3630 ಮನೆಗಳ ನಿರ್ಮಾಣ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ!

| Published : Jun 19 2025, 11:48 PM IST / Updated: Jun 19 2025, 11:49 PM IST

ಸಾರಾಂಶ

ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬಡವರಿಗಾಗಿ ಜಿ 1 ಮಾದರಿಯಲ್ಲಿ ಒಂದೇ ಸ್ಥಳದಲ್ಲಿ ಮನೆಗಳ ಸಮುಚ್ಚಯ ನಿರ್ಮಾಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೇತೃತ್ವದಲ್ಲಿ 2018ರಲ್ಲಿ ಪ್ರಾರಂಭವಾದ ಯೋಜನೆ ಈಗ 7 ವರ್ಷ ಗತಿಸಿದರೂ ಪೂರ್ಣಗೊಂಡಿಲ್ಲ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬಡವರಿಗಾಗಿ ಜಿ+1 ಮಾದರಿಯಲ್ಲಿ ಒಂದೇ ಸ್ಥಳದಲ್ಲಿ ಮನೆಗಳ ಸಮುಚ್ಚಯ ನಿರ್ಮಾಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೇತೃತ್ವದಲ್ಲಿ 2018ರಲ್ಲಿ ಪ್ರಾರಂಭವಾದ ಯೋಜನೆ ಈಗ 7 ವರ್ಷ ಗತಿಸಿದರೂ ಪೂರ್ಣಗೊಂಡಿಲ್ಲ. 3630 ಮನೆಗಳ ನಿರ್ಮಾಣ: 3630 ಮನೆಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ನೀಡುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ರಾಜೀವಗಾಂಧಿ ವಸತಿ ನಿಗಮದಿಂದ ನೀಡುವ ವಿವಿಧ ವಸತಿ ಯೋಜನೆಗಳ ಸಹಾಯಧನವನ್ನು ಬಳಕೆ ಮಾಡಿಕೊಂಡು ಒಂದು ಕಟ್ಟಡದಲ್ಲಿ ಕೆಳಗಡೆ ನಾಲ್ಕು ಮನೆಗಳು, ಅದೇ ಮಾದರಿಯಲ್ಲಿ ಮೇಲೆ ನಾಲ್ಕು ಮನೆಗಳ ಸಮುಚ್ಚಯ ನಿರ್ಮಾಣದ ವಿಶೇಷ ಯೋಜನೆ ಇದಾಗಿದೆ. ಕೇವಲ 248 ಮನೆಗಳ ಹಂಚಿಕೆ: 3630 ಮನೆಗಳ ನಿರ್ಮಾಣದ ಯೋಜನೆಯನ್ನು ಸೆಕ್ಟರ್ ಎ ಮತ್ತು ಬಿ ಎಂದು ವಿಂಗಡಿಸಲಾಗಿದ್ದು, ಸೆಕ್ಟರ್ ಎ ದಲ್ಲಿ ಇದುವರೆಗೆ 1008 ಮನೆಗಳು ಪೂರ್ಣಗೊಂಡಿದ್ದು, ಅವುಗಳಲ್ಲಿ 248 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಮನೆ ಪಡೆದುಕೊಂಡವರು ತಮ್ಮ ಪಾಲಿನ ವಂತಿಗೆ ಹಣವನ್ನು ಕಟ್ಟಿಲ್ಲ, ಅದಕ್ಕಾಗಿ ಬ್ಯಾಂಕ್ ಗಳನ್ನು ಸಂಪರ್ಕಿಸಿದರೂ ಯಾವ ಬ್ಯಾಂಕ್ ಗಳು ಈ ಯೋಜನೆಯ ಫಲಾನುಭವಿಗೆ ಸಾಲ ನೀಡುತ್ತಿಲ್ಲ ಹಾಗಾಗಿ ಹಂಚಿಕೆಯಾದ ಮನೆಗಳು ಖಾಲಿ ಬಿದ್ದಿವೆ. ಸೆಕ್ಟರ್ ಬಿ ನಲ್ಲಿ 2622 ಮನೆ:ಇದೇ ಯೋಜನೆಯ ಮುಂದುವರಿದ ಭಾಗವಾಗಿ ಸೆಕ್ಟರ್‌ ಬಿ ನಲ್ಲಿ 2622 ಮನೆಗಳನ್ನು ಕಟ್ಟಬೇಕಾಗಿತ್ತು. ಆದರೆ ಇದುವರೆಗೂ 8 ಮನೆಗಳ ಮಾತ್ರ ನಿರ್ಮಾಣವಾಗಿದ್ದು ಇನ್ನುಳಿದ ಎಲ್ಲಾ ಮನೆಗಳ ನಿರ್ಮಾಣ ಕಾಮಗಾರಿ ಪ್ಲಿಂಥ್ ಹಂತದಲ್ಲಿಯೇ ಉಳಿದಿವೆ. ಪ್ರಸ್ತುತ ಅರ್ಧ ನಿರ್ಮಾಣವಾಗಿರುವ ಮನೆಗಳು ಕೂಡಾ ಕಳೆದ ನಾಲ್ಕೈದು ವರ್ಷಗಳಿಂದ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಅವುಗಳು ಕೂಡಾ ಹಾಳಾಗುತ್ತಿವೆ. 