ಸಾರಾಂಶ
ಮದ್ದೂರು : ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಕ್ಷೇತ್ರ ವ್ಯಾಪ್ತಿಯ ಕೆಸ್ತೂರು, ಕಸಬಾ, ಚಾಮನಹಳ್ಳಿ ಹಾಗೂ ಬೆಸಗರಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶಾಸಕ ಉದಯ್ ಹಾಗೂ ಪಕ್ಷದ ಜಿಲ್ಲಾ ಮತ್ತು ತಾಲೂಕು ಮುಖಂಡ ರೊಂದಿಗೆ ಪ್ರಚಾರ ನಡೆಸಿದರು.
ನಂತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಸ್ಟಾರ್ ಚಂದ್ರು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕಾರಿಯಾಗಿದೆ ಎಂದರು.
ನಾನು ಮತ್ತು ಶಾಸಕ ಉದಯ್ ಜನಸೇವೆ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇವೆ ಹೊರತು ಹಣ ಮಾಡಲು ಅಲ್ಲ. ಸರ್ಕಾರ ಶಾಸಕರ ಕ್ಷೇತ್ರ ಅಭಿವೃದ್ಧಿಗೆ ನೀಡುವ ಅನುದಾನ ಜೊತೆಗೆ ಸಂಸದರ ನಿಧಿಯನ್ನು ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು ಇತರೆ ಲೋಕಸಭಾ ಕ್ಷೇತ್ರಗಳಿಗೆ ಮಾದರಿಯಾಗಬೇಕು. ರಾಜಕೀಯವಾಗಿ ಮಾತ್ರವಲ್ಲ ಅಭಿವೃದ್ಧಿ ವಿಚಾರದಲ್ಲಿ ಕೂಡ ಮಂಡ್ಯ ಹೆಸರು ಇಂಡಿಯಾದ್ಯಂತ ಕೇಳಬೇಕು. ಆ ರೀತಿ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದರು.
ಮಂಡ್ಯ ಪ್ರಾಕೃತಿಕವಾಗಿ, ರಾಜಕೀಯವಾಗಿ ಸಾಕಷ್ಟು ಹೆಸರುವಾಸಿ. ಜಿಲ್ಲೆಯಲ್ಲಿ ಕೃಷಿಯೇ ಜೀವಾಳ. ಈ ಭಾಗದ ರೈತರ ಕಲ್ಯಾಣಕ್ಕೆ ಕಂಕಣ ಬದ್ಧನಾಗಿದ್ದೇನೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿತಾಣಗಳಿದ್ದು ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿಕೊಡಬೇಕೆಂಬ ಕನಸು ಹೊಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಬಡವರ ದೀನದಲಿತರ ಪರ. ಎಲ್ಲಾ ವರ್ಗದವರನ್ನು ಒಟ್ಟಿಗೆ ಕೊಂಡೊಯ್ಯುವ ಪಕ್ಷ. ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯ, ಆರೋಗ್ಯ ಸೇವೆ ಸೇರಿದಂತೆ ರಾಷ್ಟ್ರದ ಜನತೆಯ ಕಲ್ಯಾಣ ಬಯಸಿ 25 ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ. ಮತದಾರರು ಪ್ರಜ್ಞಾವಂತರಿದ್ದಾರೆ. ಕಾಂಗ್ರೆಸ್ ನ ಜನಪರ ಕಾರ್ಯಕ್ರಮಗಳಿಗೆ ಮನ್ನಣೆ ನೀಡಲಿದ್ದು ನನ್ನನ್ನು ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಕೆ.ಎಂ .ಉದಯ್ ಮಾತನಾಡಿ, ಮಣ್ಣಿನ ಮಕ್ಕಳು ಮತ್ತು ಒಕ್ಕಲಿಗರ ನಾಯಕರೆಂದು ಹೇಳಿಕೊಳ್ಳುವ ದೇವೇಗೌಡ ಮತ್ತು ಅವರ ಕುಟುಂಬದವರು ಒಕ್ಕಲಿಗರ ನಾಯಕರನ್ನು ನಾಶ ಮಾಡಿದ್ದಾರೆ. ಅಲ್ಲದೆ ರೈತರ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಎಂದು ಟೀಕಿಸಿದರು.
ಅದಕ್ಕೂ ಮೊದಲು ಗೊಲ್ಲರದೊಡ್ಡಿಯ ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು. ಮಲ್ಲನಕುಪ್ಪೆ, ಹೂತಗೆರೆ, ಕೆಸ್ತೂರು, ಆತಗೂರು, ಕದಲೂರು, ಹೆಮ್ಮನಹಳ್ಳಿ, ನಿಡಘಟ್ಟ, ಆಲೂರು, ಹೊನ್ನಲಗೆರೆ, ಬೆಳ್ಳೂರು, ಕೊಳಗೆರೆ, ಗೆಜ್ಜಲಗೆರೆ, ವಳಗೆರಹಳ್ಳಿ, ಹೊಸಕೆರೆ, ನಿಲುವಾಗಿಲು, ಬೆಸಗರಹಳ್ಳಿ, ಚಾಮನಹಳ್ಳಿ ಸೇರಿದಂತೆ ಮದ್ದೂರು ತಾಲೂಕಿನಾದ್ಯಂತ ಮತಯಾಚಿಸಿದರು.
ಹಳ್ಳಿಗಳಲ್ಲಿ ರೋಡ್ ಶೋ ವೇಳೆ ನೆರೆದಿದ್ದ ಕಾರ್ಯಕರ್ತರು ಅಭ್ಯರ್ಥಿ ಮೇಲೆ ಹೂ ಮಳೆಯನ್ನೇ ಸುರಿಸಿದರು. ಸುಡುಬಿಸಲನ್ನು ಲೆಕ್ಕಿಸದೇ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಅಭ್ಯರ್ಥಿಯನ್ನು ಕಂಡು ಕೈ ಕುಲುಕಿ ಬೆಂಬಲ ಸೂಚಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕದಲೂರು ರಾಮಕೃಷ್ಣ, ಶಿವಲಿಂಗೇಗೌಡ ಕೆಪಿಸಿಸಿ ವಕ್ತಾರ ತೈಲೂರು ಸತ್ಯಾನಂದ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಚಿದಂಬರಂ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.