ಪ್ರತಿ ತಾಲೂಕಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣ

| Published : Jun 23 2025, 11:49 PM IST

ಪ್ರತಿ ತಾಲೂಕಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣ ಕೆಲಸ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣ ಕೆಲಸ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

ನವನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ಸಮುದಾಯ ಭವನದಡಿ ನಿರ್ಮಿಸಲಾದ ಧಾತ್ರಿ ಮಂಗಲ ಭವನ ಹಾಗೂ ಉತ್ಕರ್ಷ ಪೊಲೀಸ್ ನಿವಾಸ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪ್ರತಿ ಪೊಲೀಸ್ ಕುಟುಂಬಕ್ಕೆ ಸುಸಜ್ಜಿತವಾದ ವಸತಿ ನಿರ್ಮಿಸುವ ಕಾರ್ಯ ಕೈಗೊಂಡಿದ್ದು, ಈಗಾಗಲೇ ಶೇ,40ರಷ್ಟು ಮಾತ್ರ ಆಗಿದ್ದು, ಶೇ.60 ನಿರ್ಮಾಣ ಮಾಡಲು ಮುಖ್ಯಮಂತ್ರಿಗಳಲ್ಲಿ ಕೇಳಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರತಿಯೊಬ್ಬ ಪೊಲೀಸರಿಗೂ ಮನೆ ಇರಬೇಕು. ಅವರಿಗೆ ವಸತಿ ಗೃಹ ನಿರ್ಮಿಸೋದು ನಮ್ಮ ಉದ್ದೇಶ. ಈ ಹಿಂದೆ ಆರೋಗ್ಯ ತಪಾಸಣೆಗೆ ನೀಡುತ್ತಿದ್ದ ₹1000ನ್ನು ₹1500ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಹಾಗೂ ಜಿಲ್ಲೆಗಳಲ್ಲಿ ಅಪರಾಧ ಸಂಖ್ಯೆಗಳ ಸರಾಸರಿ ಗಮನಿಸಿದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ. ಹಾಗೆಂದ ಮಾತ್ರಕ್ಕೆ ಅಪರಾಧಗಳು ನಡೆದಿಲ್ಲ ಎನ್ನುವಂತಿಲ್ಲ. ಬೇರೆ ಬೇರೆ ಕಾರಣಗಳಿಂದ ಪ್ರಕರಣಗಳು ನಡೆಯುತ್ತಿವೆ. ಆದರೂ ಮೊದಲಿಗಿಂತ ಕಡಿಮೆ ಪ್ರಮಾಣದಲ್ಲಿವೆ ಎಂದು ಸಮರ್ಥಿಸಿಕೊಂಡರು.

ಪೊಲೀಸ್ ಇಲಾಖೆ ಸುಭದ್ರಗೊಳಿಸಲು ಹೊಸ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರ ಹೊರತರಲಾಗುತ್ತಿದ್ದು, ಪ್ರತಿ ಜಿಲ್ಲೆಗೊಂದು ಸೈಬರ್ ಠಾಣೆ ತೆಗೆಯಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಇತ್ತೀಚೆಗೆ ಆಗುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಕಾರ್ಯ ಮಾಡಲಾಗುತ್ತಿದೆ. ಪ್ರತಿ ತಾಲೂಕು ಕೇಂದ್ರದಲ್ಲಿ ಪೊಲೀಸ್ ವಸತಿಗೃಹ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗಿದೆ. ನಮ್ಮ ಅಧಿಕಾರ ಅವಧಿಯಲ್ಲಿ ಮೂರು ಬಾರಿ ಗೃಹಮಂತ್ರಿಯಾಗಿ ಮಾಡಿದ ಕಾರ್ಯಗಳು ದೇಶದಲ್ಲಿ ಹೆಸರು ಮಾಡಿದ್ದು, ದೇಶದಲ್ಲಿ ಕರ್ನಾಟಕದ ಪೊಲೀಸ್ ವ್ಯವಸ್ಥೆ ಅಗ್ರಸ್ಥಾನದಲ್ಲಿದೆ ಎಂದರು.

