ಕನ್ನಡಪ್ರಭ ವಾರ್ತೆ ಮೈಸೂರು

ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜೂ.21 ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಬಿ.ಕೆ. ಹರಿಪ್ರಸಾದ್ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿ ಗುರುವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಸೂರ್ಯ ತನ್ನ ಪಥ ಬದಲಾಯಿಸುವ ಹಾಗೆ ಕಾಂಗ್ರೆಸ್ ಪಕ್ಷದಲ್ಲಿ 3 ಮಂದಿ ಪ್ರಮುಖರು ತಮ್ಮ ಪತ ಬದಲಿಸಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರವನ್ನು ಹಸ್ತಾಂತರ ಮಾಡಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿದ್ದಾರೆ. ಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದರು.ಹೀಗಾಗಿ, ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಈ ಮೂರು ಮಂದಿಗೆ ಅಭಿನಂದನಾ ನಿರ್ಣಯವನ್ನು ಅಂಗೀಕರಿಸಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯನ್ನು ಸಭೆಗೆ ಮಂಡಿಸಿ, ಎಲ್ಲರೂ ಒಮ್ಮತದಿಂದ ಕೈ ಎತ್ತುವ ಮೂಲಕ ಅನುಮೋದನೆ ಪಡೆದರು.ಜೂ.21ರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 11 ವಿಧಾನಸಭಾ ಕ್ಷೇತ್ರದಿಂದ ಕಾರ್ಯಕರ್ತರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂಬ ಕೆಪಿಸಿಸಿ ಸುತ್ತೋಲೆಯನ್ನ ಮಂಡಿಸಿದರು. ಚುನಾವಣೆಗೆ ಇನ್ನು ಕೇವಲ ಎರಡು ವರ್ಷಗಳು ಬಾಕಿ ಇದ್ದು ಪಕ್ಷದಲ್ಲಿ ದುಡಿದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಮಾಡಿಕೊಡಬೇಕೆಂದು ಸಭೆಯ ಮೂಲಕ ಸರ್ಕಾರವನ್ನ ಒತ್ತಾಯಿಸಿದರು.ನಗರಾಧ್ಯಕ್ಷ ಆರ್. ಮೂರ್ತಿ ಮಾತನಾಡಿ, ಆರ್ ಎಸ್ಎಸ್ ವಿರುದ್ಧದ ಗಟ್ಟಿ ಧ್ವನಿ ಬಿ.ಕೆ. ಹರಿಪ್ರಸಾದ್ ಎಂದು ಹೇಳಿ, ಈ ಸಂದರ್ಭದಲ್ಲಿ ನಾವು ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಆರ್ ಎಸ್ಎಸ್ ಲೆಕ್ಕ ಕೊಡುತ್ತಿಲ್ಲ, ನೋಂದವಣೆ ಮಾಡುತ್ತಿಲ್ಲ. ಈಗ ಬಿಜೆಪಿ ಮತ್ತು ಆರ್ ಎಸ್ಎಸ್ ಗೆ ಭಯ ಶುರು ಆಗಿದೆ ಎಂದರು.ವಿಧಾನಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಶಾಸಕ ಡಾ. ಭಾರತಿಶಂಕರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸೋಮಣ್ಣ, ಸತೀಶ್ ಕುಮಾರ್, ರವಿ ಮಂಚೇಗೌಡನಕೊಪ್ಪಲು, ಡಿ. ನಾಗಭೂಷಣ್, ಮಾಜಿ ಮೇಯರ್ ಗಳಾದ ಚಿಕ್ಕಣ್ಣ, ಪುಷ್ಪಲತಾ ಜಗನ್ನಾಥ್, ಪುಷ್ಪಲತಾ ಚಿಕ್ಕಣ್ಣ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಪುಷ್ಪವಲ್ಲಿ, ಮುಖಂಡರಾದ ಪ್ರೇಮಾ ಶಂಕರ್, ಮಂಜುನಾಥ್, ಎಂ. ಶಿವಣ್ಣ, ಶಿವಪ್ರಸಾದ್, ಎಸ್. ಸಿದ್ದಯ್ಯ, ಈಶ್ವರ್ ಚಕ್ಕಡಿ, ಮೋಹನ್, ಗಿರೀಶ್, ಎಂ.ಕೆ. ಅಶೋಕ್, ವೆಂಕಟೇಶ್, ರಮೇಶ್, ಸುನಂದಕುಮಾರ್, ಪ್ರೇಮಕುಮಾರಿ, ರಾಜೇಶ್ವರಿ, ಶಿವಮಾದು, ಮಧುಕುಮಾರ್, ಮಹದೇವು, ಮಹೇಶ್ ಮೊದಲಾದವರು ಇದ್ದರು.