ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬ ಉತ್ಸವದಲ್ಲಿ ಆದ ಅವ್ಯವಸ್ಥೆಗಳಿಗೆಲ್ಲಾ ಉಸ್ತುವಾರಿ ಸಚಿವರಾದ ರಾಜಣ್ಣ ಅವರೇ ಕಾರಣ. ಅವರ ಮುಖಕ್ಕೆ ಮಸಿ ಬಳಿಯುತ್ತೇನೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿರುವ ಬಿಜೆಪಿಯ ವಕೀಲ ದೇವರಾಜೇಗೌಡರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಅವರ ವಿರುದ್ಧವೇ ಪ್ರತಿಭಟನೆ ಆರಂಭಿಸುವುದಾಗಿ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ರಾಜ್ಯದ ಎಲ್ಲಾ ಭಾಗಗಳಿಂದ ಹಾಗೂ ಹೊರ ರಾಜ್ಯ ಹಾಗೂ ವಿದೇಶದಿಂದ ಹಾಸನಾಂಬ ಉತ್ಸವಕ್ಕೆ ಬಂದು ಎಲ್ಲಾ ಸೇರಿ ಪೂಜೆಯನ್ನು ಮಾಡಿದ್ದೀವಿ. ಈ ಜಾತ್ರಾ ಉತ್ಸವ ಇಷ್ಟೆಲ್ಲಾ ಯಶಸ್ವಿಯಾಗಬೇಕಾದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ಮಂತ್ರಿಗಳು ಹಾಗೂ ಜಿಲ್ಲಾಡಳಿತ ಕಾರಣ. ಈ ಹಿಂದೆ ಎರಡು ವರ್ಷಗಳ ಹಿಂದೆ ದೇಶದಿಂದ ವಿದೇಶದಿಂದ ಅಥವಾ ನಮ್ಮ ರಾಜ್ಯದ ಹೊರ ಜಿಲ್ಲೆಗಳಿಂದ ಈ ಪ್ರಮಾಣದಲ್ಲಿ ಜನಸಾಗರ ಹರಿದು ಬಂದಿರುವುದಿಲ್ಲ. ಈ ಬಾರಿ ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಜನಸಾಗರ ಹರಿದು ಬರುವುದಕ್ಕೆ ಕಾರಣ ಈ ನಮ್ಮ ಜಿಲ್ಲಾಧಿಕಾರಿ, ಜಿಲ್ಲಾ ಮಂತ್ರಿಗಳು ಹಾಗು ಜಿಲ್ಲಾಡಳಿತ, ಜೊತೆಗೆ ಸರ್ಕಾರದ ವತಿಯಿಂದ ದಿನನಿತ್ಯ ೭೦೦ ಬಸ್ ಗಳನ್ನು ಮಹಿಳೆಯರಿಗೆ ಕಲ್ಪಿಸಿಕೊಡಲಾಗಿತ್ತು ಎಂದರು. ಇದರಿಂದ ಸಾಮಾನ್ಯವಾಗಿ ಜನರು ಬರುವಿಕೆ ಹೆಚ್ಚಾಗಿರುವುದು ಸತ್ಯ. ಈ ಹಿಂದೆ ಕೂಡ ಪಾಸ್ ವಿತರಿಸಲಾಗಿತ್ತು. ಹಾಗೆಯೇ ಈ ಬಾರಿ ಕೂಡ ಪಾಸ್ ವಿತರಣೆ ಮಾಡಲಾಗಿದೆ. ಜನರು ತಮ್ಮ ಶಾಸಕರು, ಮಂತ್ರಿಗಳು ಹಾಗೂ ಅಧಿಕಾರಿ ವರ್ಗದವರ ಬಳಿ ಪಾಸ್ ಕೇಳುವುದು ಸಹಜ. ಎಲ್ಲಾ ಪಕ್ಷದ ಶಾಸಕರುಗಳಿಗೆ ಪಾಸ್ ವಿತರಣೆ ಮಾಡಲಾಗಿದೆ. ಅವರು ಯಾಕೆ ಪಾಸ್ ನಿರಾಕರಿಸಲಿಲ್ಲ. ಇದರ ಜೊತೆ ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು,ಮಾಜಿ ಮಂತ್ರಿಗಳು ಬಂದಿದ್ದಾರೆ. ಅದೇ ರೀತಿ ಸುಪ್ರಿಂ ಕೋರ್ಟ್ ಹಾಗೂ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಬಂದಿದ್ದಾರೆ. ಅವರಿಗೆಲ್ಲ ಪ್ರೊಟೋಕಾಲ್ ಪ್ರಕಾರ ಎಲ್ಲರಿಗೂ ಅಚ್ಚುಕ್ಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ರೀತಿಯ ವ್ಯವಸ್ಥೆ ಮಾಡಿದ್ದಕ್ಕಾಗಿ ಹಾಸನಾಂಬ ಉತ್ಸವ ಯಶಸ್ವಿಯಾಗಿದೆ ಎಂದು ನಾವು ಸ್ವಾಗತ ಮಾಡಬೇಕೇ ಹೊರೆತು ಈ ಚಿಲ್ಲರೆ ಕಾಸಿನ ದೇವರಾಜೇಗೌಡ ಮಾಡುತ್ತಿರುವ ಈ ಆರೋಪ ಸುಳ್ಳು ಆರೋಪ ಎಂದು ಕಿಡಿಕಾರಿದರು.ಈ ದೇವರಾಜೇಗೌಡ ಒಂದೂವರೆ ತಿಂಗಳಿಂದ ಎಲ್ಲಿದ್ದರು? ಜೈಲಿನಲ್ಲಿ ಇದ್ದರು. ಇವಾಗ ಬೇಲ್ನಲ್ಲಿ ಇದ್ದಾರೆ. ಇವರ ಮೇಲೆ ಏನು ಆರೋಪ ಇದೆ ಅದನ್ನ ನಾವು ಮಾತಾಡೋದಿಲ್ಲ. ಇಂತಹದೆನ್ನೆಲ್ಲಾ ಇವರು ಇಟ್ಟುಕೊಂಡು ಸಮಾಜದ ಮುಂದೆ ಬಂದು ಪತ್ರಿಕೆಯಲ್ಲಿ ಕೂತು ಹೇಗೆ ಮುಖ ತೋರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈತ ಚಿಲ್ಲರೆ ಕಾಸಿನ ಗಿರಾಕಿ ಎಂದು ಎಲ್ಲರಿಗೂ ಗೊತ್ತಿದೆ. ಇವರು ರಾಜಕೀಯಪ್ರೇರಿತವಾಗಿ ಆರೋಪ ಮಾಡುತ್ತಿದ್ದಾರೆ. ಇವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದ್ದು. ಇನ್ನೊಂದು ಮಂತ್ರಿಗಳಿಗೆ ಕಪ್ಪು ಮಸಿ ಬಳಿಯುದಾಗಿ ಹೇಳಿದ್ದಾನೆ. ಈತನಿಗೆ ತಾಕತ್ತು, ಧಮ್ ಇದ್ದರೆ ಮಂತ್ರಿಗಳ ಮುಂದೆ ನಿಂತು ಮಾತಾಡಲಿ. ಅಷ್ಟು ಧೈರ್ಯ ಇದ್ದಿದ್ದರೆ ಮಂತ್ರಿಗಳ ಜೊತೆ ಮಾತನಾಡುತಿದ್ದ, ಈ ರೀತಿ ಮಾಧ್ಯಮದ ಮುಂದೆ ಹೋಗುತ್ತಾ ಇರಲಿಲ್ಲ ಎಂದು ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಎಚ್.ಆರ್. ವಿನೋದ್ ಕುಮಾರ್, ಪಕ್ಷದ ಮುಖಂಡ ಅಸ್ಲಾಂ, ರಾಮೇಗೌಡ, ಪ್ರಕಾಶ್ ಇತರರು ಉಪಸ್ಥಿತರಿದ್ದರು.