ಸಾರಾಂಶ
ಚಾಮರಾಜನಗರದ 30ನೇ ವಾರ್ಡ್ನ ಚಿಕ್ಕಬೀದಿಯಲ್ಲಿ ಜೈ ಭೀಮ್ ಯುವಜನ ಸಂಘದ ವತಿಯಿಂದ ಡಾ.ಅಂಬೇಡ್ಕರ್ ಭಾವಚಿತ್ರ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ 30ನೇ ವಾರ್ಡ್ನ ಚಿಕ್ಕಬೀದಿಯಲ್ಲಿ ಜೈ ಭೀಮ್ ಯುವಜನ ಸಂಘದ ವತಿಯಿಂದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಪ್ರಯುಕ್ತ ಅವರ ಭಾವಚಿತ್ರ ಮೆರವಣಿಗೆ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಬೀದಿಯ ಡಾ.ಅಂಬೇಡ್ಕರ್ ಭವನ ಮುಂಭಾಗದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಡಾ.ಅಂಬೇಡ್ಕರ್ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಭಾರತ ಜನತೆಗೆ ಒಂದು ರೀತಿ ಜೀವನಾಡಿ ಇದ್ದಂತೆ. ಅವರ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ದೊರೆತಿದೆ ಎಂದರು. ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಡಾ.ಅಂಬೇಡ್ಕರ್ ಸಂವಿಧಾನ ಮೂಲಕ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಒಳಮೀಸಲಾತಿ ಸಂಬಂಧ ನಡೆಯುತ್ತಿರುವ ಪರಿಶಿಷ್ಟ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಬಲಗೈ ಸಮುದಾಯದವರು ಹೊಲೆಯ ಎಂದು ನಮೂದಿಸುವಂತೆ ಸೂಚಿಸಿದರು.ಮೆರವಣಿಗೆಯಲ್ಲಿ ಜೈಭೀಮ್ ಯುವಜನ ಸಂಘದ ಅಧ್ಯಕ್ಷ ಆರ್.ನಾಗಣ್ಣ, ಉಪಾಧ್ಯಕ್ಷ ಜಯಕುಮಾರ್, ಬಾಬು ರಾಮಸಮುದ್ರ, ಯಜಮಾನರಾದ ಪಾಪಣ್ಣ, ಮರಿಸ್ವಾಮಿ, ವಕೀಲರಾದ ನಾಗಣ್ಣ, ಪುಟ್ಟಸ್ವಾಮಿ, ನಗರಸಭಾ ಮಾಜಿ ಸದಸ್ಯ ಬಸವರಾಜು, ಮುಖಂಡ ನಾಗಬಸವಣ್ಣ, ಮಹದೇವಸ್ವಾಮಿ, ಸುರೇಶ್, ಎಂಸ್ಯಾಡ್ ಮಹದೇವಸ್ವಾಮಿ, ಎಂಸ್ಯಾಡ್ ಶಂಕರ್, ಬೀದಿಯ ಸರ್ಕಾರಿ ನೌಕರರು, ಜೈ ಭೀಮ್ ಯುವಜನ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.