ಸಾರಾಂಶ
- ಸೋಲುವ ಕಡೆ ಕಾಂಗ್ರೆಸ್ನಿಂದ ದಲಿತರಿಗೆ ಲೋಕಸಭೆ ಟಿಕೆಟ್ ನೀಡುವ ಆಟ: ಬಿಜೆಪಿ ಎಸ್ಸಿ ಮೋರ್ಚಾ ಆರೋಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಲಿತರನ್ನು ತುಳಿದು, ಬೆನ್ನಿಗೆ ಚೂರಿ ಹಾಕುವ ಮೂಲಕ ಅದೇ ದಲಿತರ ಸಮಾಧಿ ಮೇಲೆ ಕುಳಿದು ಕಾಂಗ್ರೆಸ್ ಪಕ್ಷವು ಅಧಿಕಾರ ನಡೆಸುತ್ತಿದೆ. ತನ್ನ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುವ ಮೂಲಕ ದಲಿತರಿಗೆ ಇನ್ನಿಲ್ಲದಷ್ಟು ಅನ್ಯಾಯ ಮಾಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತ ನಾಯ್ಕ ಆರೋಪಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲೂ ಸೋಲುವ ಕಡೆ ದಲಿತರಿಗೆ ಟಿಕೆಟ್ ನೀಡುವ ಆಟವನ್ನು ಕಾಂಗ್ರೆಸ್ ಆಡುತ್ತಿದೆ. ಪರಿಶಿಷ್ಟ ಜಾತಿ-ಪಂಗಡದ ಜನರ ಕಲ್ಯಾಣಕ್ಕೆ ಮೀಸಲಿಟ್ಟ ₹11,400 ಕೋಟಿಗೂ ಅಧಿಕ ಹಣವನ್ನು ತನ್ನ ಗ್ಯಾರಂಟಿಗಳಿಗೆ, ಮುಸ್ಲಿಂ ಸಮುದಾಯಕ್ಕೆ ನೀಡುವ ಮೂಲಕ ಅನ್ಯಾಯ ಮಾಡಿದೆ ಎಂದರು.
ಮೀಸಲಾತಿಯನ್ನು ಹಿಂದೆ ಜವಾಹರ ಲಾಲ್ ನೆಹರೂ ವಿರೋಧಿಸಿ, ತಮ್ಮ ಆಗಿನ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದನ್ನೂ ದಲಿತರು ಮರೆತಿಲ್ಲ. ಎರಡು ಸಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ್ದು, ಅಂಬೇಡ್ಕರ್ ಅವರನ್ನು ಸೋಲಿಸಿದವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದು, ಕಾಂಗ್ರೆಸ್ ಪಕ್ಷದ ದಲಿತ ವಿರೋಧಿತನದ ಕರಾಳ ಇತಿಹಾಸವಿದೆ ಎಂದು ಕಿಡಿಕಾರಿದರು.ಹಿರಿಯ ಮುಖಂಡ ಆಲೂರು ಲಿಂಗರಾಜ ಮಾತನಾಡಿ, ದಲಿತರ ಸಮಸ್ಯೆ ಪರಿಹರಿಸಲು ಬಿಜೆಪಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಅಭಿವೃದ್ಧಿಗೆ ಸ್ಪಂದಿಸುತ್ತಲೇ ಇದೆ. ದಲಿತರು ಸೇರಿದಂತೆ ಎಲ್ಲ ಜಾತಿ, ವರ್ಗದವರೂ ಮತ್ತೆ ಮೋದಿ ಅವರನ್ನು ಪ್ರಧಾನಿಯಾಗಿಸಬೇಕಿದೆ. ಪ್ರಧಾನಿ ಮೋದಿ ಕಳೆದೊಂದು ದಶಕದಲ್ಲಿ ಒಮ್ಮೆ ದಲಿತರು, ಮತ್ತೊಮ್ಮೆ ಬುಡಕಟ್ಟು ಜನಾಂಗದವರನ್ನು ರಾಷ್ಟ್ರಪತಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೇ ದಲಿತರಿಗೆ ನರೇಂದ್ರ ಮೋದಿ ನೀಡಿದ ಗ್ಯಾರಂಟಿ. ಕಳೆದ 55 ವರ್ಷದಲ್ಲಿ ದಲಿತರಿಗೆ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಆದರೆ, ಒಂದು ದಶಕದಲ್ಲಿ ಮೋದಿ ಸರ್ಕಾರ ಹಿಂದೆಂದೂ ಕಂಡರಿಯದ ಅಭಿವೃದ್ಧಿ, ಯೋಜನೆ, ಕಾರ್ಯಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಕಾಂಗ್ರೆಸ್ಸಿನ ಕರಾಳ ಮುಖಕ್ಕೆ ಕನ್ನಡಿಯಾಗಿದೆ. ಅದೇ ಪಕ್ಷದ ಶಾಸಕನ ಮನೆಗೆ ಬೆಂಕಿ ಬಿದ್ದಾಗಲೂ ಸುಮ್ಮನೆ ಕೂತಿದ್ದ ಕಾಂಗ್ರೆಸ್ಸಿನ ನಾಯಕರು, ತಾವು ದಲಿತರ ಅಭಿವೃದ್ಧಿ ಮಾಡುತ್ತೇವೆಂಬ ಹೇಳಿಕೆ ನೀಡುವುದು ಹಾಸ್ಯಾಸ್ಪದ. ದಲಿತ ಸಚಿವರೇ ತಮ್ಮ ಪಕ್ಷದಲ್ಲಿ ದಲಿತ ವಿರೋಧಿ ನೀತಿ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಮಾತನಾಡಿದ್ದಾರೆ ಎಂದು ಹೇಳಿದರು.ಪಕ್ಷದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಬಿ,ಟಿ.ಸಿದ್ದಪ್ಪ, ಶಾಮನೂರು ರಾಜು, ರವಿ ನಾಯ್ಕ, ಬಿ.ವಿಠ್ಠಲ, ಕಬ್ಬಳ್ಳಿ ಪರಸಪ್ಪ, ಆರ್.ಶಿವಾನಂದ, ದಂಡಪಾಣಿ ಇತರರು ಇದ್ದರು.
- - -ಕೋಟ್ ಐಎನ್ಡಿಐ ಮೈತ್ರಿ ಕೂಟದಿಂದ ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ಅಭ್ಯರ್ಥಿ ಮಾಡೋಣವೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಸ್ತಾಪಿಸಿದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮೋಡೋಣ ಎಂಬ ಹೇಳಿಕೆ ನೀಡುತ್ತಿರುವುದು ಕಾಂಗ್ರೆಸ್ಸಿಗರು ದಲಿತರ ಬಗ್ಗೆ ಹೊಂದಿರುವ ಕಾಳಜಿಗೆ ತಾಜಾ ನಿದರ್ಶನ. ಸಿದ್ದರಾಮಯ್ಯ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಖರ್ಗೆ ಅವರನ್ನು ರಾಷ್ಟ್ರಮಟ್ಟದ ರಾಜಕೀಯಕ್ಕೆ ಕಳಿಸಿದರು. ಇದು ಕಾಂಗ್ರೆಸ್ಸಿನವರ ದಲಿತರ ಪರ ಕಾಳಜಿ
- ಬಿ.ಟಿ.ಸಿದ್ದಪ್ಪ, ಹಿರಿಯ ಮುಖಂಡ, ಬಿಜೆಪಿ- - - -31ಕೆಡಿವಿಜಿ1:
ದಾವಣಗೆರೆಯಲ್ಲಿ ಬಿಜೆಪಿ ಮುಖಂಡರಾದ ಹನುಮಂತ ನಾಯ್ಕ, ಆಲೂರು ಲಿಂಗರಾಜ, ಬಿ.ಟಿ.ಸಿದ್ದಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.