ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಿಸಬೇಕು:ಸಿಎಂ ಸಿದ್ದರಾಮಯ್ಯ

| Published : Apr 25 2024, 01:01 AM IST

ಸಾರಾಂಶ

ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಚಿಂತನೆ ನಡೆಸಬೇಕು. ದೇಶದ ಭವಿಷ್ಯ ರೂಪಿಸಲು ಇದು ಬಹಳ ಮುಖ್ಯ. ಜನತೆ ವಿಚಾರ ಮಾಡಿ ಯಾವ ಪಕ್ಷಕ್ಕೆ ಅಧಿಕಾರ ಕೊಟ್ಟರೆ ದೇಶದ ಹಿತ ಕಾಪಾಡುತ್ತಾರೆ ಎಂದು ತೀರ್ಮಾನಿಸಬೇಕು.

ಕನ್ನಡಪ್ರಭ ವಾರ್ತೆ ಆಳಂದ

ಬಿಜೆಪಿ ಆಡಳಿತದ ಅವಧಿಯಲ್ಲಿ ಸಂವಿಧಾನ ಅಪಾಯದಲ್ಲಿದ್ದು ಅದನ್ನು ರಕ್ಷಣೆ ಮಾಡಬೇಕಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಚಿಂತನೆ ನಡೆಸಬೇಕು. ದೇಶದ ಭವಿಷ್ಯ ರೂಪಿಸಲು ಇದು ಬಹಳ ಮುಖ್ಯ. ಜನತೆ ವಿಚಾರ ಮಾಡಿ ಯಾವ ಪಕ್ಷಕ್ಕೆ ಅಧಿಕಾರ ಕೊಟ್ಟರೆ ದೇಶದ ಹಿತ ಕಾಪಾಡುತ್ತಾರೆ ಎಂದು ತೀರ್ಮಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀರಾಮ ಮಾರ್ಕೆಟ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ಪ್ರಜಾಧ್ವನಿ -02 ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನರೇಂದ್ರ ಮೋದಿಯವರು 10 ವರ್ಷಗಳಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಈ ದೇಶದ ಬಡವರಿಗೆ , ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಈ ವರ್ಗದ ಪರವಾಗಿ ಯಾವತ್ತೂ ಕೆಲಸ ಮಾಡಿಲ್ಲ. ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ. ಸಂವಿಧಾನ, ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿರುವ ಪಕ್ಷ. ಇದನ್ನು ಜನರು ಗಮನದಲ್ಲಿರಿಸಿಕೊಳ್ಳಬೇಕೆಂದರು.

10 ವರ್ಷಗಳಲ್ಲಿ ಬಿಜೆಪಿ ಯಾವ ಭರವಸೆಗಳನ್ನು ಈಡೇರಿಸಿಲ್ಲ: ನರೇಂದ್ರ ಮೋದಿಯವರು ಅವರು 10 ವರ್ಷಗಳಲ್ಲಿ ನೀಡಿದ್ದ ಯಾವ ಭರವಸೆಗಳನ್ನು ಬಗೆಹರಿಸಿಲ್ಲ. ನಾವು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೇ 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೇವೆ. 2023 ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ನೀಡಿ, 82 ಭರವಸೆಗಳನ್ನು ಈಡೇರಿಸಿ 5 ಗ್ಯಾರಂಟಿಗಳನ್ನೂ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿ ಮಾಡಿದ್ದೇವೆ. 195 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿ ಅದರ ಮತ್ತ ಉಳಿತಾಯವಾಗಿದೆ. ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.

ರೈತರ ಸಾಲ ಸಂಪೂರ್ಣ ಮನ್ನಾ: ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ಎಂ.ಎಸ್.ಪಿ ಯನ್ನು ಕಾನೂನಿನ ಚೌಕಟ್ಟಿಗೆ ತರಲಾಗುವುದು. ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಿಲ್ಲ. ಆದರೆ ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72000 ಕೋಟಿ ರು.ಗಳನ್ನು ಮನ್ನಾ ಮಾಡಿದ್ದಾರೆ . ನಮ್ಮ ಅವಧಿಯಲ್ಲಿ ರಾಜ್ಯ ಸರ್ಕಾರ 50,000 ರು.ಗಳ ವರೆಗೆ ಸೊಸೈಟಿಗಳಲ್ಲಿ ಪಡೆದ ಬೆಳೆ ಸಾಲವನ್ನು 27 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತು. 8165 ಕೋಟಿ ರು.ಗಳನ್ನು ಸಾಲ ಮಾಡಿ ಭರಿಸಿತು. ಆದರೆ ನರೇಂದ್ರ ಮೋದಿಯವರು ರೈತರಿಗಾಗಿ ಬೇಡಿಕೆ ಇದ್ದರೂ ಸಾಲ ಮಾಡಿಲ್ಲ. ಆದರೆ ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರು.ಗಳ ಸಾಲ ಮನ್ನಾ ಮಾಡಿದ್ದಾರೆ. ನರೇಂದ್ರ ಮೋದಿಯವರು ಶ್ರೀಮಂತರ ಪರವಾಗಿ ಇದ್ದಾರೆ ಎಂದರು.

ಅದಾನಿ, ಅಂಬಾನಿಗೆ ಸಹಾಯ: ಶೇ.30 ಇದ್ದ ಕಾಪೋರೇಟ್ ತೆರಿಗೆಯನ್ನು ಶೇ.27ಕ್ಕೆ ಇಳಿಸಿ, ಅದಾನಿ, ಅಂಬಾನಿಗೆ ಸಹಾಯ ಮಾಡಿದ್ದಾರೆ. ಸಾಮಾನ್ಯ ಜನರ ಪರೋಕ್ಷ ತೆರಿಗೆಯನ್ನು ಶೇ.50ಕ್ಕೆ ಏರಿಸಿದರು. ಬಡವರು ಮಧ್ಯಮ ವರ್ಗದವರ ತೆರಿಗೆ ಹೆಚ್ಚಿಸಿ, ಶ್ರೀಮಂತರ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಅದಕ್ಕಾಗಿ ಬಿಜೆಪಿಯನ್ನು ತಿರಸ್ಕರಿಸಬೇಕೆಂದು ಕರೆ ನೀಡಿದರು. ಕಿರಿಯ ವಯಸ್ಸಿನ ಸಾಗರ್ ಖಂಡ್ರೆಯವರನ್ನು ನಮ್ಮ ಅಭ್ಯರ್ಥಿಯಾಗಿಸಿದ್ದು, ಅವರಿಗೆ ನಿಮ್ಮ ಮತವನ್ನು ಹಾಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಶಾಸಕ ಬಿ.ಆರ್. ಪಾಟೀಲ್, ಶಾಸಕರಾದ ಅಜಯ್ ಸಿಂಗ್, ಅಭ್ಯರ್ಥಿ ಸಾಗರ್ ಖಂಡ್ರೆ, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.