ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವಂತಹ ವಿಶೇಷ ಮತಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಎಲ್ಲಾ ಬಿಎಲ್‌ಎ ೨ಗಳು ಪ್ರಾಮಾಣಿಕವಾಗಿ ಪಾಲ್ಗೊಂಡು ಕಾರ್ಯೋನ್ಮುಖರಾಗಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ಜೆಡಿಎಸ್ ಪಕ್ಷದವತಿಯಿಂದ ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆಯ ಅಂಗವಾಗಿ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಆಯೋಗವು ನಡೆಸುತ್ತಿರುವ ಈ ಪರಿಷ್ಕರಣೆಯಲ್ಲಿ ಪ್ರಾಮಾಣಿಕವಾಗಿ ಮತದಾರರ ದಾಖಲೆ ಉಳಿಯಲಿದ್ದು ಇನ್ನು ಮುಂದೆ ಯಾರೂ ಮತಪಟ್ಟಿಯಲ್ಲಿ ಅಕ್ರಮ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್‌ಪಕ್ಷದ ಜಿಲ್ಲಾಧ್ಯಕ್ಷ ನಿಂಗಪ್ಪ ಮಾತನಾಡಿ, ಚುನಾವಣೆಗಳಲ್ಲಿ ನಡೆಯುವಂತಹ ಅಕ್ರಮಗಳನ್ನು ತಡೆಯಲು ನೈಜ ಮತದಾರರನ್ನು ಗುರುತಿಸಲು ಚುನಾವಣಾ ಆಯೋಗ ಪರಿಷ್ಕರಣೆ ಕಾರ್ಯವನ್ನು ರೂಪಿಸಿದೆ. ಇದರ ಮೂಲಕ ನಕಲಿ ಮತದಾರರನ್ನು ರದ್ದುಪಡಿಸುವುದು ಸೇರಿದಂತೆ ಅರ್ಹರನ್ನು ಸೇರ್ಪಡೆ ಮಾಡುವುದು. ವರ್ಗಾವಣೆ ನೀಡುವಂತಹ ಕಾರ್ಯಗಳಿಗೆ ಈಗಾಗಲೇ ಬಿಎಲ್‌ಒ ಗಳನ್ನು ನೇಮಕಮಾಡಿದೆ. ಇದರಂತೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಬಿಎಲ್‌ಎ ೨ಎಂದು ನೇಮಕ ಮಾಡಿದ್ದು ಇವರು ಅವರೊಂದಿಗೆ ಸಹಕಾರ ನೀಡಬೇಕು ಎಂದರು.

ಇಂದು ರಾಜ್ಯದಲ್ಲಿ ಸರ್ಕಾರ ಜನವಿರೋಧಿ ಕೆಲಸಗಳನ್ನು ಮಾಡುತ್ತಿದ್ದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪ್ರತಿಯೊಬ್ಬರ ಮೇಲೆ ಸಾಲದ ಹೊರೆಯನ್ನು ಹಾಗೂ ತೆರಿಗೆಯನ್ನು ವಿಧಿಸುತ್ತಿದೆ. ರೈತ ವಿರೋಧಿತನದಿಂದ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದು ಜನರು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸರ್ಕಾರದ ಬದಲಾವಣೆಯನ್ನು ಬಯಸುತ್ತಿದ್ದಾರೆ ಅದ್ದರಿಂದ ನಮ್ಮ ಕಾರ್ಯಕರ್ತರು ಉತ್ತಮ ರೀತಿಯಲ್ಲಿ ಪ್ರಾಮಾಣಿಕವಾಗಿ ಬೂತ್‌ಮಟ್ಟದಲ್ಲಿ ಕೆಲಸ ಮಾಡಬೇಕಿದೆ ಎಂದರು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ದೇವರಾಜು ಮಾತನಾಡಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಾಮಚಂದ್ರಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್, ಲೋಹಿತಾಬಾಯಿ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಚೇತನಾ ಗಂಗಾಧರ್, ರೇಣುಕಮ್ಮ ಇತರರಿದ್ದರು.