ಬಿಜೆಪಿ ಸರ್ಕಾರ ಒಂದೇ ಒಂದು ಕುಟುಂಬಕ್ಕೂ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಿರಲಿಲ್ಲ. ಇದೀಗ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಮಾಲೀಕತ್ವ ನೀಡುತ್ತಿರುವುದು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಕಿಡಿಕಾರಿದರು.
ಹಾನಗಲ್ಲ: ಕರ್ನಾಟಕ ಭೂಸುಧಾರಣಾ ನಿಯಮಗಳಿಗೆ ಹಿಂದಿನ ಬಾರಿ ಸಿದ್ದರಾಮಯ್ಯ ಅವರು ಮಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿಯೇ ತಿದ್ದುಪಡಿ ತರಲಾಗಿತ್ತು. ಆದರೆ, ಈ ಅವಕಾಶ ಬಳಸಿ ಬಿಜೆಪಿ ಸರ್ಕಾರ ಒಂದೇ ಒಂದು ಕುಟುಂಬಕ್ಕೂ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಿರಲಿಲ್ಲ. ಇದೀಗ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಮಾಲೀಕತ್ವ ನೀಡುತ್ತಿರುವುದು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಕಿಡಿಕಾರಿದರು.
ತಾಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ಭೂಗ್ಯಾರಂಟಿ ಕಾರ್ಯಕ್ರಮದಡಿ ೧೯೬ ಫಲಾನುಭವಿಗಳಿಗೆ ಶಾಶ್ವತ ಮನೆ ಮಾಲೀಕತ್ವದ ಹಕ್ಕುಪತ್ರ ವಿತರಿಸಿ ಮಾತನಾಡಿದರು.ಈ ಹಿಂದೆ ಹಾಳೆಯಲ್ಲಿ ಕೈಯಿಂದ ಬರೆದು ಹಕ್ಕುಪತ್ರ ವಿತರಿಸಿ ಕೈ ತೊಳೆದುಕೊಳ್ಳಲಾಗುತ್ತಿತ್ತು. ನಂತರ ಅಧಿಕೃತ ದಾಖಲೆಗಳಿಲ್ಲದೆ ತೊಂದರೆ ಅನುಭವಿಸುವಂತಾಗುತ್ತಿತ್ತು. ಆದರೆ, ಇತಿಹಾಸದಲ್ಲೇ ಮೊದಲ ಬಾರಿ ಅಳಿಸಲಾಗದ, ತಿದ್ದಲಾಗದ ಶಾಶ್ವತ ದಾಖಲೆಗಳನ್ನು ನೀಡಲಾಗುತ್ತಿದೆ. ಆಸ್ತಿ ಖರೀದಿ ನೋಂದಣಿ ಪತ್ರ, ಇ ಸ್ವತ್ತಿನೊಂದಿಗೆ ಸಂಪೂರ್ಣ ಗಣಕೀಕೃತ ಹಕ್ಕುಪತ್ರ ವಿತರಿಸಲಾಗಿದೆ. ಯಾವ ದಾಖಲೆಗಳಿಲ್ಲದೇ ಎರಡು, ಮೂರು ತಲೆಮಾರುಗಳಿಂದ ಸರ್ಕಾರಿ, ಖಾಸಗಿ ಸರ್ವೆ ನಂಬರ್ ಭೂಮಿಯಲ್ಲಿ ವಾಸಿಸುತ್ತಿದ್ದವರೀಗ ಸ್ವತಂತ್ರಗೊಂಡಿದ್ದಾರೆ ಎಂದು ಹೇಳಿದರು.
ಅಂದು ಇಂದಿರಾ ಗಾಂಧಿ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯನಾದರೆ ಇಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ಕೃಷ್ಣ ಭೈರೇಗೌಡ, ಶಿವಾನಂದ ಪಾಟೀಲ ಅವರ ಕಾಲದಲ್ಲಿ ವಾಸಿಸುವನೆ ಮನೆಯ ಒಡೆಯನಾಗಿದ್ದಾನೆ ಎಂದರು.ತಹಸೀಲ್ದಾರ್ ರೇಣುಕಾ ಎಸ್. ಮಾತನಾಡಿ, ಭೂಗ್ಯಾರಂಟಿ ಕಾರ್ಯಕ್ರಮದಡಿ ರಾಜ್ಯದಲ್ಲಿ ಹಕ್ಕುಪತ್ರ ವಿತರಣೆಯಲ್ಲಿ ಹಾನಗಲ್ ತಾಲೂಕು ಮೊದಲ ಸ್ಥಾನದಲ್ಲಿದೆ. ಈಗಾಗಲೇ ಅನುಮೋದನೆಗೊಂಡ ೮ ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಜನಗಣತಿ ಪೂರ್ಣಗೊಂಡ ಬಳಿಕ ಉಳಿದ ಅರ್ಹ ಕುಟುಂಬಗಳಿಗೂ ಹಕ್ಕುಪತ್ರ ವಿತರಿಸಲಾಗುವುದು. ಶಾಸಕರಾದ ಶ್ರೀನಿವಾಸ ಮಾನೆ ಅವರ ಕಳಕಳಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಯ ಪರಿಶ್ರಮದಿಂದ ಸಾವಿರಾರು ಕುಟುಂಬಗಳು ನೆಮ್ಮದಿ ಹೊಂದಿವೆ ಎಂದರು.
ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಮುಖಂಡರಾದ ಶಿವಶಂಕ್ರಯ್ಯ ಹಿರೇಮಠ, ಪ್ರಕಾಶ ಈಳಿಗೇರ, ಗದಿಗಯ್ಯ ಹಿರೇಮಠ, ಪ್ರಶಾಂತ ಕಾಡಪ್ಪನವರ, ಮೆಹಬೂಬ ಅಲಿ ಹುದ್ದಾರ, ಮಹ್ಮದಹಯಾತ್ ಚೌದರಿ, ರವಿ ಬ್ಯಾಲಾಳ, ಜಾವಿದ್ ಎಲಿಗಾರ, ಅಜ್ಮತಖಾನ ಬಾವಾಖಾನವರ, ರಿಯಾಜ್ಅಹ್ಮದ್ ತಹಶೀಲ್ದಾರ್, ರಾಜೇಶ ಗೌಡಗೇರಿ, ನಿಸ್ಸೀಮಪ್ಪ ಗುಳೇದ, ಕೃಷ್ಣ ಉರಣಕರ, ಜಾಫರಸಾಬ ತಹಶೀಲ್ದಾರ್, ಪಾಂಡು ಪೋಪಳೆ, ಈರಪ್ಪ ಬೈಲವಾಳ, ಹನುಮಂತಪ್ಪ ಮರಗಡಿ, ಬಸನಗೌಡ ಪಾಟೀಲ, ಅನಿತಾ ಶಿವೂರ, ಭರಮಣ್ಣ ಶಿವೂರ, ಗನಿ ಪಟೇಲ, ಎಂ.ಎಂ.ನೆಗಳೂರ ಇದ್ದರು.