ಸಾರಾಂಶ
ವಿಜಯಪುರ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ, ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಹೇಳಿಕೆಗಳನ್ನು ಕೊಟ್ಟು ದಲಿತರ ಮತಗಳನ್ನು ಕ್ರೋಢೀಕರಿಸಿಕೊಳ್ಳುವ ತಂತ್ರಗಾರಿಕೆ ಈ ಬಾರಿ ನಡೆಯುವುದಿಲ್ಲ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಲಿತರನ್ನು ಕೇವಲ ಮತ ಬ್ಯಾಂಕನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವುದಕ್ಕೆ ಯಾವ ಅಂಶಗಳಿಲ್ಲದೆ, ಸಂವಿಧಾನದ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ೧೦೦ಕ್ಕೂ ಹೆಚ್ಚು ಬಾರಿ ಸಂವಿಧಾನದಲ್ಲಿ ತಿದ್ದುಪಡಿಗಳನ್ನು ಮಾಡಿರುವುದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳನ್ನು ಡಾ.ಕೆ.ಸುಧಾಕರ್ ಅವರಿಗೆ ಕೊಟ್ಟರೆ, ಮಂಡ್ಯದಲ್ಲಿ ಬಿಜೆಪಿ ಮತಗಳು ಕುಮಾರಸ್ವಾಮಿ ಅವರಿಗೆ ಲಭಿಸುತ್ತವೆ. ಅವರು ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ. ಈ ರಾಷ್ಟ್ರಕ್ಕೆ ಒಳ್ಳೆಯದಾಗುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದರೂ ಕಾರ್ಯಕರ್ತರ ಮನಸ್ಸುಗಳು ಒಂದಾಗಲಿಲ್ಲ. ಜೆಡಿಎಸ್ ಕಾರ್ಯಕರ್ತರೂ ಬಿಜೆಪಿಗೆ ಮತ ಹಾಕಿದ್ದರು. ಆದರೆ, ಈ ಬಾರಿ ನಾವು ನೇರವಾಗಿ ಬಿಜೆಪಿಗೆ ಮತ ಕೇಳುವ ಅವಕಾಶ ಬಂದಿದೆ ಎಂದರು.ಮುಖಂಡರಾದ ಬುಳ್ಳಹಳ್ಳಿ ರಾಜಪ್ಪ, ಹನುಮಂತಪ್ಪ ಚಿಕ್ಕನಹಳ್ಳಿ ಸುಬ್ಬಣ್ಣ, ಬಿಜೆಪಿ ಮುಖಂಡರಾದ ಪಿಳ್ಳಮುನಿಶಾಮಪ್ಪ, ಜಿ.ಚಂದ್ರಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಹೋಬಳಿ ಅಧ್ಯಕ್ಷ ಪುರ ಕೃಷ್ಣಪ್ಪ, ಬಿ.ಚೇತನ್ ಗೌಡ, ನಾರಾಯಣಸ್ವಾಮಿ, ತಾಪಂ ಮಾಜಿ ಸದಸ್ಯ ಭೀಮರಾಜು, ಗೊಡ್ಲುಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಜಗದೀಶ್, ಬಿಜ್ಜವರ ಪಂಚಾಯಿತಿ ಅಧ್ಯಕ್ಷ ಎಸ್.ಮಹದೇವಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಕನಕರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಮೂಲ್ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್, ಕಲ್ಯಾಣ್ ಕುಮಾರ್ ಬಾಬು, ಮುದ್ದೇನಹಳ್ಳಿ ಮುರಳಿ, ಸಿ.ಮಾಲ, ಅನಿಲ್ ಕುಮಾರ್, ಮುನಿರಾಜು, ಬೈರೇಗೌಡ,ಟಿ.ರವಿ, ಮಲ್ಲೇಪುರ ಶ್ರೀನಿವಾಸ್, ಶಿವಾನಂದ, ತಿರುಮಲೇಶ್, ಮುನಿರಾಜು ಹಾಜರಿದ್ದರು.