ಸಾರಾಂಶ
ನಾವು ಶೈಕ್ಷಣಿಕವಾಗಿ ಅಭಿವೃದ್ಧಿಯಾದರೂ ಇನ್ನೊಂದು ಕಡೆ ಮಾನವೀಯ ಮೌಲ್ಯಗಳಿಂದ ದೂರಾಗುತ್ತಿದ್ದೇವೆ.
ಹಳಿಯಾಳ: ನಾವು ಶೈಕ್ಷಣಿಕವಾಗಿ ಅಭಿವೃದ್ಧಿಯಾದರೂ ಇನ್ನೊಂದು ಕಡೆ ಮಾನವೀಯ ಮೌಲ್ಯಗಳಿಂದ ದೂರಾಗುತ್ತಿದ್ದೇವೆ. ಹಿರಿಯರಿಗೆ ಗೌರವ, ದೇವರ ಭಕ್ತಿ, ಸ್ಮರಣೆ, ಸಂಸ್ಕೃತಿ, ಸಂಪ್ರದಾಯಗಳ ಕೊರತೆ ಕಾಣುತ್ತಿದ್ದೇವೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯವರು ಆಯೋಜಿಸಿದ ಕಾರ್ಯಕ್ರಮದಲ್ಲಿ ದಿ.ಮುಖ್ಯಮಂತ್ರಿ ದೇವರಾಜ್ ಅರಸ ಭವನದ ಬಳಿ ಆಯೋಜಿಸಿದ ಕಾರ್ಯಕ್ರಮದಲ್ಲಿ ₹5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಮಕ್ಕಳಲ್ಲಿ ಹಾಗೂ ಯುವಜನಾಂಗದಲ್ಲಿ ಶಿಸ್ತು, ಸಮಯ ಪ್ರಜ್ಞೆ, ಚಾರಿತ್ರ್ಯ ನಿರ್ಮಾಣದ ಬಗ್ಗೆ ನಿರಾಸಕ್ತಿ ಕಾಣುತ್ತಿದೆ. ಭವಿಷ್ಯದ ಹಿತದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆಯಲ್ಲ. ಇದು ಆಗಬಾರದು ಇದು ಸರಿಯಲ್ಲ ಎಂದರು. ವಿದ್ಯೆಗೆ ಕೊನೆಯೆಂಬುದಿಲ್ಲ, ವಿದ್ಯೆ ಸಂಪಾದನೆ ಮಾಡಿದಷ್ಟು ಒಳ್ಳೆಯದು, ಯುವಸಮೂಹ ಮತ್ತು ಮಕ್ಕಳು ಜೀವನದಲ್ಲಿ ಉತ್ತಮ ಪ್ರಜೆಯಾಗುವ ಸಂಕಲ್ಪಗಳೊಂದಿಗೆ ಭವ್ಯ ಭವಿಷ್ಯದ ಯೋಜನೆಯನ್ನು ರೂಪಿಸಿಕೊಂಡು ಹೆಜ್ಜೆಯಿಡಿ ಎಂದರು.
ತಾಪಂ ಇಒ ವಿಲಾಸರಾಜ್, ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಜಿಪಂ ಎಇಇ ಸತೀಶ್ ಆರ್. ಹುಡ್ಕೊಂ, ಇಲಾಖೆಯ ಎಇಇ ಜ್ಞಾನೇಶ್ವರ ಗುನಗಿ, ಪುರಸಭಾ ನಾಮನಿರ್ದೇಶಿತ ಸದಸ್ಯ ರವಿ ತೋರಣಗಟ್ಟಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುಜಾತಾ ಖಡತರೆ, ಗುತ್ತಿಗೆದಾರ ಚವ್ಹಾನ ಇದ್ದರು. ಚಿದಾನಂದ ಕಾರ್ಯಕ್ರಮ ನಿರ್ವಹಿಸಿದರು.