- ಕೆಂಪೇಗೌಡ ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ ಕಡೂರು

ಮುಂದಿನ ದಿನಗಳಲ್ಲಿ ಕಡೂರು ಪಟ್ಟಣದಲ್ಲಿ ತಾಲೂಕಿನ ವಕ್ಕಲಿಗ ಸಮಾಜದಿಂದ ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಶನಿವಾರ ತಾಲೂಕು ಪಂಚಾಯ್ತಿಯಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ರಾಜ್ಯದ ಅಭಿವೃದ್ಧಿಗೆ ವಕ್ಕಲಿಗ ಸಮಾಜದ ಎಸ್. ಎಂ. ಕೃಷ್ಣ ವಿಕಾಸ ಸೌಧ, ಕುಮಾರಸ್ವಾಮಿ ಸುವರ್ಣ ಸೌಧ ನಿರ್ಮಿಸಿ ಕೂಡುಗೆ ಸಲ್ಲಿಸಿದ್ದಾರೆ. ಅವರದೇ ಸಾಲಿನಲ್ಲಿ ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಗುತ್ತಿದ್ದು 8 ಭಾರಿ ಆಯ್ಕೆಗೊಂಡು ರಾಜ್ಯವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಲೂಕಿನ ವಕ್ಕಲಿಗ ಸಮಾಜದ ತೆಲುಗುಗೌಡ ಮತ್ತು ಸರ್ಪ ವಕ್ಕಲಿಗರ ಮುಖಂಡರನ್ನು ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ಸಮಾಜದ ಗುರುಗಳು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿಸುವ ಪ್ರಯತ್ನ ಮಾಡಲಾಗುವುದು ಎಂದರು.


ಕಡೂರು ತಾಲೂಕಿನಲ್ಲಿ ಸಮಾಜದ ಸಂಘಟನೆ ಇದೆ. ಪಟ್ಟಣದ ವಕ್ಕಲಿಗ ಸಮಾಜದ ರಾಜು ಅವರನ್ನು ಕಡೂರು ಪುರಸಭೆ ಅಧ್ಯಕ್ಷರನ್ನಾಗಿ ಮಾಡಲಾಗಿದ್ದು ನಾನು ಈ ಸಮಾಜದೊಂದಿಗೆ ಸದಾ ಇರುತ್ತೇನೆ ಎಂದರು.

ಅಧ್ಕ್ಷಕ್ಷತೆ ವಹಿಸಿದ್ದ ತಹಸೀಲ್ದಾರ್ ಸಿ. ಎಸ್. ಪೂರ್ಣಿಮಾ ಮಾತನಾಡಿ ದೂರದೃಷ್ಟಿ ನಾಯಕರಾಗಿದ್ದ ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡರು ಎಲ್ಲ ಸಮಾಜಗಳು ಮತ್ತು ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡುವ ಮುಖೇನ ಬೆಂಗಳೂರನ್ನು ಕಟ್ಟಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ನಾಡು, ನುಡಿ ಮತ್ತು ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ ಕೆಂಪೇಗೌಡರು ಎಲ್ಲ ಸಮುದಾಯಗಳ ಆಸ್ತಿ ಎಂದು ಹೇಳಿದರು.

ಮುಖಂಡ ಟಿ.ಆರ್. ಲಕ್ಕಪ್ಪ ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವಾಗ ಪೇಟೆಗಳನ್ನು ರಚಿಸಿ ವೃತ್ತಿಗೆ ಅನುಗುಣವಾಗಿ ಎಲ್ಲ ವರ್ಗದವರು ವ್ಯಾಪಾರ ಮಾಡುವ ಮೂಲಕ ಅಭಿವೃದ್ಧಿ ಹೊಂದಲು ಕಾರಣಕರ್ತರು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಸಿ.ಆರ್. ಪ್ರವೀಣ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರುದ್ರೇಗೌಡ, ಗೋಪಿಕುಮಾರ್, ಕೃಷ್ಣಕುಮಾರ್, ಲೋಕೇಶ್ ಹಾಗು ವಕ್ಕಲಿಗೆ ಸಮಾಜದ ವಿವಿಧ ಮುಖಂಡರು ಇದ್ದರು.

27ಕೆಕೆಡಿಯು1. ಕಡೂರು ಪಟ್ಟಣದ ತಾಪಂನಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಶಾಸಕ ಕೆ. ಎಸ್. ಆನಂದ್ ಉಧ್ಘಾಟಿಸಿ ಮಾತನಾಡಿದರು.