ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ರಾಘವೇಂದ್ರಸ್ವಾಮಿಗಳ ಮಠದ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ ಭೋಜನ ಶಾಲೆ ಮತ್ತು ಹತ್ತಾರು ಕೊಠಡಿಗಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕರು ವೇ. ಕನಕಾಚಾರ್ಯರು ತಿಳಿಸಿದರು.ರಾಮನಾಥಪುರ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೂಜಾ ಕೈಂಕರ್ಯದ ನಂತರ ಮಾತನಾಡಿದ ಅವರು, ಶ್ರೀ ರಾಘವೇಂದ್ರಸ್ವಾಮಿಗಳ ಹೆಸರಿನಲ್ಲಿರುವ ಜಾಗದಲ್ಲಿ ಭಕ್ತರಿಗಾಗಿ ವಸತಿಗೃಹ ಹಾಗೂ ಭೋಜನಶಾಲೆಯ ನಿರ್ಮಾಣಕ್ಕಾಗಿ ಇತ್ತೀಚೆಗೆ ರಾಮನಾಥಪುರಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಡಾ. ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಇಲ್ಲಿಯ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿದ ಸಂದರ್ಭದಲ್ಲಿ ಶ್ರೀಗಳು ರಾಮನಾಥಪುರವನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಇಂತಹ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಲಭಾಗದ ರಸ್ತೆ ಪಕ್ಕದಲ್ಲಿರುವ ಕಾವೇರಿ ನದಿ ತೀರದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳು ಚಾತುರ್ಮಾಸೆ ಮಾಡಿದ ಪುಣ್ಯಸ್ಥಳವಾಗಿದೆ. ಇಂತಹ ಸ್ಥಳದಲ್ಲಿ ಬಂದಂತಹ ಯಾತ್ರಿಕರಿಗೆ ಅನುಕೂಲವಾಗುವಂತೆ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರು ಪೂಜಿಸುತ್ತಿದ್ದ ಪ್ರಾಣದೇವರನ್ನು ಇಲ್ಲಿ ಪ್ರತಿಷ್ಠಾಪಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಇಲ್ಲಿಯ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಮತ್ತು ಸ್ಥಳೀಯ ಭಕ್ತಾದಿಗಳ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ಆ ಜಾಗ ಭಗವಂತನದಾಗಿರುವುದರಿಂದ ಭಕ್ತಾದಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಡಬೇಕೆಂಬುದು ನಮ್ಮ ಅಭಿಪ್ರಾಯ. ಇದರ ಜವಾಬ್ದಾರಿಯನ್ನು ಸ್ಥಳೀಯ ಶಾಸಕರು ಸಹ ಶ್ರೀ ರಾಘವೇಂದ್ರ ಸ್ವಾಮಿಗಳವರ ಸೇವೆಯನ್ನು ಸಹಕರಿಸಿ ಎಂದು ಶಾಸಕರು ಎ. ಮಂಜು ಅವರಲ್ಲಿ ಶ್ರೀಗಳು ಬಿನ್ನವಿಸಿದ್ದರು. ಈ ಸ್ಥಳದಲ್ಲಿ ಈವಾಗ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.ಇದೇ ವೇಳೆ ಕಾಮಗಾರಿಗೆ ಹೆಚ್ಚಿನ ಸಹಾಯ ಸಹಕಾರ ನೀಡಿ ಈ ಕಾಮಗಾರಿ ಬೇಗ ಮುಗಿಸಲು ಭಕ್ತರು ಸಹಾಯ ಮಾಡುವಂತೆ ಶ್ರೀಮಠದ ಕನಕಾಚಾರ್ಯರು ಮನವಿ ಮಾಡಿದರು.