ಧಾರವಾಡ:

ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿದ್ದು ಈ ಪ್ರಕರಣದಲ್ಲಿ ಸಿಬಿಐ ತನಿಖೆಯಲ್ಲಿ ಷಡ್ಯಂತ್ರ ನಡೆದಿದೆ ಎಂದು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ನಗರದಲ್ಲಿ ಮೌನ ಮೆರವಣಿಗೆ ನಡೆಸಿದರು.

ಇಲ್ಲಿಯ ಕಲಾಭವನದಿಂದ ಕೈಗೆ ಕಪ್ಪು ಬಟ್ಟೆ ಧರಿಸಿ, ಬಟ್ಟೆ ಮೇಲೆ ವಿನಯ ಭಾವಚಿತ್ರ ಅಂಟಿಸಿಕೊಂಡ ಕಾರ್ಯಕರ್ತರು ಕೆಸಿಸಿ ಬ್ಯಾಂಕ್‌ ವರೆಗೆ ಮೌನ ಮೆರವಣಿಗೆ ನಡೆಸಿದರು. ಕೈಯಲ್ಲಿ ವಿನಯ ಕುಲಕರ್ಣಿ ಬಂಟಿಂಗ್ ಹಿಡಿದುಕೊಂಡು ಬೆಂಬಲಿಸಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೈ ನಾಯಕರು ಸಹ ವಿನಯ ಬೆಂಬಲಿಸಿದರು.

ಪೊಲೀಸ್ ತನಿಖೆ ಅಂತಿಮ ಹಂತಕ್ಕೆ ಬಂದಿತ್ತು. ಆದರೆ, 2019ರಲ್ಲಿ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದರು. ಇದು ರಾಜಕೀಯದ ಒಂದು ಭಾಗವಲ್ಲವೇ? ವಿನಯ ಕುಲಕರ್ಣಿ ಸೇರಿದಂತೆ 16 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ದೇಶದ ಗಮನವನ್ನು ಸೆಳೆದಿದ್ದ ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಹಾಗೂ ಷಡ್ಯಂತ್ರ ಇದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.

ಈ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಅವರನ್ನು ಬಲಿಪಶು ಮಾಡಲಾಗಿದೆ. ಆದ್ದರಿಂದ ಈ ಪ್ರಕರಣದ ಕುತಂತ್ರಿಗಳ ವಿರುದ್ಧ, ಕಪ್ಪು ಬಟ್ಟೆ ಪ್ರದರ್ಶಿಸಿ ಮೌನ ಮೆರವಣಿಗೆ ಮಾಡಿದ್ದೇವೆ. ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಲು ಹೈಕೋರ್ಟ್, ಸುಪ್ರೀಂಕೋರ್ಟ್ ಕೂಡ ಇದೆ. ಅಲ್ಲಿ ನಾವು ನ್ಯಾಯ ಪಡೆಯುತ್ತೇವೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಏಗನಗೌಡರ ಹಾಗೂ ಈಶ್ವರ ಶಿವಳ್ಳಿ ಹೇಳಿದರು.


ಈ ವೇಳೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಮಾಜಿ ಶಾಸಕ ಎಂ.ಎಸ್‌. ಅಕ್ಕಿ, ಪಾಲಿಕೆ ಸದಸ್ಯ ರಾಜು ಕಮತಿ, ಪ್ರಕಾಶ ಘಾಟಗೆ, ಸದಾನಂದ ಡಂಡಗನವರ, ಬಸವರಾಜ ಜಾಧವ, ಆನಂದ ಸಿಂಗನಾಥ, ಶಿವಶಂಕರ ಹಂಪಣ್ಣವರ, ನಿಂಗಣ್ಣ ಕರೀಕಟ್ಟಿ, ರಾಜೇಶ ಮಟ್ಟಿ, ಸಿದ್ದಪ್ಪ‌ ಪ್ಯಾಟಿ, ಸಿದ್ದಪ್ಪ ಸಪೂರಿ ಮತ್ತಿತರರು ಇದ್ದರು.