ಸಾರಾಂಶ
ಸಂಡೂರಿನಲ್ಲಿ ಸಂಡೂರು ಉತ್ಸವವನ್ನು ಸಚಿವ ಬಿ. ನಾಗೇಂದ್ರ ಉದ್ಘಾಟಿಸಿದರು. ಸಚಿವ ಸಂತೋಷ ಲಾಡ್ ಭಾಗವಹಿಸಿ ಮಾತನಾಡಿ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಬ್ಬರೂ ವಿಶ್ವಮಾನವರು ಎಂದರು.
ಸಂಡೂರು: ಸಂಡೂರು ತಾಲೂಕಿನಲ್ಲಿಯ ಅಭಿವೃದ್ಧಿ ಕಾರ್ಯಗಳು ಹಾಗೂ ಸಂಡೂರಿನ ಸಂಸ್ಕೃತಿಯನ್ನು ಬಿಂಬಿಸುವ ಸಂಡೂರು ಉತ್ಸವ ಕಂಡು ತುಂಬಾ ಸಂತೋಷವಾಗಿದೆ ಎಂದು ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದರು.
ಪಟ್ಟಣದ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಡೂರು ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವು ವರ್ಷಗಳ ಹಿಂದೆ ಸಂಡೂರಿಗೆ ಬಂದು ಹೋಗಲು ಉತ್ತಮ ರಸ್ತೆಗಳು ಇರಲಿಲ್ಲ. ಇದೀಗ ತಾಲೂಕಿನೆಲ್ಲೆಡೆ ಈ. ತುಕಾರಾಂ ಅವರ ಶ್ರಮದ ಫಲವಾಗಿ ಉತ್ತಮ ರಸ್ತೆಗಳು ನಿರ್ಮಾಣಗೊಂಡಿವೆ. ಅವರು ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನವನ್ನು ತರಲು ಕಚೇರಿಗಳಿಗೆ ಭೇಟಿ ನೀಡುವುದು, ಅನುದಾನ ತಂದು ಅಭಿವೃದ್ಧಿ ಕಾರ್ಯಕೈಗೊಳ್ಳುವುದು ನಮಗೂ ಪ್ರೇರಣೆ ನೀಡಿದೆ. ಕ್ರೀಡಾ ಇಲಾಖೆಯಿಂದ ಸಂಡೂರಿನಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನವನ್ನು ಒದಗಿಸಲಾಗುವುದು ಎಂದರು.ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಮಾತನಾಡಿ, ಉತ್ಸವಗಳಿಂದ ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ದೊರೆಯುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಎಲ್ಲರೂ ಓದಿಕೊಂಡು, ಅರ್ಥ ಮಾಡಿಕೊಳ್ಳಬೇಕು. ಸರ್ವರಿಗೂ ಸಮಪಾಲು, ಸಮಬಾಳನ್ನು, ಸಮಾನ ಹಕ್ಕುಗಳನ್ನು ಅವರು ಸಂವಿಧಾನದ ಮೂಲಕ ಕಲ್ಪಿಸಿದ್ದಾರೆ. ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಬ್ಬರೂ ವಿಶ್ವಮಾನವರು ಎಂದರು.
ನಂ. ೧ ತಾಲೂಕಾಗಿಸುವ ಗುರಿ: ಸಂಡೂರಿನಲ್ಲಿ ₹೨೨೦ ಕೋಟಿ ವೆಚ್ಚದಲ್ಲಿ ೨೫೦ ಬೆಡ್ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಮುಂದಿನ ತಿಂಗಳು ಭೂಮಿಪೂಜೆ ನೆರವೇರಿಸಲಾಗುವುದು. ಮುಂದಿನ ನಾಲ್ಕು ವರ್ಷಗಳಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿ ಸಾಧಿಸಿ, ತಾಲೂಕನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಂ. ೧ ಸ್ಥಾನಕ್ಕೇರಿಸಲು ಶ್ರಮಿಸಲಾಗುವುದು ಎಂದರು.ವಿಜೃಂಭಿಸಿದ ಕಲೆ ಸಂಸ್ಕೃತಿ: ಸಂಡೂರು ಉತ್ಸವದಲ್ಲಿ ಎಚ್. ಕುಮಾರಸ್ವಾಮಿ ಅವರ ಜುಗಲ್ ಬಂದಿ, ಶ್ರೀಶೈಲೇಶ್ವರ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ವಿವಿಧ ಜಾನಪದ ಕಲೆಗಳನ್ನು ಬಿಂಬಿಸುವ ನೃತ್ಯರೂಪಕ, ಡಿ.ಜೆ. ತಿರುಮಲ ಮತ್ತವರ ತಂಡದವರ ಜಾನಪದ ಗೀತೆಗಳು, ಬಳ್ಳಾರಿಯ ಎಸ್.ಕೆ. ಜಿಲಾನಿಬಾಷಾ ಮತ್ತವರ ತಂಡ ಪ್ರಸ್ತುತ ಪಡಿಸಿದ ಸಮೂಹ ನೃತ್ಯ, ಯಲ್ಲನಗೌಡ ಶಂಕರಬಂಡೆಯವರ ಕನ್ನಡ ಗೀತೆ ಗಾಯನ, ಸಂಡೂರಿನ ನಾಟ್ಯಕಲಾ ತರಬೇತಿ ಕೇಂದ್ರದ ಜಾನಪದ ನೃತ್ಯ, ಜಗದಂಬ ಮ್ಯೂಜಿಕಲ್ ಟ್ರಸ್ಟ್, ರಶ್ಮಿ ಮೆಲೋಡಿಸ್, ಆದಿತ್ಯಕುಮಾರ್ ಮತ್ತು ಸಂಗಡಿಗರು ಹಾಗೂ ಬೆಂಗಳೂರಿನ ಅಮೋಘವರ್ಷ ಮತ್ತು ಸಂಗಡಿಗರು ನೀಡಿದ ರಸ ಮಂಜರಿ ಕಾರ್ಯಕ್ರಮ ಶ್ರೋತೃಗಳನ್ನು ತಲೆದೂಗುವಂತೆ ಮಾಡಿತು. ಜಿಲ್ಲಾಧಿಕಾರಿ ಪ್ರಶಾಂತ್ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಎನ್. ಹೇಮಂತ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ತಹಸೀಲ್ದಾರ್ ಜಿ. ಅನಿಲ್ಕುಮಾರ್, ತಾಪಂ ಇಒ ಎಚ್. ಷಡಾಕ್ಷರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಮುಖಂಡರಾದ ಡಾ. ಏಕನಾಥ್ ಲಾಡ್, ಕನಕಾ ಇ. ಲಾಡ್, ಅನ್ನಪೂರ್ಣಾ ತುಕಾರಾಂ, ಮುಂಡ್ರಿಗಿ ನಾಗರಾಜ್, ಅನಿಲ್ಕುಮಾರ್ ಪಾಟೀಲ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಆಶಾಲತಾ ಸೋಮಪ್ಪ, ಜಿ. ಏಕಾಂಬ್ರಪ್ಪ, ಚಿತ್ರಿಕಿ ಸತೀಶ್ಕುಮಾರ್, ಚಿತ್ರಿಕಿ ಮಹಾಬಲೇಶ್ವರ, ರೋಷನ್ ಜಮೀರ್ ಉಪಸ್ಥಿತರಿದ್ದರು.