ಕೇಂದ್ರ ಸರ್ಕಾರ ಸಾರ್ವಜನಿಕರ ಜೀವನೋಪಾಯ ಹಕ್ಕು ಕಸಿದುಕೊಂಡಿದೆ. ಮಹಾತ್ಮ ಗಾಂಧೀಜಿಯವರ ಹೆಸರು ಅಳಿಸುವ ಪ್ರಯತ್ನ ಮಾಡಿದೆ. ಮನರೇಗಾ ಉಳಿಸಲು ಜ.5 ರಿಂದ ಇಡೀ ರಾಜ್ಯ, ಜಿಲ್ಲೆ ಹಾಗೂ ತಾಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕೆಪಿಸಿಸಿ ಮಾದ್ಯಮ ವಕ್ತಾರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಲಕ್ಷ್ಮಣ ಹಟ್ಟಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬಾದಾಮಿ
ಕೇಂದ್ರ ಸರ್ಕಾರ ಸಾರ್ವಜನಿಕರ ಜೀವನೋಪಾಯ ಹಕ್ಕು ಕಸಿದುಕೊಂಡಿದೆ. ಮಹಾತ್ಮ ಗಾಂಧೀಜಿಯವರ ಹೆಸರು ಅಳಿಸುವ ಪ್ರಯತ್ನ ಮಾಡಿದೆ. ಮನರೇಗಾ ಉಳಿಸಲು ಜ.5 ರಿಂದ ಇಡೀ ರಾಜ್ಯ, ಜಿಲ್ಲೆ ಹಾಗೂ ತಾಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕೆಪಿಸಿಸಿ ಮಾದ್ಯಮ ವಕ್ತಾರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಲಕ್ಷ್ಮಣ ಹಟ್ಟಿ ತಿಳಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಕಾಂಗ್ರೆಸ್ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಮಹತ್ವದ ಮನರೇಗಾ ಯೋಜನೆಯಿಂದ ಗ್ರಾಮೀಣ ಭಾಗದ ಬಡವರು, ಕೂಲಿ ಕಾರ್ಮಿಕರು ಕೆಲಸ ಮಾಡಿ ವೇತನ ಪಡೆಯುತ್ತಿದ್ದರು. ಆದರೆ ಈಗ ಕೇಂದ್ರದ ಮೋದಿಜಿ ಸರಕಾರ ಈ ಹಕ್ಕನ್ನು ಸೆಕ್ಷನ್-45 ಪ್ರಕಾರ ಸಂಪೂರ್ಣವಾಗಿ ನಾಶಪಡಿಸಲು ಹೊರಟಿದೆ. ಜೀವನೋಪಾಯದ ಹಕ್ಕು, ಪಂಚಾಯಿತಿಗಳ ವಿಕೇಂದ್ರೀಕರಣದ ಹಕ್ಕು,ರಾಜ್ಯ ಸರಕಾರಗಳಿಗೆ ನೀಡಿರುವ ಹಕ್ಕು ಕಸಿದುಕೊಂಡು ಇಡೀ ದೇಶದ ರೈತಾಪಿ ವರ್ಗಕ್ಕೆ/ ಕೃಷಿ ಚಟುವಟಿಕೆಗಳಿಗೆ ದೊಡ್ಡ ಅನ್ಯಾಯ ಮಾಡಿದೆ. ಜಾಬ್ ಕಾರ್ಡಗಳಲ್ಲಿ ಬದಲಾವಣೆ ತರಲು ಹೊರಟಿದ್ದಾರೆ. ಸಣ್ಣ, ಅತಿ ಸಣ್ಣ ರೈತರು ದೊಡ್ಡವರ ಕೆಲಸಗಳಿಗೆ ಹೋಗುವಂತೆ ಮಾಡುತ್ತಿದೆ. ಮಹಾತ್ಮ ಗಾಂಧೀಜಿಯವರ ಹೆಸರನ್ನು ಬದಲಾಯಿಸುವ ಅನಿವಾರ್ಯ ಏನಿತ್ತು? ಎಂದು ಪ್ರಶ್ನಿಸಿರುವ ಅವರು, ಈ ದೇಶಕ್ಕೆ ಸ್ವತಂತ್ರ್ಯ ತಂದುಕೊಟ್ಟ ಮಹಾತ್ಮರನ್ನು ಪಕ್ಷಾತೀತವಾಗಿ ಮುಂದುವರಿಸಬಹುದಿತ್ತು. ಮೋದಿಜಿಯವರು ಜಿ ರಾಮಜಿ ಕಾಯ್ದೆ ಮೂಲಕ ರಾಜ್ಯಗಳ ಮತ್ತು ದೇಶದ ಬಡಜನರ ಮೇಲೆ ವಿನಾಶ ಕಾರಣ ದಾಳಿ ನಡೆಸಿದ್ದಾರೆ ಎಂದು ಮಹಾಂತೇಶ ಹಟ್ಟಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.