ಸಾರಾಂಶ
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮುಂಬರುವ ವಿಧಾನ ಪರಿಷತ್ ಉಪಚುನಾವಣೆಯ ಅಭ್ಯರ್ಥಿ ಪ್ರಕ್ರಿಯೆ ಹಾಗೂ ಚುನಾವಣೆಯ ರೂಪುರೇಷೆ ತಯಾರಿಸಲು ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮುಂಬರುವ ವಿಧಾನ ಪರಿಷತ್ ಉಪಚುನಾವಣೆಯ ಅಭ್ಯರ್ಥಿ ಪ್ರಕ್ರಿಯೆ ಹಾಗೂ ಚುನಾವಣೆಯ ರೂಪುರೇಷೆ ತಯಾರಿಸಲು ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಐವನ್ ಡಿಸೋಜ ಮಾರ್ಗದರ್ಶನ ಮಾಡಿದರು.ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತಗಳ ಸಂಖ್ಯೆ ಕಡಿಮೆ ಇದ್ದರೂ ಇತರ ಮತಗಳನ್ನು ಗಳಿಸಲು ಪ್ರಯತ್ನಪಟ್ಟಲ್ಲಿ ಜಯಗಳಿಸುವುದರಲ್ಲಿ ಸಂಶಯವಿಲ್ಲ. ಮುಡಾದಂತಹ ಸಣ್ಣ ವಿಷಯವನ್ನು ಹಿಡಿದುಕೊಂಡು ಬಿಜೆಪಿ ದೇಶಾದ್ಯಂತ ಅಪಪ್ರಚಾರ ಮಾಡುತ್ತಿದೆ. ಕಾರ್ಯಕರ್ತರು ಧೃತಿಗೆಡದೆ ಜನತೆಗೆ ಸತ್ಯವನ್ನು ತಿಳಿಸುವ ಪ್ರಯತ್ನವನ್ನು ಮಾಡಬೇಕು ಎಂದರು.ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ಶಾಸಕರು ಇದ್ದ ಕ್ಷೇತ್ರಗಳಲ್ಲಿ ಮಾತ್ರ ಪಕ್ಷ ಸಂಘಟನೆ ಬೆಳೆಯುತ್ತಿದೆ. ಈ ಅಸಮತೋಲನವನ್ನು ಸರಿ ಪಡಿಸಬೇಕಾಗಿದೆ ಎಂದು ಹೇಳಿದರು.ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಪ್ರತಿ ಪಂಚಾಯಿತಿಗಳಲ್ಲಿ ನಮ್ಮ ಪರಂಪರಾಗತ ಮತಗಳಿವೆ. ಇದನ್ನು ಉಳಿಸಿಕೊಂಡು ಇತರ ಮತಗಳನ್ನು ಪಡೆಯವಲ್ಲಿ ಪ್ರಯತ್ನ ಪಡಬೇಕು. ಇದಕ್ಕೆ ರಾಜಕೀಯ ತಂತ್ರಗಾರಿಕೆ ಮುಖ್ಯ. ಕ್ಷೇತ್ರವಾರು ಆಯ್ಕೆಗೊಂಡ ಉಸ್ತುವಾರಿಗಳು ತಮ್ಮ ತಂತ್ರಗಾರಿಕೆಯ ಮೂಲಕ ಮತಗಳನ್ನು ಗಳಿಸುವ ಪ್ರಯತ್ನ ಮಾಡಬೇಕು ಎಂದರು.
ಪಕ್ಷದ ಮುಖಂಡರಾದ ಎಂ.ಎ.ಗಫೂರ್, ಕಿಶನ್ ಹೆಗ್ಡೆಕೊಳ್ಕೆಬೈಲು, ದಿನೇಶ್ ಹೆಗ್ಡೆ ಮುಳವಳ್ಳಿ ಮುಂತಾದವರಿದ್ದರು.ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ ಸ್ವಾಗತಿಸಿದರು. ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು.