ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಸ್ಥಾನದ ಎ ವರ್ಗದ ನಾಲ್ಕು, ಬಿ ವರ್ಗದ ಎಂಟು ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು.ಎ ವರ್ಗದ ಎರಡು ಮತಗಳ ಎಣಿಕೆಯನ್ನು ನ್ಯಾಯಾಲಯದ ಆದೇಶದ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ. ಎ ವರ್ಗದ ಕಾಂಗ್ರೆಸ್ ಬೆಂಬಲಿತ ಮೂರು ಅಭ್ಯರ್ಥಿಗಳು ತಲಾ 11 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಮತ್ತೊಬ್ಬರು 10 ಮತಗಳನ್ನು ಪಡೆದಿದ್ದಾರೆ.
ಬಿ ವರ್ಗದ 8 ಸ್ಥಾನಗಳನ್ನು ಬಿಜೆಪಿ- ಜೆಡಿಎಸ್ ಬೆಂಬಲಿತ ಮೈತ್ರಿ ಅಭ್ಯರ್ಥಿಗಳು ಭರ್ಜರಿ ಗೆಲವು ಪಡೆದುಕೊಂಡರು.ಮನುಗನಹಳ್ಳಿ ಹಾಗೂ ಕ್ಯಾತನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡೆಲಿಕೇಟ್ ಗಳ ರಾಜೀನಾಮೆ ಪ್ರಹಸನ ನ್ಯಾಯಾಲಯದಲ್ಲಿ ಇರುವುದರಿಂದ, ಈ ಎರಡು ಮತ ಎಣಿಕೆ ಪೂರ್ಣಗೊಳ್ಳದ ಕಾರಣ ಫಲಿತಾಂಶ ಪ್ರಕಟಗೊಂಡಿಲ್ಲ. ಬಿ ವರ್ಗದ ಜೆಡಿಎಸ್ ,ಬಿಜೆಪಿ ಮೈತ್ರಿ ಅಭ್ಯರ್ಥಿಗಳಾದ ಅರವಿಂದ, ನೂರ್ ಮೊಹಮ್ಮದ್, ಬಸವರಾಜಪ್ಪ, ಭುಜಂಗನಾಯಕ, ಮಾದಯ್ಯ, ವೈಲಾ ನಂಜಪ್ಪ, ಶಿವಮಲ್ಲಪ್ಪ, ಶುಭಮಂಗಳ ಜಯಗಳಿಸಿದರು.
ಪ್ರತಿಸ್ಪರ್ಧಿಗಳಾದ ಬಿ ವರ್ಗದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗದ ಗೌರಮ್ಮ, ಬಸವರಾಜಪ್ಪ, ಭುಜಂಗನಾಯಕ, ಮಹದೇವಮ್ಮ, ಮಹೇಶ, ಎಸ್.ಎಸ್.ರಾಮಚಂದ್ರ, ಶಿವಣ್ಣ, ಸೋಮೇಗೌಡ ಪರಾಭವಗೊಂಡರು.
ಟಿಎಪಿಎಂಸ್ ಚುನಾವಣೆಯಲ್ಲಿ ಎಂ.ಡಿ.ಮಂಚಯ್ಯ ಅವರಿಗೆ ಮತದಾನದ ಹಕ್ಕು ಇದ್ದರೂ ಉದ್ದೇಶಪೂರ್ವಕವಾಗಿ ಚುನಾವಣಾಧಿಕಾರಿ ಹಕ್ಕನ್ನು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಒಂದು ಘಂಟೆಗೂ ಹೆಚ್ಚಿನ ಕಾಲ, ಚುನಾವಣಾಧಿಕಾರಿ ಶ್ರೀನಿವಾಸ್ ಹಾಗೂ ರೇಣುಕಾ ವಿರುದ್ಧ ಜೆಡಿಎಸ್ ಬೆಂಬಲಿಗರು ಮತದಾನ ಕೇಂದ್ರದ ಸಮೀಪ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಮೈತ್ರಿ ಬೆಂಬಲಿಗರು ಹಾಗೂ ಮುಖಂಡ ಕೆ.ಎಂ.ಕೃಷ್ಣನಾಯಕ ಮತ್ತು ದಲಿತ ಸಂಘಟನೆಗಳ ಮುಖಂಡರು ಚುನಾವಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆಯಿತು.
ಹುಣಸೂರು ಉಪವಿಭಾಗದ ಡಿವೈಎಸ್ಪಿ ರವಿ ಮಾರ್ಗದರ್ಶನದಲ್ಲಿ ಇನ್ ಸ್ಪೆಕ್ಟರ್ ಗಂಗಾಧರ್, ಸಬ್ ಇನ್ಸ್ ಪೆಕ್ಟರ್ ಚಿಕ್ಕನಾಯಕ, ಕಿರಣ್ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.