ಸಮನ್ವತೆ ಕಾಪಾಡಿಕೊಳ್ಳುವುದು ಸಂವಿಧಾನದ ಆಶಯ: ಪುರಂದರ

| Published : Feb 13 2024, 12:45 AM IST / Updated: Feb 13 2024, 12:46 AM IST

ಸಮನ್ವತೆ ಕಾಪಾಡಿಕೊಳ್ಳುವುದು ಸಂವಿಧಾನದ ಆಶಯ: ಪುರಂದರ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಇವುಗಳ ಆಶ್ರಯದಲ್ಲಿ ಸೋಮವಾರ ಪುತ್ತೂರು ನಗರದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಪುತ್ತೂರು ತಹಸೀಲ್ದಾರ್ ಪುರಂದರ ಸಮಾರಂಭ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು ಸಂವಿಧಾನವನ್ನು ಉಳಿಸಿ ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಸಂವಿಧಾನದ ಆಶಯದಂತೆ ನಮ್ಮ ಹಕ್ಕುಗಳನ್ನು ಅರಿತು ಬದುಕುವುದರೊಂದಿಗೆ ಸಮನ್ವಯತೆಯಲ್ಲಿ ಸಾಗುವುದು ಸಂವಿಧಾನಕ್ಕೆ ನೀಡುವ ಗೌರವವಾಗಿದೆ ಎಂದು ಪುತ್ತೂರು ತಹಸೀಲ್ದಾರ್ ಪುರಂದರ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಇವುಗಳ ಆಶ್ರಯದಲ್ಲಿ ಸೋಮವಾರ ಪುತ್ತೂರು ನಗರದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಿಂದ ನಾವು ಸ್ವತಂತ್ರ ಬದುಕು ಕಂಡುಕೊಳ್ಳಲು ಸಾಧ್ಯವಾಗಿದೆ. ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಪರಿಪಾಲನೆ, ಆಡಳಿತದ ರೂಪುರೇಷೆಗಳು ಸಂವಿಧಾನದಲ್ಲಿ ಅಡಕವಾಗಿದೆ. ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ಪರಿಪಾಲನೆಗೆ ಚ್ಯುತಿಯಾಗದಂತೆ ಸಂವಿಧಾನವು ನಮಗೆ ರಕ್ಷಣೆಯನ್ನು ನೀಡಿ ಪರಿಹಾರವನ್ನು ಕಂಡುಕೊಳ್ಳುವಂತೆ ಮಾಡುತ್ತದೆ. ಸಂವಿಧಾನದ ಮೂಲಕವೇ ನಮ್ಮ ಜೀವನವಿದೆ. ಎಲ್ಲಾ ನಾಗರಿಕರನ್ನು ಮುಖ್ಯವಾಹಿನಿಗೆ ತರುವುದು ಸಂವಿಧಾನದ ಆಶಯವಾಗಿದೆ. ನಮ್ಮ ಸಂವಿಧಾವು ಪವಿತ್ರ ಮತ್ತು ಬಲಿಷ್ಠವಾಗಿದೆ. ಸಂವಿಧಾನವನ್ನು ನಮಗೆ ನಾವು ಅರ್ಪಿಸಿಕೊಂಡು ೭೫ ವರ್ಷಗಳು ಸಂದಿವೆ. ಅದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ಸಂವಿಧಾನ ಜಾಗೃತಿ ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದರು.

ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮ ಪಂಚಾಯತ್‌ನಿಂದ ಪುತ್ತೂರು ನಗರಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ವಾಹನವನ್ನು ಪರ್ಲಡ್ಕದಲ್ಲಿ ನಗರಕ್ಕೆ ಸ್ವಾಗತಿಸಲಾಯಿತು. ಬಳಿಕ ವಾದ್ಯಗೋಷ್ಠಿಗಳೊಂದಿಗೆ, ಶಾಲಾ ವಿದ್ಯಾರ್ಥಿಗಳ ಕಾಲ್ನಡಿಗೆ ಜಾಥಾ, ಬೈಕ್ ರ‍್ಯಾಲಿಗಳೊಂದಿಗೆ ಸಭಾ ಕಾರ್ಯಕ್ರಮ ನಡೆದ ಪುತ್ತೂರಿನ ಕಿಲ್ಲೆ ಮೈದಾನದ ಸಮೀಪದಲ್ಲಿರುವ ಶಾಸಕರ ಕಚೇರಿಗೆ ಆವರಣಕ್ಕೆ ತರಲಾಯಿತು.

ಅಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಸಿ.ಎಂ ಅವರು ಸಂವಿಧಾನ ಪೀಠಿಕೆಯ ಪ್ರತಿಜ್ಞೆ ಬೋಧಿಸಿದರು. ಜಾಥಾದ ವಾಹನದಲ್ಲಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರು ಹಾರಾರ್ಪಣೆ ಮಾಡಿದರು. ಜಾಥಾದಲ್ಲಿ ಸಂವಿಧಾನ ಪಠಣ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು.

ನಗರಸಭೆಯ ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿದರು.