Congratulatory ceremony for Dr. Ajay Singh on August 23rd

ಕನ್ನಡಪ್ರಭ ವಾರ್ತೆ ಜೇವರ್ಗಿ

ಡಾ. ಅಜಯಸಿಂಗ್ ಅವರು ನೂತನ ಸಚಿವರಾದ ನಂತರ ಪ್ರಥಮ ಬಾರಿಗೆ ಜೇವರ್ಗಿಗೆ ಆಗಮಿಸುವ ಸಚಿವರಿಗೆ ಜೇವರ್ಗಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ್ ಇಜೇರಿ ತಿಳಿಸಿದ್ದಾರೆ.

ಅವರು ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿ, ಆ.22 ರಂದು ಕಲಬುರಗಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆ. 23 ರಂದು ಭಾನುವಾರ ಜೇವರ್ಗಿ ನಗರಕ್ಕೆ ಆಗಮಿಸಲಿದ್ದು, ಕಟ್ಟಿಸಂಗಾವಿಯಿಂದ ಬೈಕ್ ರ‍್ಯಾಲಿ ನಡೆಯಲಿದೆ.

ರ‍್ಯಾಲಿಯು ಅಖಂಡೇಶ್ವರ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಸಾರೋಟದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಎಪಿಎಂಸಿ ಯಾರ್ಡ್‌ನಲ್ಲಿ ಅಭಿನಂದನಾ ಕಾರ‍್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ‍್ಯಕರ್ತರು, ಮುಖಂಡರು, ಡಾ.ಅಜಯ ಧರ್ಮಸಿಂಗ್ ಅಭಿಮಾನಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಗುರುಲಿಂಗಪ್ಪಗೌಡ ಪಾಟೀಲ್ ಆಂದೋಲಾ, ಗೌಡಪ್ಪಗೌಡ ಪಾಟೀಲ್, ಸಕ್ರೇಪ್ಪಗೌಡ ಹರನೂರ, ಖಾಸಿಂ ಪಟೇಲ್ ಮುದಬಾಳ, ಚಂದ್ರಶೇಖರ ಹರನಾಳ, ಅಬ್ದುಲ್ ರಹಿಮಾನ ಪಟೇಲ್, ನೀಲಕಂಠ ಅವಂಟಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಜೋಗೂರ, ಶಿವಶರಣಪ್ಪ ಕೋಬಾಳ, ಮಹಿಮೂದ ನೂರಿ, ಮಲ್ಲಾರಾವ ಕುಲಕರ್ಣಿ, ಮರೇಪ್ಪ ಸರಡಗಿ, ನಾಗರಾಜ ಹಾಲಗೂರ, ರಿಯಾಜ್ ಪಟೇಲ್ ಮುದಬಾಳ, ಸಲ್ಲಿಂ ಕಣ್ಣಿ, ಬಸಣ್ಣ ಸರ್ಕಾರ ಇದ್ದರು.