ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸುಸಜ್ಜಿತ ಶ್ರೀ ಕಂಠೀರವ ಸ್ಟುಡಿಯೋ ಶಾಖೆ ಹಾಗೂ ಕಿರು ಫಿಲ್ಮ್ ಸಿಟಿ (ಸ್ಮಾಲ್ ಫಿಲ್ಮ್ ಸಿಟಿ) ನಿರ್ಮಿಸುವ ಬಹುನಿರೀಕ್ಷಿತ ಯೋಜನೆಯ ಉದ್ದೇಶದಿಂದಾಗಿ ಶುಕ್ರವಾರ ಸ್ಥಳ ಪರಿಶೀಲನೆ ಹಾಗೂ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಲಾಗಿದೆ ಎಂದು ಶ್ರೀ ಕಂಠೀರವ ಸ್ಟುಡಿಯೋ ಸಂಸ್ಥೆಯ ಅಧ್ಯಕ್ಷರಾದ ಮಹಬೂಬ್ ಪಾಷ ತಿಳಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ತ್ಯಾಜವಳ್ಳಿ ಗ್ರಾಮದ ಸರ್ವೆ ನಂಬರ್ 60 ಮತ್ತು 27 ರಲ್ಲಿರುವ ಜಮೀನಿನ ಜಂಟಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಜಿ.ಎಸ್., ತಹಸೀಲ್ದಾರ್ ರಾಜೀವ್ ಕುಮಾರ್, ಉಪ ತಹಸೀಲ್ದಾರ್ ಸಂಧ್ಯಾ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನಿಯೋಗವನ್ನು ಬರಮಾಡಿಕೊಂಡು ಸೂಕ್ತ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

ಸ್ಥಳ ಪರಿಶೀಲನೆಯ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಶೀಲಿಸಿದ ತ್ಯಾಜುವಳ್ಳಿಯ ಜಮೀನು ಸ್ಟುಡಿಯೋ ಹಾಗೂ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಂಪೂರ್ಣ ಸೂಕ್ತವಾಗಿದ್ದು ಯೋಜನೆಯ ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಫಿಲ್ಮ್ ಸಿಟಿ ಯೋಜನೆ:


ಸ್ಟುಡಿಯೋಗಾಗಿ ಕನಿಷ್ಠ 25 ಎಕರೆ ಜಮೀನಿನ ಬೇಡಿಕೆ ಇಡಲಾಗಿದೆ. ಗರಿಷ್ಠ ಜಮೀನು ಲಭ್ಯವಾದರೆ ಸ್ಟುಡಿಯೋ ಜೊತೆಗೆ ಒಂದು ಬೃಹತ್ ''''''''ಕಿರು ಫಿಲ್ಮ್ ಸಿಟಿ'''''''' ನಿರ್ಮಿಸಲು ಉದ್ದೇಶಿಸಲಾಗಿದೆ.

ಸ್ಥಳೀಯರಿಗೆ ಉದ್ಯೋಗಾವಕಾಶ: ಇದರಿಂದ ಮಲೆನಾಡು ಭಾಗದ ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞರಿಗೆ ವ್ಯಾಪಕ ಉದ್ಯೋಗ ಲಭಿಸಲಿದೆ. ಚಿತ್ರೀಕರಣಕ್ಕಾಗಿ ಪ್ರತಿಯೊಬ್ಬರೂ ಬೆಂಗಳೂರಿಗೆ ಅಲೆಯುವುದು ತಪ್ಪಲಿದ್ದು, ಸಮಯ ಹಾಗೂ ವೆಚ್ಚ ಉಳಿತಾಯವಾಗುವುದರ ಜೊತೆಗೆ ಶಿವಮೊಗ್ಗದ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ.

ತ್ಯಾಜವಳ್ಳಿಯ ಪ್ರದೇಶವು ಹೊರಾಂಗಣ ಚಿತ್ರೀಕರಣಕ್ಕೆ ನೈಸರ್ಗಿಕ ಸೌಂದರ್ಯ ಹೊಂದಿದ್ದು, ಆಂತರಿಕ (ಇನ್ ಡೋರ್) ಸೆಟ್‌ಗಳನ್ನು ನಿರ್ಮಿಸಿದರೆ ಚಿತ್ರರಂಗಕ್ಕೆ ಒಂದೇ ಸೂರಿನಡಿ ಸಕಲ ಸೌಲಭ್ಯ ದೊರೆಯಲಿದೆ. ಕಂದಾಯ ಇಲಾಖೆಯು ಶೀಘ್ರದಲ್ಲೇ ಜಮೀನು ಮಂಜೂರಾತಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದೆ. ತದನಂತರ ಜಿಲ್ಲಾಧಿಕಾರಿ ಅವರು ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಲಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.