ಸಾರಾಂಶ
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ವೀರಶೈವರಿಗೆ ಟಿಕೆಟ್ ನೀಡಿದರೆ ಖಂಡಿತ ಗೆಲವು ಸಾಧ್ಯ ಎಂದು ಗಂಗಾವತಿಯ ಬಸವರಾಜಸ್ವಾಮಿ ಮಳಿಮಠ ಹೇಳಿದರು.
ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ವೀರಶೈವರಿಗೆ ಟಿಕೆಟ್ ನೀಡಿದರೆ ಖಂಡಿತ ಗೆಲವು ಸಾಧ್ಯ ಎಂದು ಗಂಗಾವತಿಯ ಬಸವರಾಜಸ್ವಾಮಿ ಮಳಿಮಠ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1952ರಿಂದ 2019ರವರೆಗೆ ಈ ಕ್ಷೇತ್ರದಲ್ಲಿ 4 ಸಲ ಎಚ್.ಜಿ. ರಾಮುಲು, ಒಮ್ಮೆ ಕೆ.ವಿರುಪಾಕ್ಷಪ್ಪ ಅವರನ್ನು ಹೊರತುಪಡಿಸಿ, ವೀರಶೈವ ಲಿಂಗಾಯತ ಅಭ್ಯರ್ಥಿಗಳೇ ಜಯ ಸಾಧಿಸಿದ್ದಾರೆ. ಹೀಗಾಗಿ, ಈ ಕುರಿತು ಸಮಗ್ರ ಅಂಕಿ-ಸಂಖ್ಯೆ ಹೈಕಮಾಂಡ್ಗೆ ನೀಡಲಾಗಿದ್ದು, ಹೈಕಮಾಂಡ್ ಸಹ ಗಂಭೀರವಾಗಿ ಪರಿಗಣಿಸುವ ವಿಶ್ವಾಸವಿದೆ ಎಂದರು.
2019ರಲ್ಲಿ ನನಗೆ ಕೊನೆಯ ವೇಳೆಯಲ್ಲಿ ಟಿಕೆಟ್ ತಪ್ಪಿತು. ಆಗ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಈ ಹಿಂದೆ ಬಳ್ಳಾರಿ ರಾಯಚೂರು ಜಿಲ್ಲೆಗಳಲ್ಲಿ ಪಕ್ಷದ ಉಸ್ತವಾರಿಯಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ, ಪಕ್ಷ ನನ್ನನ್ನು ಈ ಬಾರಿ ಪರಿಗಣಿಸಿ, ಟಿಕೆಟ್ ನೀಡುತ್ತದೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ರಮೇಶ ಕುಲಕರ್ಣಿ, ಕನಕಗಿರಿ ಕಾಂಗ್ರೆಸ್ ಮುಖಂಡ ಜಿ.ಗವಿಸಿದ್ದಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಹನಮಂತರಾವ್ , ರಾಮಪ್ಪ ನಿಲೋಗಲ್ ಇದ್ದರು.