ಸಾರಾಂಶ
ಚಿತ್ರದುರ್ಗದಲ್ಲಿ ಶುಕ್ರವಾರ ನೂತನವಾಗಿ ಆರಂಭಗೊಂಡ ಪ್ರಜಾ ಕಲ್ಯಾಣ ಸಮಿತಿ ಕೇಂದ್ರ ಕಚೇರಿಯನ್ನು ಲೇಖಕ ಎಚ್.ಆನಂದಕುಮಾರ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭಾರತೀಯ ನೆಲಕ್ಕೆ ಅಂಬೇಡ್ಕರ್ ಸಂವಿಧಾನ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲೇಖಕ ಎಚ್.ಆನಂದ ಕುಮಾರ್ ಹೇಳಿದರು.ಶುಕ್ರವಾರ ಇಲ್ಲಿನ ಪ್ರಜಾ ಕಲ್ಯಾಣ ಸಮಿತಿ ಕೇಂದ್ರ ಕಚೇರಿ ಉದ್ಘಾಟನೆ ಹಾಗೂ ಲೋಗೋ ಅನಾವರಣಗೊಳಿಸಿ ಮಾತನಾಡಿ, ಯಾವುದೇ ಸಂಘಟನೆಗೆ ಸಮಾಜ ಮತ್ತು ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಶಕ್ತಿಯಿರಬೇಕೆಂದರು.
ಅಂಬೇಡ್ಕರ್ ವಕೀಲ ವೃತ್ತಿ ಆರಂಭಿಸಿದ ಪವಿತ್ರವಾದ ದಿನದಂದು ಪ್ರಜಾ ಕಲ್ಯಾಣ ಸಮಿತಿ ಕೇಂದ್ರ ಕಚೇರಿ ಉದ್ಘಾಟಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ದೇಶದಲ್ಲಿ ಅಸ್ಪೃಶ್ಯರು, ಶೋಷಿತರು, ದಲಿತರು, ಹಿಂದುಳಿದವರು ಸೇರಿ ಎಲ್ಲಾ ಜಾತಿ ಧರ್ಮದವರಿಗೂ ಅಂಬೇಡ್ಕರ್ ಸಮಾನತೆ ನೀಡುವುದಕ್ಕಾಗಿಯೇ ಸಂವಿಧಾನವನ್ನು ರಚಿಸಿ ಕೊಡುಗೆಯಾಗಿ ಅರ್ಪಿಸಿದ್ದಾರೆ. ಅಂತಹ ಮಹಾನ್ ನಾಯಕನ ದಾರಿಯಲ್ಲಿ ಎಲ್ಲರೂ ಸಾಗಬೇಕಿದೆ ಎಂದು ಹೇಳಿದರು.ಮೀಸಲಾತಿಯಿಲ್ಲದ ಕಾಲ, ಮನುವಾದ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ದೊಡ್ಡ ದೊಡ್ಡ ಹುದ್ದೆ ಧಿಕ್ಕರಿಸಿ ದೇಶಕ್ಕೆ ಸಂವಿಧಾನ ನೀಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಶ್ವನಾಯಕ ಎನಿಸಿಕೊಂಡರು. ಪರಿಸರವನ್ನು ರಕ್ಷಿಸಿದರೆ ಪ್ರತಿಯೊಂದು ಜೀವಿಯೂ ನೆಮ್ಮದಿಯಾಗಿ ಬದುಕಲು ಸಾಧ್ಯ. ಇಲ್ಲದಿದ್ದರೆ ವಿನಾಶದತ್ತ ಹೋಗಬೇಕಾಗುತ್ತದೆ. ಸಮ ಸಮಾಜ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತು ಎಲ್ಲಿಯೇ ಅನ್ಯಾಯ, ಅಕ್ರಮ, ದಬ್ಬಾಳಿಕೆ, ದೌರ್ಜನ್ಯ ನಡೆದರೂ ಹೋರಾಟಕ್ಕೆ ಮುಂಚೂಣಿಯಲ್ಲಿರಬೇಕೆಂದು ಹೆಚ್.ಆನಂದ್ಕುಮಾರ್ ಕರೆ ನೀಡಿದರು.
ಪ್ರಜಾ ಕಲ್ಯಾಣ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಹರೀಶ್ ಟಿ.ಎನ್ ಅಧ್ಯಕ್ಷತೆ ವಹಿಸಿದ್ದರು.ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಾನಪದ ಜಾಗೃತಿ ಪರಿಷತ್ ರಾಜ್ಯಾಧ್ಯಕ್ಷ ಎಚ್.ಪ್ಯಾರೇಜಾನ್, ಪ್ರಜಾ ಕಲ್ಯಾಣ ಸಮಿತಿ ರಾಜ್ಯ ಕಾನೂನು ಸಲಹೆಗಾರರಾದ ಪಲ್ಲವಿ ಸಿ. ಸಂಘಟನಾ ಕಾರ್ಯದರ್ಶಿ ಸುಶಾಂತ್ಕುಮಾರ್ ಆರ್. ಪ್ರಧಾನ ಕಾರ್ಯದರ್ಶಿ ವಿಜಯ್ಕುಮಾರ್ ಕೆ.ವಿ, ಉಪಾಧ್ಯಕ್ಷ ಟಿ.ಓಬಳೇಶ್, ಖಜಾಂಚಿ ಆರ್.ಅರುಣ್ಕುಮಾರ್, ಶ್ರೀನಿವಾಸ್ನಾಯ್ಕ ವಿ ಈ ಸಂದರ್ಭದಲ್ಲಿ ಹಾಜರಿದ್ದರು.