ಕಾಂಗ್ರೆಸಿನವರು ಮತ್ತು ಅವರ ಮನೆಯವರು ಮೊದಲು ವಂದೇ ಮಾತರಂ ಗೀತೆ ಕಲಿಯಲಿ. ಇವರ ಢೋಂಗಿ ನಾಟಕಗಳನ್ನು ಎಲ್ಲರೂ ನೋಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಂಗ್ರೆಸಿನವರು ಮತ್ತು ಅವರ ಮನೆಯವರು ಮೊದಲು ವಂದೇ ಮಾತರಂ ಗೀತೆ ಕಲಿಯಲಿ. ಇವರ ಢೋಂಗಿ ನಾಟಕಗಳನ್ನು ಎಲ್ಲರೂ ನೋಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಗಾಗಿ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಗುರುವಾರ ಯಶವಂತಪುರದ ಅರ್ಬನ್ ಪ್ರೈಮರಿ ಹೆಲ್ತ್ ಸೆಂಟರ್ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿರೋಧ ಪಕ್ಷದ ನಾಯಕನಾಗಿ ನನ್ನ ಇತಿಮಿತಿಯಲ್ಲಿ ಅವರ ತಪ್ಪುಗಳನ್ನು ತಿಳಿಸಿದ್ದೇನೆ. ಅವರು ಕೆಪಿಎಸ್ಸಿ ಆಪಾದನೆಗಳಿಂದ ಮುಕ್ತರಾದರೆ ಸಾಕು. ಕೆಪಿಎಸ್ಸಿ ಭ್ರಷ್ಟಾಚಾರದಲ್ಲಿ ಗೃಹ ಸಚಿವರ ಪಾಲೆಷ್ಟು? ಕಾರ್ಯದರ್ಶಿ ತಪ್ಪಿಸಿಕೊಂಡು ಹೋದಾಗ ಅವರು ಹೇಳಿ ಹೋಗಿದ್ದಾರೆ. ಅವರು ಎಲ್ಲಿದ್ದಾರೆಂದು ಗೊತ್ತು ಎಂದಿದ್ದರು. ಯಾವ ಗೆಸ್ಟ್ ಹೌಸಿನಲ್ಲಿ ಅವರನ್ನು ತಂದಿಟ್ಟಿದ್ದೀರಿ? ಕೇಸು ಮುಚ್ಚಿಹಾಕಲು ಏನೇನು ತಂತ್ರಗಾರಿಕೆ ನಡೆದಿದೆ ಎಲ್ಲವೂ ಗೊತ್ತಿದೆ ಎಂದು ಛಲವಾದಿ ಹೇಳಿದರು.ದೇಶದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನವನ್ನು ಇಡೀ ದೇಶಾದ್ಯಂತ ಇವತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅವರು ನಡೆದುಕೊಂಡ ರೀತಿ, ನಾಯಕತ್ವ, ಅಭಿವೃದ್ಧಿ ಕಾರ್ಯಗಳು ವಿಶಿಷ್ಟವಾದುದು. ಅವರಿಗೆ ಶುಭ ಕೋರಲು ಸಂಜೆ ಅಶೀರ್ವಾದ ದೀಪ ಬೆಳಗಿಸಲಾಗುತ್ತಿದೆ ಎಂದರು.
ಒಂದು ತಿಂಗಳ ಅಭಿಯಾನ: ಮಾಜಿ ಡಿಸಿಎಂಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಮತ್ತು ಸೇವಾ ಮನೋಭಾವದ ಸಂಕಲ್ಪದಂತೆ ಇವತ್ತು ಅವರ ಜನ್ಮದಿನದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಅಭಿಯಾನವು ಒಂದು ತಿಂಗಳ ಕಾಲ ನಡೆಯಲಿದೆ ಎಂದು ಹೇಳಿದರು.
ಇವತ್ತು ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರಿ ಆರೋಗ್ಯ ಸೇವೆ ಚೆನ್ನಾಗಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ತಪ್ಪುತ್ತದೆ. ಉತ್ತಮ ಸೇವೆ ನೀಡುವ ಮೂಲಕ ಆರೋಗ್ಯ ಕೇಂದ್ರಗಳ ಜನಪ್ರಿಯತೆ ಹೆಚ್ಚಿಸಬೇಕು ಅವರು ಸಲಹೆ ನೀಡಿದರು.