ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ವೇಣೂರು ಗ್ರಾಮದ ಹಂದೇವು ಎಂಬಲ್ಲಿ ಸಂಜೀವ ದೇವಾಡಿಗ ಅವರಿಗೆ ನಿರ್ಮಿಸಿ ಕೊಡಲಾದ ‘ವಾತ್ಸಲ್ಯ ಮನೆ’ಯನ್ನು ಎಸ್.ಡಿ.ಎಂ. ಕ್ಷೇಮವನ ಬೆಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರದ್ಧಾ ಅಮಿತ್ ಗುರುವಾರ ಹಸ್ತಾಂತರಿಸಿದರು.ಸಮಾಜದ ಕಟ್ಟಕಡೆಯ ನಿರ್ಗತಿಕ, ಅಸಹಾಯಕ ಕುಟುಂಬಗಳಿಗೆ ಕ್ಷೇತ್ರದ ಧರ್ಮಾದಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆಯವರು ವಾತ್ಸಲ್ಯ ಮನೆ ನಿರ್ಮಾಣ ಮಾಡುವುದರೊಂದಿಗೆ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಡಲಾಗುತ್ತಿದೆ. ಶ್ರದ್ಧಾ ಅಮಿತ್ ಮಾತನಾಡಿ, ಮನುಷ್ಯ ಬದುಕಿನ ಉದ್ದಕ್ಕೂ ನೆಮ್ಮದಿಯಾಗಿ ಬದುಕಬೇಕು ಎಂದು ದುಡಿಯುತ್ತಾನೆ. ವಾಸಕ್ಕೆ ಮನೆ ಕಟ್ಟಬೇಕು ಎಂಬುದು ಎಲ್ಲರ ಆಶಯವಾಗಿರುತ್ತದೆ. ಆದರೆ ಕೆಲವೊಂದು ಕುಟುಂಬಗಳಿಗೆ ನಾನಾ ಕಾರಣಗಳಿಂದಾಗಿ ಗುರಿ ಸಾಧಿಸಲು ಅಸಹಾಯಕರಾಗಿರುತ್ತಾರೆ. ಅಂಥವರನ್ನು ಗುರುತಿಸಿ ತನ್ನ ಜೀವನದ ಕೊನೆಯ ಘಟ್ಟದಲ್ಲಿರುವ ಕುಟುಂಬಗಳಿಗೆ ತೀರಾ ಅವಶ್ಯಕತೆಯುಳ್ಳ ಮೂಲಭೂತ ವ್ಯವಸ್ಥೆಗಳನ್ನು ಯೋಜನೆಯ ವತಿಯಿಂದ ಮಾಡಿಕೊಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ತಾಲೂಕು ಜನ ಜಾಗೃತಿ ವೇದಿಕೆಯ ಕೋಶಾಧಿಕಾರಿ ಗಿರೀಶ್, ಮಹಿಳಾ ಜ್ಞಾನ ವಿಕಾಸದ ನಿರ್ದೇಶಕ ವಿಠಲ ಪೂಜಾರಿ, ಯೋಜನಾಧಿಕಾರಿ ಸಂಗೀತ ಹಾಗೂ ಅಮೃತಾ, ತಾಲೂಕಿನ ಜನ ಜಾಗೃತಿ ವೇದಿಕೆಯ ಕೋಶಾಧಿಕಾರಿ ಗಿರೀಶ್ , ಸಮನ್ವಯಾಧಿಕಾರಿ ಹರಿಣಿ, ವಲಯ ಮೇಲ್ವಿಚಾರಕಿ ಶಾಲಿನಿ, ಸೇವಾ ಪ್ರತಿನಿಧಿ ಜಯಂತಿ ಮೊದಲಾದವರು ಉಪಸ್ಥಿತರಿದ್ದರು. ಯೋಜನಾಧಿಕಾರಿ ದಯಾನಂದ ಸ್ವಾಗತಿಸಿ, ವಂದಿಸಿದರು.