ಬಾಗಲಕೋಟೆ ಜಿಲ್ಲಾ ಪೊಲೀಸ್ ಜನ ಕಲ್ಯಾಣ ಕಾರ್ಯ ಮಾಡಿದ್ದು, ಈ ಕಾರ್ಯಕ್ಕಾಗಿ ಇಲಾಖೆಯಿಂದ ಯಾವುದೇ ಅನುದಾನ ನೀಡಿಲ್ಲ. ಜಿಲ್ಲೆಯ ಖನಿಜ ಸಂಪತ್ತಿನ ಮೇಲೆ ವಿಧಿಸಲಾದ ಕರ ₹1 ಕೋಟಿ, 2021-22ನೇ ಸಾಲಿನಲ್ಲಿ ಅಭಿವೃದ್ಧಿಗಾಗಿ ನಗಸಭೆಯಿಂದ ₹50 ಲಕ್ಷ, 2022ರ ಪೊಲೀಸ್ ಕಲ್ಯಾಣ ನಿಧಿಯಿಂದ ₹2.55 ಕೋಟಿ ಒಟ್ಟಾರೆ ₹ 4.5 ಕೋಟಿ ವೆಚ್ಚದಲ್ಲಿ ಸುಂದರವಾದ ಮಂಗಲ ಭವನ ಹಾಗೂ ಪೊಲೀಸ್ ನಿವಾಸ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಪೊಲೀಸ್ ಇಲಾಖೆ ಸಾರ್ವಜನಿಕರ ಕ್ಷೇತ್ರದಲ್ಲಿ ಭಯ ಹುಟ್ಟಿಸುವ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಎರಡೂ ಕಾರ್ಯಗಳನ್ನು ವಾತಾವರಣಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಜನಸ್ನೇಹಿ ಪೊಲೀಸ್ ಕಾರ್ಯಕ್ಕೆ ಎಚ್ಚರಿಕೆಯ ಕೊರತೆ ಕಂಡುಬರುತ್ತದೆ. ಆದ ಕಾರಣ ಜನಸ್ನೇಹಿ ಜೊತೆಗೆ ಅಪರಾಧಿಗಳಿಗೆ ಹಾಗೂ ಅಪರಾಧ ಮಾಡಬಾರದೆಂಬ ಸಂದೇಶ ಕೊಡುವ ನಿಟ್ಟಿನಲ್ಲಿ ಭಯ ಹುಟ್ಟಿಸುವ ಕಾರ್ಯವನ್ನೂ ಸಹ ಪೊಲೀಸ್ ಇಲಾಖೆ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಶಾಂತಿ ನೆಲಸಲು ಕಾರಣರಾಗಿದ್ದಾರೆ. ಸಮಾಜವೆಂದ ಮೇಲೆ ಕಷ್ಟ ಹಾಗೂ ಸುಖ ಬರುವುದು ಸಹಜ ಎಂದರು.ಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡಿ, ಮಂಗಲಭವನವನ್ನು ಕೇವಲ ಪೊಲೀಸರಿಗಲ್ಲದೇ ಸಾರ್ವಜನಿಕರಿಗೂ ಸಹ ಅನುಕೂಲ ಮಾಡಿರುವುದು ಜಿಲ್ಲಾ ಪೊಲೀಸ್ ಜನಪರ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದ ಪೂರ್ವದಲ್ಲಿ ಮಂಗಲ ಭವನದ ಆವರಣದಲ್ಲಿ ಗಿಡಗಳನ್ನು ಸಹ ನೆಡಲಾಯಿತು. ಪ್ರಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಶಾಸಕ ಹನುಮಂತ ನಿರಾಣಿ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷೆ ಶೋಭಾ ದಾಸ್, ಸಭಾಪತಿ ಯಲ್ಲಪ್ಪ ನಾರಾಯಣಿ, ಐಜಿಪಿ ಚೇತನಸಿಂಗ್ ರಾಠೋಡ, ಜಿಲ್ಲಾಧಿಕಾರಿ ಸಂಗಪ್ಪ ಎಂ, ಜಿಪಂ ಸಿಇಒ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.