ಕನ್ನಡಪ್ರಭ ವಾರ್ತೆ ಸಾಗರ
ಟೀಕೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುವ ಸಂಸ್ಕೃತಿ ಕಾಂಗ್ರೆಸ್ಸಿಗರು ಬೆಳೆಸಿಕೊಳ್ಳಬೇಕು. ಬಿಜೆಪಿ ಸಮಾಜಮುಖಿಯಾಗಿ ಮಾಡುವ ಟೀಕೆಗಳಿಗೆ ಕೌಂಟರ್ ಕೊಡುವುದನ್ನು ಬಿಟ್ಟು ಮುಂದಿನ ದಿನಗಳಲ್ಲಾದರೂ ಉತ್ತಮ ಕೆಲಸ ಮಾಡಿ ತೋರಿಸಲಿ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಪ್ಪನವರು ಒಂದು ಬಾರಿ ಕ್ಷೇತ್ರದ ಶಾಸಕರಾಗಿ ಜನ ಗುರುತಿಸುವ ಅನೇಕ ಕೆಲಸಗಳನ್ನು ಮಾಡಿದ್ದಾರೆ.ಗೋಪಾಲಕೃಷ್ಣ ಬೇಳೂರು ಮೂರು ಬಾರಿ ಶಾಸಕರಾಗಿ ಏನು ಮಾಡಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು ಬೇರೇನೂ ಸಾಧನೆ ಇದೆ ಎಂದ ಅವರು, ನಾವು ಪ್ರತಿಯೊಂದು ಟೀಕೆ ಮಾಡುವಾಗಲೂ ಅಗತ್ಯ ದಾಖಲೆ ಇರಿಸಿಕೊಂಡಿರುತ್ತೇವೆ. ಕಾಂಗ್ರೆಸ್ ಮುಖಂಡರು ಮೂರುವರ್ಷದಲ್ಲಿ ಬೇಳೂರು ಮಾಡಿದ ಅಭಿವೃದ್ದಿ ಬಗ್ಗೆ ದಾಖಲೆ ಇರಿಸಿಕೊಂಡು ಮಾತನಾಡಬೇಕು ಎಂದು ಆಗ್ರಹಿಸಿದರು.
ಜಿ.ಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಈ ಬಾರಿ ಗ್ರಾ.ಪಂ ಮೀಸಲಾತಿ ಮಾಡುವ ವೇಳೆ ಶಾಸಕರು, ಹಿಂಬಾಲಕರು ಮೂಲ ಕಾಂಗ್ರೆಸ್ಸಿಗರು ಮತ್ತು ಕಾಗೋಡು ತಿಮ್ಮಪ್ಪ ಅವರ ಬೆಂಬಲಿಗರು ಸ್ಪರ್ಧೆ ಮಾಡದಂತೆ ಮೀಸಲಾತಿ ಮಾಡಿಸಿದ್ದಾರೆ. ಎಲ್ಲೆಲ್ಲಿ ಬೇಳೂರು ಅಭಿವೃದ್ದಿಶೂನ್ಯ ನಡೆ ಬಗ್ಗೆ ಪಕ್ಷದಲ್ಲಿದ್ದು ವಿರೋಧ ವ್ಯಕ್ತಪಡಿಸುತ್ತಿದ್ದರೋ ಅವರನ್ನೆಲ್ಲಾ ಸ್ಪರ್ಧೆ ಮಾಡದಂತೆ ವ್ಯವಸ್ಥಿತ ತಂತ್ರಗಾರಿಕೆ ಮಾಡಲಾಗಿದೆ. ಬೇಳೂರು ಶಾಸಕರಾಗಿ ಗೆದ್ದಾಗಲೆಲ್ಲ ಅವರದೆ ಸರ್ಕಾರ ಇತ್ತು. ಆದರೆ ಮಂತ್ರಿಗಿರಿ ಆಸೆಗೆ ಬಿದ್ದು ಕ್ಷೇತ್ರದ ಅಭಿವೃದ್ಧಿಯನ್ನು ಅವರು ಕಡೆಗಣಿಸಿದ್ದಾರೆ. ಬೇಳೂರು ಅವರ ಶಾಸಕರ ಅಭಿವೃದ್ಧಿ ಶೂನ್ಯ ಆಲೋಚನೆಗೆ ಕ್ಷೇತ್ರದ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಗಣೇಶ್ ಪ್ರಸಾದ್ ಮಾತನಾಡಿದರು. ಮಧುರಾ ಶಿವಾನಂದ್, ರಮೇಶ್ ಎಚ್.ಎಸ್., ಭರ್ಮಪ್ಪ ಅಂದಾಸುರ, ರವೀಂದ್ರ ಬಿ.ಟಿ., ಜಿ.ಕೆ.ಭೈರಪ್ಪ, ಸಂತೋಷ್ ರಾಯಲ್, ಶ್ರೀನಿವಾಸ್ ಮೇಸ್ತಿç, ಗಿರೀಶ್ ಗುಳ್ಳಳ್ಳಿ ಇದ್ದರು.
