ಡಿಸೆಂಬರ್‌ ಅಂತ್ಯಕ್ಕೆ ಕಾಂಗ್ರೆಸ್ ಸರ್ಕಾರ ಪತನ : ಕಾರಜೋಳ

| N/A | Published : Jun 30 2025, 12:34 AM IST / Updated: Jun 30 2025, 01:10 PM IST

ಸಾರಾಂಶ

ಹಿಂದಿನ ಸರ್ಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಹೊಸ ಹೆಸರಿನಲ್ಲಿ ಉದ್ಘಾಟನೆ ಮಾಡುವ ಸ್ಥಿತಿ ರಾಜ್ಯ ಸರ್ಕಾರದ್ದು. ನಾಡಿನ ಜನರ ಶಾಪದಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ -  ಗೋವಿಂದ ಎಂ.ಕಾರಜೋಳ 

 ಚಳ್ಳಕೆರೆ :  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರಂತರ ಪರಿಶ್ರಮದಿಂದ ದೇಶದ ಆರ್ಥಿಕ ಸ್ಥಿತಿ 14ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿದೆ. ಇನ್ನೂ ಕೆಲವೇ ದಿನಗಳಲ್ಲಿ 3ನೇ ಸ್ಥಾನಕ್ಕೆ ಏರಲಿದೆ. ವಿಶ್ವ ನಾಯಕರ ಪಟ್ಟಿಯಲ್ಲಿ ಮೋದಿಯವರು ಹೆಚ್ಚು ಖ್ಯಾತಿಗಳಿಸಿದ್ದಾರೆ. 

ಆದರೆ, ಕಾಂಗ್ರೆಸ್‌ಗೆ ಮಾತ್ರ ಮೋದಿಯವರ ಕೆಲಸ ಕಣ್ಣಿಗೆ ಕಾಣುತ್ತಿಲ್ಲ. ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ, ಹಿಂದಿನ ಸರ್ಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಹೊಸ ಹೆಸರಿನಲ್ಲಿ ಉದ್ಘಾಟನೆ ಮಾಡುವ ಸ್ಥಿತಿ ರಾಜ್ಯ ಸರ್ಕಾರದ್ದು. ನಾಡಿನ ಜನರ ಶಾಪದಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ.

 ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದ ದಾಹ ದಿನದಿಂದ ದಿನಕ್ಕೆ ಮೀರುತ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಹೊಂದಾಣಿಕೆಯಲ್ಲಿ ಬಾರಿ ಅಂತರವಿದ್ದು ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುವ ಕಾಲ ಹತ್ತಿರ ಬಂದಿದೆ. 2025ರ ಡಿಸೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಪಕ್ಷ ಪತನಗೊಂಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಹಿರಿಯನಾಯಕ, ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಭವಿಷ್ಯ ನುಡಿದರು.

ಭಾನುವಾರ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ನೂತನ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿಗೆ ಅಭಿನಂದನಾ ಸಮಾರಂಭ, ಚಳ್ಳಕೆರೆ ವಿವಿಧ ಮಂಡಲಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜ್ಯೋತಿ ಬೆಳಗಿಸಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಲು, ವಿದ್ಯುತ್, ಬಸ್, ನೋಂದಣಿ ಶುಲ್ಕ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಪ್ರತಿ ವ್ಯಕ್ತಿ ತಿಂಗಳಿಗೆ 10 ಸಾವಿರ ಹಣ ಭರಿಸುವ ಸ್ಥಿತಿ ಉಂಟಾಗಿದೆ. ಮಹಿಳೆಯರಿಗೆ ಉಚಿತ ಬಸ್, ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ನೀಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಶಾಸಕರಿಗೆ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಬೇಸರ ಗೊಂಡಿದ್ಧಾರೆ. ಎಲ್ಲಾ ರಂಗದಲ್ಲೂ ಕಾಂಗ್ರೆಸ್ ಪಕ್ಷ ವಿಫಲವಾಗಿದೆ, ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.

ಯಾವುದೇ ಪಕ್ಷ ಅಧಿಕಾರ ಪಡೆಯಬೇಕಾದರೆ ಹೋರಾಟ ಮಾಡಲೇಬೇಕು, ಈ ಹಿಂದೆ 1994ರ ಅವಧಿಯಲ್ಲಿ ಈ ಕ್ಷೇತ್ರದ ಹೆಮ್ಮೆಯ ರಾಜಕಾರಣಿ ತಿಪ್ಪೇಸ್ವಾಮಿಯವರು ಜೆಡಿಎಸ್ ಸರ್ಕಾರದಲ್ಲಿ ಸಚಿವರಾಗಿದ್ದು, ನಾನು ಶಾಸಕನಾಗಿದ್ದೆ. ತಿಪ್ಪಾರೆಡ್ಡಿಯವರೂ ಸಹ ಅಂದು ಪಕ್ಷದ ಶಾಸಕರಾಗಿದ್ದು, ಆದರೆ, ತಿಪ್ಫೇಸ್ವಾಮಿಯವರು ನನ್ನ ಮತ್ತು ತಿಪ್ಪಾರೆಡ್ಡಿಯವರ ಯಾವುದೇ ಸಲಹೆ ಸೂಚನೆಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿದ್ದು. ರಾಜ್ಯದ ಅಭಿವೃದ್ಧಿ ಪರ ಚಿಂತನೆಗಳಿಗೆ ಸಚಿವರಾಗಿದ್ದ ಸಂದಭದಲ್ಲಿ ತಿಪ್ಪೇಸ್ವಾಮಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಈ ಕ್ಷೇತ್ರದ ನೀರಾವರಿ ಸಮಸ್ಯೆ, ಚೆಕ್‌ ಡ್ಯಾಂ ಸಮಸ್ಯೆ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಮುಂತಾದ ಕೆಲಸಗಳಿಗೆ ಅಂದೇ ಅವರು ದೃಢನಿಶ್ಚಯಗೊಂಡಿದ್ದರು ಎಂದರು.

ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆಯ ಬಗ್ಗೆ ಎಂದೂ ಚಿಂತನೆ ನಡೆಸಬಾರದು. ವಿಧಾನಸೌಧದಲ್ಲಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಶಾಸಕರಾಗಿ ಹೋರಾಟ ನಡೆಸಿ ಜಯಶೀಲರಾಗಿ ಅದೇ ವಿಧಾನಸೌದದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲೂ ಮುಂಬರುವ ದಿನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಕೆ.ಟಿ.ಕುಮಾರಸ್ವಾಮಿ ತಮ್ಮ ತಂದೆಯವರ ಸೇವೆಯನ್ನು ಜನರ ಮುಂದಿಟ್ಟು ಕಾರ್ಯ ನಿರ್ವಹಿಸಲಿ. ನಾವೆಲ್ಲರೂ ಅವರಿಗೆ ಬೆಂಬಲ ನೀಡುತ್ತೇವೆ. ಮುಂಬರುವ ದಿನಗಳಲ್ಲಿ ಈ ಭಾಗದ ಜನಸೇವಕರಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಭಗವಂತ ಅವರಿಗೆ ನೀಡಲಿ ಎಂದು ಆಶಿಸುತ್ತೇನೆ. ಪಕ್ಷದ ಎಲ್ಲಾ ಕಾರ್ಯಕರ್ತರು, ಅಭಿಮಾನಿಗಳು ಅವರಜೊತೆಯಲ್ಲಿದ್ದು ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.

ಚಿತ್ರದುರ್ಗ ಜಿಲ್ಲೆಯ ರಾಜಕೀಯ ಅನೇಕ ತಿರುವುಗಳಿಂದ ಕೂಡಿದೆ. ಜಿಲ್ಲೆಯಲ್ಲಿ ಆರು ಶಾಸಕರಿದ್ದರೆ ಮೂರು ಶಾಸಕರು ಚಳ್ಳಕೆರೆ ಕ್ಷೇತ್ರದವರು. ಶಾಸಕ ರಘುಮೂರ್ತಿ, ಚಿತ್ರದುರ್ಗ ಶಾಸಕ ವೀರೇಂದ್ರ(ಪಪ್ಪಿ), ಹಿರಿಯೂರು ಶಾಸಕ ಡಿ.ಸುಧಾಕರ್ ಬಿಜೆಪಿಯ ಅಭಿವೃದ್ಧಿ ಪರ ಚಿಂತನೆ ಹಾಗೂ ಹೋರಾಟಕ್ಕೆ ಅಡ್ಡಗಾಲು ಹಾಕುವುದು ಸಹಜ. ಆದರೆ, ಪಕ್ಷದ ಎಲ್ಲಾ ಕಾರ್ಯಕರ್ತರು ಸಂಘಟಿಯರಾಗಿ ಹೋರಾಟ ನಡೆಸಿದರೆ ಮಾತ್ರ ಗೆಲುವು ನಮ್ಮದಾಗುತ್ತದೆ. ಹೊಳಲ್ಕೆರೆ ಕ್ಷೇತ್ರದ ಶಾಸಕ ಚಂದ್ರಪ್ಪನವರು ದೊಡ್ಡ ಉಳ್ಲಾರ್ತಿಯವರಾಗಿದ್ದು, ನಮ್ಮ ಪಕ್ಷದ ಶಾಸಕರಾಗಿದ್ದು, ಅವರೂ ಸಹ ಪಕ್ಷದ ಏಳಿಗೆಗೆ ಸದಾಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಭಾರತೀಯ ಜನತಾಪಕ್ಷ ಸುಧೀರ್ಘ ರಾಜಕೀಯ ಅನುಭವ ಹೊಂದಿದೆ. ರಾಜ್ಯದಲ್ಲಿ ಈ ಹಿಂದೆ ಅಧಿಕಾರ ನಡೆಸಿದ ಸಂದರ್ಭದಲ್ಲಿ ಹೆಚ್ಚು ಅಭಿವೃದ್ಧಿ ನಡೆಸಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಭಾಗ್ಯಲಕ್ಷ್ಮಿ ಬಾಂಡ್ ಜಾರಿಗೆ ತಂದಿದ್ದರು. ಇಂತಹ ಅನೇಕ ಜನಪರ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿವೆ. ಮುಂಬರುವ ಚುನಾವಣೆಯಲ್ಲಿ ಜನರ ಆಯ್ಕೆ ಬಿಜೆಪಿಯಾಗಲಿದೆ ಎಂದರು.

ಬಿಜೆಪಿ ನಿರ್ಗಮನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ಮಾಜಿ ಅಧ್ಯಕ್ಷ ಎ.ಮುರುಳಿ ಯಾದವ್, ಡಿ.ಸೋಮಶೇಖರ ಮಂಡಿಮಠ ಮಾತನಾಡಿ, ಕೆ.ಟಿ.ಕುಮಾರಸ್ವಾಮಿಗೆ ಸಂಪೂರ್ಣಬೆಂಬಲ ನೀಡುವ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ಮಂಡಲಾಧ್ಯಕ್ಷ ಬಿ.ಎಂ.ಸುರೇಶ್ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾದ ನನಗೆ ಮಂಡಲಾಧ್ಯಕ್ಷ ಸ್ಥಾನವನ್ನು ಪಕ್ಷ ನೀಡಿದೆ. ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದಾಗಿ ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಬಿಜೆಪಿ ಜಿಲ್ಲಾ ಮೋರ್ಚಾ ಅಧ್ಯಕ್ಷ ವೆಂಕಟೇಶ್‌ ಯಾದವ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಲುವೇಹಳ್ಳಿ ಪಾಲಯ್ಯ, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಶಿವಣ್ಣ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕರೀಕೆರೆ ತಿಪ್ಫೇಸ್ವಾಮಿ, ಮಧುಗಿರಿ ಅಧ್ಯಕ್ಷ ಹನುಮೇಗೌಡ, ಎನ್.ರಘುಮೂರ್ತಿ, ಬಿ.ಎಸ್.ಶಿವಪುತ್ರಪ್ಪ, ಎಸ್.ಯಲ್ಲಪ್ಪ, ಸಿ.ಎಸ್.ಪ್ರಸಾಧ್, ನಗರಸಭಾ ಸದಸ್ಯರಾದ ಎಸ್.ಜಯಣ್ಣ, ಪಾಲಮ್ಮ, ವೆಂಕಟೇಶ್, ಸಾಕಮ್ಮ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Read more Articles on