ಕನ್ನಡ ಪ್ರಭ ವಾರ್ತೆ ಶನಿವಾರಸಂತೆ

ಪ್ರತಿಯೊಬ್ಬರೂ ತನ್ನ ಕೆಲಸ ಕಾರ್ಯ ಮತ್ತು ಜವಾಬ್ದಾರಿಯ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಂಡರೆ ಮಾತ್ರ ತಾನು ಕೆಲಸ ಮಾಡುತ್ತಿರುವ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ.ಜಯಕುಮಾರ್ ಅಭಿಪ್ರಾಯ ಪಟ್ಟರು.

ಅವರು ಸಮೀಪದ ದುಂಡಳ್ಳಿ ಗ್ರಾ.ಪಂ.ಯ ಡಿಜಿಟಲ್ ಗ್ರಂಥಾಲಯದ ವತಿಯಿಂದ ಗ್ರಂಥಾಲಯದ ಸಲಹ ಸಮಿತಿ ಸದಸ್ಯರಿಗೆ ಮತ್ತು ಗ್ರಾ.ಪಂ.ಆಡಳಿತ ಮಂಡಳಿ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಾರ್ವಜನಿಕ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವರಿಗೆ ಸ್ಥಾನಮಾನ ಬೇಕಾಗುತ್ತದೆ. ಆದರೆ ತನ್ನ ಜವಾಬ್ದಾರಿಯನ್ನು ಮರೆಯುತ್ತಾರೆ. ಇದರಿಂದ ತಾನು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಅಭಿವೃದ್ಧಿ ಹೊಂದುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತನ್ನ ಜವಾಬ್ದಾರಿಯ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡರೆ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬಹುದು ಎಂದು ಹೇಳಿದರು. ಗ್ರಾ.ಪಂ.ಯೊಂದರ ಅಧೀನದಲ್ಲಿರುವ ಗ್ರಂಥಾಲಯವನ್ನು ಅಭಿವೃದ್ಧಿ ಪಡಿಸಿ ಅತಿ ಹೆಚ್ಚು ಓದುಗರನ್ನು ಸಂಪಾದಿಸಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯ ಪ್ರಶಸ್ತಿಗೆ ಭಾಜನರಾದ ಸದರಿ ಗ್ರಂಥಾಲಯದ ಮೇಲ್ವಿಚಾರಕಿ ದಿವ್ಯ ಅವರ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಭವಾನಿ ಗುರು ಮಾತನಾಡಿ, ಸದರಿ ಗ್ರಂಥಾಲಯವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮೂಲಕ ಕೊಡಗು ಜಿಲ್ಲೆಯಲ್ಲಿ ಗಮನ ಸೆಳೆದಿರುವ ಮತ್ತು ರಾಜ್ಯ ಪ್ರಶಸ್ತಿ ಪಡೆದುಕೊಂಡಿರುವ ಗ್ರಂಥಾಲಯವಾಗಿದೆ. ಆದರೆ ಗ್ರಂಥಾಲಯ ಇಕ್ಕಡವಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಮನಗಂಡ ನಮ್ಮ ಗ್ರಾ.ಪಂ.ಯಿಂದ 2 ಲಕ್ಷ ರು ಅನುದಾನ ಬಿಡುಗಡೆಗೊಳಿಸಿ ಗ್ರಂಥಾಲಯದ ಕಟ್ಟಡವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.


ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಗ್ರಂಥಾಲಯವು ಓದುಗರು, ವಿದ್ಯಾರ್ಥಿಗಳು, ಸಲಹ ಸಮಿತಿಯವರು, ಸದರಿ ಗ್ರಾ.ಪಂ.ಯ ಆಡಳಿತ ಮಂಡಳಿಯವರು ಮತ್ತು ಗ್ರಾ.ಪಂ.ಅಧಿಕಾರಿಗಳ ಸಹಕಾರದಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ನಮ್ಮ ಗ್ರಂಥಾಲಯದಲ್ಲಿ 2 ಸಾವಿರಕ್ಕಿಂತ ಹೆಚ್ಚಿನ ಓದುಗರ ಸದಸ್ಯರಿದ್ದು ವಿದ್ಯಾರ್ಥಿಗಳಿಗೆ ಉಚಿತ ಸದಸ್ಯತ್ವ ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿಡಿಒ ಆಯಿಷಾ, ಗ್ರಾ.ಪಂ. ಸದಸ್ಯರಾದ ಸಿ.ಜೆ.ಗಿರೀಶ್, ಪೂರ್ಣಿಮಾ ಕಿರಣ್, ಹಿರಿಯ ಸಲಹಾ ಸಮಿತಿ ಸದಸ್ಯ ಬಿ.ಬಿ.ನಾಗರಾಜ್ ಮಾತನಾಡಿದರು. ಸಮಾರಂಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಗೋಪಿಕಾ, ಗ್ರಾ.ಪಂ.ಯ ಸದಸ್ಯರು ಮತ್ತು ಸಲಹಾ ಸಮಿತಿಯ ಸದಸ್ಯರು, ಗ್ರಾ.ಪಂ.ಸಿಬ್ಬಂದಿ, ಗ್ರಂಥಾಲಯ ಸಿಬ್ಬಂದಿ ಹಾಜರಿದ್ದರು.