ರಾಷ್ಟ್ರಿಯ ಸ್ವಯಂ ಸೇವಕ ಸಂಘಕ್ಕೆ ಹಿಂದೂಗಳು ಸಮಯವನ್ನು ಕೊಡಬೇಕು. ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಪ್ರತಿ ಮನೆಯಲ್ಲಿ ಹಿಂದೂ ಜಾಗೃತರಾಗಬೇಕಾಗಿದೆ.

ಲಕ್ಷ್ಮೇಶ್ವರ: ಹಿಂದುತ್ವದ ಬಗ್ಗೆ ಹಿಂದೂಗಳು ದೇಶವ್ಯಾಪಿ ಜಾಗೃತರಾಗಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ ಹೇಳಿದರು.

ಪಟ್ಟಣದ ಶಂಕರ ಭಾರತಿಮಠದ ಸಮುದಾಯ ಭವನದಲ್ಲಿ ರಾಷ್ಟ್ರಿಯ ಸ್ವಯಂ ಸೇವಕ ಸಂಘ ಲಕ್ಷ್ಮೇಶ್ವರ ಘಟಕದಿಂದ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರಿಯ ಸ್ವಯಂ ಸೇವಕ ಸಂಘಕ್ಕೆ ಹಿಂದೂಗಳು ಸಮಯವನ್ನು ಕೊಡಬೇಕು. ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಪ್ರತಿ ಮನೆಯಲ್ಲಿ ಹಿಂದೂ ಜಾಗೃತರಾಗಬೇಕಾಗಿದೆ. ಗೋಹತ್ಯೆ, ಮತಾಂತರ, ಲವ್ ಜಿಹಾದ್ ತಡೆಯುವ ಕೆಲಸ ಆಗಬೇಕಾಗಿದೆ. ದೇಶದಲ್ಲಿ ಹಿಂದುತ್ವದ ಗಾಳಿ ಬೀಸುತ್ತಿದೆ. ಜತೆಗೆ ಸವಾಲು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ದೇಶದ ಯುವಶಕ್ತಿಯನ್ನು ಬೇರೆಡೆ ಸೆಳೆಯಲು ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಹಿಂದೂಗಳು ಕಡಿವಾಣ ಹಾಕಬೇಕು. ರಕ್ಷಾಬಂಧನ ಹಬ್ಬ ದೇಶದಲ್ಲಿ ಸೇರಿದಂತೆ ವಿದೇಶಗಳಲ್ಲಿ ಆಚರಣೆ ಜೋರಾಗಿದೆ. ಎಲ್ಲರೂ ಒಂದೇ ಭಾವನೆಯನ್ನು ಸಂಘ ಎಂಬ ತೋರಿಸಿಕೊಡುತ್ತದೆ. ಕಷ್ಟದ ದಿನಗಳಲ್ಲಿ ಆರ್‌ಎಸ್ಎಸ್ ಬೆಳೆದಿದೆ. ಸಂಘಕ್ಕೆ ಮುಕ್ತವಾದ ಅವಕಾಶವಿದೆ. ವಿದೇಶಗಳಲ್ಲಿ ರಾಮನ ಜಪವಿದೆ ಎಂದರು.

ಈ ವೇಳೆ ಶಾರದಾ ಸಂಗೀತ ಗುರುಕುಲ ಸಂಸ್ಥಾಪಕ ಕೃಷ್ಣ ಕುಲಕರ್ಣಿ ಮಾತನಾಡಿ, ದೇಶಕ್ಕೆ, ಸಮಾಜಕ್ಕೆ ಕಂಟಕ ಬಂದಾಗಲೆಲ್ಲ ರಕ್ಷಾಬಂಧನದಂತಹ ಹಬ್ಬಗಳು ಆತ್ಮಸ್ಥೈರ್ಯ ಹೆಚ್ಚಿಸಿವೆ. ಯುವ ಜನರು ದೇಶದ ಪ್ರಗತಿಗಾಗಿ ಏನನ್ನಾದರೂ ಕೊಡುಗೆ ನೀಡುವ ಸಂಕಲ್ಪದಿಂದ ಮುಂದುವರಿದರೆ ಆದರ್ಶ ಜೀವನ ಕಟ್ಟಿಕೊಳ್ಳಬಹುದು ಎಂದರು.

ಈ ವೇಳೆ ಆರ್‌ಎಸ್ಎಸ್ ಜಿಲ್ಲಾ ಕಾರ್ಯಾಕಾರಿಣಿ ಸದಸ್ಯ ಚಂದ್ರಶೇಖರ ಹಂಪಣ್ಣವರ, ತಾಲೂಕು ಕಾರ್ಯವಾಹ ಶಿವರಾಜ ಗುಜ್ಜರಿ, ಸುನೀಲ ಮೆಡ್ಲೇರಿ, ಉಮೇಶ ಮಡಿವಾಳರ, ಪಾಂಡುರಂಗ ಕಾಕಡೆ, ಗುರು ಮೆಡ್ಲೇರಿ, ರಾಜು ಅರಳಿ, ಪ್ರವೀಣ ಯರ್ಲಗಟ್ಟಿ, ವೈ.ಕೆ. ಲಿಂಗಶೆಟ್ಟಿ, ರೋಹಿತ ಬಾಕಳೆ, ಮುರುಗೇಶ ದುಂಡಿ, ಯಲ್ಲಪ್ಪ ಶಿರಬಡಗಿ, ಶಂಕರ ಬ್ಯಾಡಗಿ, ಮಂಜುನಾಥ ಬೆಂಗಳೂರು, ಸಂತೋಷ ಬಡಿಗೇರ, ಕೊಟ್ರೇಶ ಅಳವಂಡಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.