ವಾಸದ ಮನೆಗಳ ಪಕ್ಕದಲ್ಲೇ ಓವರ್ ಹೆಡ್ ಟ್ಯಾಂಕ್ ನಿರ್ಮಾಣ

| Published : Jun 01 2025, 02:35 AM IST

ಸಾರಾಂಶ

ಹೊಡಾಘಟ್ಟ ಗ್ರಾಮದ ಮಧ್ಯಭಾಗದಲ್ಲಿ ನಿವಾಸಿಗಳ ಮನೆಗಳ ಸಮೀಪವೇ ನಿಯಮಬಾಹಿರ ಮತ್ತು ಅವೈಜ್ಞಾನಿಕವಾಗಿ ಕುಡಿಯುವ ನೀರಿನ ದೊಡ್ಡ ಟ್ಯಾಂಕ್ ನಿರ್ಮಾಣ ಮಾಡುತ್ತಿರುವುದು ಆತಂಕ ಉಂಟುಮಾಡಿದೆ. ಜೆಜೆಎಂ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಾಸದ ಮನೆಗಳ ಅಕ್ಕ-ಪಕ್ಕದಲ್ಲಿ ಅವೈಜ್ಞಾನಿಕ ಮತ್ತು ನಿಯಮಬಾಹಿರವಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡುತ್ತಿರುವುದನ್ನು ನಿಲ್ಲಿಸುವಂತೆ ತಾಲೂಕಿನ ದೊಡ್ಡಗರುಡನಹಳ್ಳಿ ಗ್ರಾಮ ಪಂಚಾಯ್ತಿ ವಾಪ್ತಿಯ ಹೊಡಾಘಟ್ಟ ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹೊಡಾಘಟ್ಟ ಗ್ರಾಮದ ಮಧ್ಯಭಾಗದಲ್ಲಿ ನಿವಾಸಿಗಳ ಮನೆಗಳ ಸಮೀಪವೇ ನಿಯಮಬಾಹಿರ ಮತ್ತು ಅವೈಜ್ಞಾನಿಕವಾಗಿ ಕುಡಿಯುವ ನೀರಿನ ದೊಡ್ಡ ಟ್ಯಾಂಕ್ ನಿರ್ಮಾಣ ಮಾಡುತ್ತಿರುವುದು ಆತಂಕ ಉಂಟುಮಾಡಿದೆ. ಜೆಜೆಎಂ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಟ್ಯಾಂಕ್ ನಿರ್ಮಾಣ ಮಾಡುತ್ತಿರುವ ಸ್ಥಳದಿಂದ ಕೇವಲ ಮೂರಾಲ್ಕು ಅಡಿ ಅಂತರದಲ್ಲಿ ನಾಲ್ಕು ದಿಕ್ಕುಗಳಲ್ಲೂ ವಾಸದ ಮನೆಗಳಿವೆ. ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ತಿರುಗಾಡಲೂ ಸಹ ಆಗದಂತೆ ಅಕ್ಕ-ಪಕ್ಕ ನಿವಾಸಿಗಳ ಒಪ್ಪಿಗೆ ಇಲ್ಲದಿದ್ದರೂ ದೊಡ್ಡ ಅನಾಹುತವನ್ನು ತಂದೊಡ್ಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು ಸೇರಿ ಏಕಾಏಕಿ ಸ್ಥಳಕ್ಕೆ ಜೆಸಿಬಿ ವಾಹನದಿಂದ ತುಂಬಾ ಆಳವಾದ ಅಡಿಪಾಯವನ್ನು ತೋಡಿದ್ದು ಜನರಿಗೆ ಹಾಗೂ ಜಾನುವಾರುಗಳಿಗೆ ತುಂಬಾ ತೊಂದರೆಯಾಗುವ ರೀತಿಯಲ್ಲಿ ಕಾಮಗಾರಿ ಮಾಡಿದ್ದಾರೆ. ಜೆಜೆಎಂ ಯೋಜನೆಯಡಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಊರಿನ ಹೊರಭಾಗದಲ್ಲಿ ಸಾಕಷ್ಟು ಜಾಗಗಳಿದ್ದರೂ ಅಲ್ಲಿ ನಿರ್ಮಿಸದೆ ವಿನಾಕಾರಣ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅಲ್ಲದೇ, ಟ್ಯಾಂಕ್ ನಿರ್ಮಾಣ ಮಾಡಲು ಮತ್ತೊಂದು ಜಾಗದಲ್ಲಿ ಪಾಯ ತೆಗದು ಕೆಲಸ ಆರಂಭಿಸಿ ನಿಲ್ಲಿಸಿದ್ದಾರೆ. ಟ್ಯಾಂಕ್ ನಿರ್ಮಾಣ ಮಾಡಲು ಇರುವ ಮಾನದಂಡಗಳನ್ನು ಅನುಸರಿಸದೆ ಅವೈಜ್ಞಾನಿಕವಾಗಿ ಸುತ್ತಲೂ ಎತ್ತರದ ಎರಡು ಪಟ್ಟು ಜಾಗವಿಲ್ಲದ ಕಿಷ್ಕಿಂಧ ಸ್ಥಳದಲ್ಲಿ ನಿರ್ಮಿಸುತ್ತಿದ್ದಾರೆ ಎಂದು ದೂರಿದರು.

ಸ್ಥಳೀಯ ನಿವಾಸಿಗಳಿಗೆ ಯಾವ ಸಮಯದಲ್ಲಿ ನಮ್ಮ ಮನೆಗಳ ಮೇಲೆ ಟ್ಯಾಂಕ್ ಬೀಳುವುದೋ ಎಂಬಾ ಆತಂಕದಲ್ಲಿ ಮುಂದೆ ಜೀವನ ಮಾಡಬೇಕಾಗಿದ್ದು, ಕೂಡಲೇ ಗ್ರಾಮದ ಹೊರಬಾಗದಲ್ಲಿ ಓವರ್ ಹೆಡ್ ಟ್ಯಾಂಕನ್ನು ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

ಗ್ರಾಮದ ಮುಖಂಡರಾದ ಅನುಪಮಾ, ರಾಜು, ಪಟೇಲ್ ಆನಂದ್, ರಾಮೇಗೌಡ, ಗೀತಾ ಮೋಹನ್, ಮಂಜುನಾಥ್ ಮತ್ತಿತರರಿದ್ದರು.