ದರಿಂದಲೇ ಈ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆಯಲು ಕಾರಣವಾಯಿತು ಎಂದು ಹೇಳಿದರು.

ಕೆ.ಎಸ್. ಲಕ್ಷ್ಮೀಶ್ ತಂದೆ ಶ್ರೀನಿವಾಸ್ ಹಾಗೂ ತಾಯಿ ಯಶೋಧಮ್ಮ ಮಾತನಾಡಿ, ಅವನು ಇವತ್ತು ಸಮಾಜದಲ್ಲಿ ಸ್ಥಾನ ಗಳಿಸಿರುವುದು ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ನವಿನ್, ನಿರ್ದೇಶಕರುಗಳಾದ ಕೆ.ವಿ.ಪುರುಷೋತ್ತಮ, ಕೆ.ಅರ್.ತಿಮ್ಮರಾಜು, ಗೋವಿಂದಪ್ಪ, ಯುವ ಬಲಿಜ ಸಂಘದ ದೇವರಾಜು ಸನ್ಮಾನಿಸಿದರು.