ಕಾಂಗ್ರೆಸ್ನಿಂದ ರಾಷ್ಟ್ರವ್ಯಾಪ್ತಿ ‘ಛಾತ್ರೋಂ ಕಿ ಗೂಂಜ್’ ಹೆಸರಲ್ಲಿ ಅಭಿಯಾನ
ಕನ್ನಡಪ್ರಭ ವಾರ್ತೆ ಚಾಮರಾಜನಗರನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ನೀಟ್ ಪರೀಕ್ಷೆಯ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಈ ಸಮಾವೇಶವನ್ನು ನಡೆಸಿದೆ ಎಂದು ಎಐಸಿಸಿ ಕಾರ್ಯದರ್ಶಿ ಸಜರಿತಾ ಲೈತ್ಫ್ಲಾಂಗ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ರಾಷ್ಟ್ರ ವ್ಯಾಪಿ ‘ಛಾತ್ರೋಂ ಕಿ ಗೂಂಜ್’ ಎಂಬ ಹೆಸರಿನಲ್ಲಿ ವಿದ್ಯಾರ್ಥಿ ಪರ ಆಂದೋಲನವನ್ನು ಆರಂಭಿಸಿದೆ. ಇದು ನೀಟ್ ಪರೀಕ್ಷಾ ಅಕ್ರಮಗಳು, ಪೇಪರ್ ಸೋರಿಕೆ, ನಿರುದ್ಯೋಗ ಮತ್ತು ಶಿಕ್ಷಣ ರಂಗದ ಸಮಸ್ಯೆಗಳ ವಿರುದ್ಧದ ಅಭಿಯಾನವಾಗಿದೆ ಎಂದರು.ವ್ಯವಸ್ಥೆ ದುರ್ಬಲವಾಗಿರುವುದರಿಂದ ಪ್ರಶ್ನೆಪತ್ರಿಕೆ ಲೀಕ್ ಆಗಿವೆ. ಭಾರತದ ಯುವಜನತೆ ಕೇವಲ ಒಂದು ಪರೀಕ್ಷೆಯಿಂದ ಮಾತ್ರವಲ್ಲ, ಆಕಾಂಕ್ಷೆಗಳನ್ನು ನಿರಾಶೆಯಾಗಿ ಪರಿವರ್ತಿಸಿದ ದುರ್ಬಲ ಶಿಕ್ಷಣ ವ್ಯವಸ್ಥೆಯಿಂದಾಗಿ ಕಂಗೆಟ್ಟಿದ್ದಾರೆ ಎಂದರು.
ಶಾಲೆಗಳು ಮತ್ತು ಕಾಲೇಜುಗಳಿಗೆ ಪ್ರವೇಶಾವಕಾಶ ಹೆಚ್ಚಾಗಿದ್ದರೂ, ಗಂಭೀರ ರಚನಾತ್ಮಕ ವೈಫಲ್ಯಗಳು, ಮರುಕಳಿಸುವ ಪ್ರಶ್ನೆಪತ್ರಿಕೆ ಸೋರಿಕೆಗಳು, ಏಕಾಏಕಿ ರದ್ದುಗೊಳಿಸುವಿಕೆಗಳು, ಕೋಚಿಂಗ್ ಸೆಂಟರ್ಗಳಿಂದ ಉಂಟಾಗುವ ಒತ್ತಡ ಮತ್ತು ಹದಗೆಟ್ಟ ಪರೀಕ್ಷಾ ವ್ಯವಸ್ಥೆ. ಲಕ್ಷಾಂತರ ಯುವಕರನ್ನು ಆತಂಕ, ಸಾಲ, ಅರೆ ಉದ್ಯೋಗ ಮತ್ತು ನಿರಾಶೆಯ ಸುಳಿಯಲ್ಲಿ ಸಿಲುಕಿಸಿವೆ ಎಂದರು.
ಮೇ ೩ರಂದು ನಡೆದ ಪರೀಕ್ಷೆಯನ್ನು ಬೃಹತ್ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಗಳ ನಂತರ ಮೇ ೧೨ರಂದು ರದ್ದುಗೊಳಿಸಲಾಯಿತು. ಜೂ.೨೧ರಂದು ಮರುಪರೀಕ್ಷೆ ನಡೆಸಲಾಯಿತು. ಇದರಿಂದಾಗಿ ೨೨ ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಅನಿಶ್ಚಿತತೆಯಲ್ಲಿ ಸಿಲುಕಿದರು ಎಂದರು.
೧೫೨ ಪ್ರಶ್ನೆಪತ್ರಿಕೆ ಸೋರಿಕೆಗಳಿಂದಾಗಿ ೭.೫ ಕೋಟಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದರೂ ಒಬ್ಬನೇ ಒಬ್ಬ ಅಪರಾಧಿಗೂ ಶಿಕ್ಷೆಯಾಗಿಲ್ಲ. ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಮತ್ತು ಪ್ರತಿಭಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವಿಕೆ, ಮುದ್ರಣ, ಸಾರಿಗೆ, ಡಿಜಿಟಲ್ ಮೂಲಸೌಕರ್ಯ ಮತ್ತು ವೆಂಡರ್ ಒಪ್ಪಂದಗಳು ಸೇರಿದಂತೆ ಪರೀಕ್ಷಾ ವ್ಯವಸ್ಥೆಯ ಸಮಗ್ರ ಸುಧಾರಣೆಯಾಗಬೇಕು. ಮೊದಲಿನಂತೆಯೇ ನೀಟ್ ಪರೀಕ್ಷೆಯ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಬೇಕು ಎಂದರು.
ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ರು. ಪರಿಹಾರ ನೀಡಬೇಕು. ಪ್ರತಿಭಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹಾಕಿರುವ ದೂರು ರದ್ದುಗೊಳಿಸಬೇಕು. ಲೋಕಸಭೆಯಲ್ಲಿ ಮುಕ್ತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ವಿದ್ಯಾರ್ಥಿಗಳ ಧ್ವನಿಯನ್ನು ಇನ್ಮುಂದೆ ಈ ಹದಗೆಟ್ಟ ವ್ಯವಸ್ಥೆಯಿಂದ ಮೌನಗೊಳಿಸಲು ಸಾಧ್ಯವಿಲ್ಲ. ಮುಂದೂಡಲ್ಪಟ್ಟ ಪ್ರತಿಯೊಂದು ಕನಸು, ಕಳೆದುಕೊಂಡ ಪ್ರತಿಯೊಂದು ಜೀವ ಮತ್ತು ’ಛಾತ್ರೋಂ ಕಿ ಗೂಂಜ್’ನಲ್ಲಿ ಎತ್ತಿದ ಪ್ರತಿಯೊಂದು ಧ್ವನಿಯು ಹೊಣೆಗಾರಿಕೆ, ಸುಧಾರಣೆ ಮತ್ತು ನ್ಯಾಯಕ್ಕಾಗಿ ಮಾಡಿದ ಕರೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಪಿ. ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಯುವ ಯುವ ಕಾಂಗ್ರೆಸ್ನ ಅಧ್ಯಕ್ಷ ಯೋಗೇಂದ್ರ ಸಿ. ಉಪಾಧ್ಯಕ್ಷ ಚಂದನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ರಾಹಾರ್, ಜಿಲ್ಲಾ ಕಾರ್ಯದರ್ಶಿ ಧನ್ಯ ಇದ್ದರು.---
೨೨ಸಿಎಚ್ಎನ್೧ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ಸಜರಿತಾ ಲೈತ್ಫ್ಲಾಂಗ್ ಮಾತನಾಡಿದರು.