ಕೊಟ್ಟೂರು; ಪಟ್ಟಣದಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿನ 50 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಕಾಮಗಾರಿ ಪೂರ್ಣಗೊಂಡ ನಂತರ ವಿವಿಧ ಸೌಲಭ್ಯವುಳ್ಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಜೊತೆಗೆ ಹೆಚ್ಚುವರಿ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಲಿದೆ ಎಂದು ಶಾಸಕ ಕೆ ನೇಮರಾಜ ನಾಯ್ಕ್ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಒಳಾವರಣದಲ್ಲಿ 30 ರಿಂದ 50 ಹಾಸಿಗೆಗಳ ₹6.45 ಕೋಟಿ ವೆಚ್ಚದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

100 ಹಾಸಿಗೆಗಳ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಬೇಕೆಂಬ ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆಗೆ ಸರ್ಕಾರ ಇದೀಗ ಕೇವಲ 50 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಮುಂಬರುವ ವರ್ಷಗಳಲ್ಲಿ ಖಂಡಿತ ತಾಲೂಕು ಮಟ್ಟದ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರದ ಮೇಲೆ ಒತ್ತಡ ತರುವೆ ಎಂದರು.

ಕೊಟ್ಟೂರು ಪಪಂನ್ನು ಪುರಸಭೆಯನ್ನಾಗಿ ಮಾಡುವಂತೆ ಈಗಾಗಲೇ ಸಚಿವ ರಹೀಮ್ ಖಾನ್ ಅವರನ್ನು ಒತ್ತಾಯಿಸಲಾಗಿದೆ. ಈ ಸಂಬಂಧ ಮುಂದಿನ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ. ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ ಮತ್ತು ಕೊಟ್ಟೂರಿಗೆ ಅನುದಾನ ನೀಡದೇ ಸರ್ಕಾರ ತಾರತಮ್ಯ ಮಾಡಿದ್ದು ನಿಜಕ್ಕೂ ದುರಂತದ ವಿಷಯ ಎಂದರು.

ಅಮೃತ್‌ 2 ಯೋಜನೆಯಲ್ಲಿ ಕೊಟ್ಟೂರಿಗೆ ಪ್ರತ್ಯೇಕ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದಕ್ಕೆಂದೇ ಪ್ರತ್ಯೇಕ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದೆ ಎಂದರು.


ಕೊಟ್ಟೂರಿನಲ್ಲಿ ಬಸ್ ನಿಲ್ದಾಣ, ಡಿಪೋ ನಿರ್ಮಾಣವನ್ನು ಸಹ ಅಕ್ಕಪಕ್ಕದಲ್ಲಿ ನಿರ್ಮಿಸಲು ಮುಂಬರುವ ವರ್ಷದಲ್ಲಿ ಕ್ರಮ ಕೈಗೊಳ್ಳುವೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ತಹಶೀಲ್ದಾರ್ ಅಮರೇಶ್ ಜಿ.ಕೆ., ಆಡಳಿತ ವೈದ್ಯಾಧಿಕಾರಿ ಡಾ.ಬದ್ಯನಾಯ್ಕ್, ತಾಲೂಕು ಪ್ರಭಾರ ಆಡಳಿತ ಅಧಿಕಾರಿ ಡಾ.ಚಿರಂಜೀವಿ, ಪಪಂ ಮಾಜಿ ಸದಸ್ಯ ಬಾವಿಕಟ್ಟೆ ಶಿವಾನಂದ, ಎಚ್.ಗುರುಬಸವರಾಜ್, ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ, ತಾಪಂ ಎಡಿ ವಿಜಯಕುಮಾರ್, ಗಂಗಮ್ಮನಹಳ್ಳಿ ಬಸವರಾಜ, ತಿಮ್ಮಲಾಪುರ ಕೊಟ್ರೇಶ್, ಗುರು ಮತ್ತಿತರರು ಇದ್ದರು.