242 ಕೋಟಿ ಯೋಜನೆ ನನೆಗುದಿಗೆ: 3630 ಮನೆಗಳ ನಿರ್ಮಾಣಕ್ಕಾಗಿ ಸರ್ಕಾರ ಕರೆದ ಟೆಂಡರ್‌ನಲ್ಲಿ ಹೈದ್ರಾಬಾದ್ ಮೂಲದ ಜಂಪನಾ ಮತ್ತು ನಾಗಾರ್ಜುನ ಕನಸ್ಟ್ರ ಕ್ಷನ್ ಕಂಪನಿಗಳಿಗೆ 242 ಕೋಟಿಗೆ 2018ರಲ್ಲಿ ಗುತ್ತಿಗೆ ನೀಡಿ ಮೂರು ವರ್ಷದಲ್ಲಿ (2021 ರಲ್ಲಿ) ಈ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಇದುವರೆಗೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಬಡವರು ನಿತ್ಯವೂ ಯೋಜನೆಯ ರೂವಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. 284 ಕೋಟಿಗೆ ಮಾರ್ಪಾಡು: ಗುತ್ತಿಗೆದಾರರಿಗೆ ನಿಗದಿತ ಅವಧಿಯಲ್ಲಿ ಹಣ ಬಿಡುಗಡೆ ಮಾಡದೇ ಇರುವ ಹಿನ್ನೆಲೆಯಲ್ಲಿ, ಕಾಮಗಾರಿ ವಿಳಂಬವಾಗಿದ್ದು ಇದರಿಂದಾಗಿ ವೆಚ್ಚದಲ್ಲಿಯೂ ಹೆಚ್ಚಳವಾಗಿದೆ. ಇದರೊಟ್ಟಿಗೆ ಯೋಜನೆಯಲ್ಲಿ ಮತ್ತಷ್ಟು ಮಾರ್ಪಾಡುಗಳನ್ನು ಮಾಡಿದ ಹಿನ್ನೆಲೆಯಲ್ಲಿ ಯೋಜನೆಯ ವೆಚ್ಚ 284 ಕೋಟಿಗೆ ಹೆಚ್ಚಳವಾಗಿದೆ. ಹೆಚ್ಚುವರಿಯಾದ 42 ಕೋಟಿ ಹಣ ಕೂಡಾ ಯೋಜನೆ ವಿಳಂಬಕ್ಕೆ ಕಾರಣವಾಗಿದೆ. ಈ ಯೋಜನೆಯಡಿ ನಿರ್ಮಾಣವಾಗುವ ಪ್ರತಿಯೊಂದು ಮನೆಯೂ ಮೊದಲ (ಹಳೆಯ) ಪ್ಲ್ಯಾನ್ ಪ್ರಕಾರ 6.75 ಲಕ್ಷದಲ್ಲಿ ನಿರ್ಮಾಣವಾಗಬೇಕಿತ್ತು. ಆದರೆ ನಂತರ ಮಾರ್ಪಾಡು ಮಾಡಿದ್ದು. ಈಗ 7.83 ಲಕ್ಷದಲ್ಲಿ ಪ್ರತಿ ಮನೆ ನಿರ್ಮಾಣವಾಗಬೇಕು. ಆದರೆ ಇಷ್ಟೊಂದು ಬೃಹತ್ ಯೋಜನೆಗೆ ಅಗತ್ಯವಿರುವ ಅನುದಾನದ ಹೊಂದಾಣಿಕೆ ಮಾಡುವಲ್ಲಿ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಮತ್ತು ರಾಜೀವಗಾಂಧಿ ವಸತಿ ನಿಗಮದ ಅಧಿಕಾರಿಗಳು ಮಾಡುತ್ತಿರುವ ದಿವ್ಯ ನಿರ್ಲಕ್ಷ್ಯದಿಂದಾಗಿ ಯೋಜನೆ ಸಂಪೂರ್ಣ ಹಾಳಾಗುವ ಹಂತಕ್ಕೆ ಬಂದು ತಲುಪಿದೆ. ಈ ಯೋಜನೆ ಅನುಷ್ಠಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಸರಿಯಾದ ಮಾರ್ಗಸೂಚಿಗಳನ್ನು ಅನುಸರಿಸದೇ ಇರುವ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಗುತ್ತಿಗೆ ಪಡೆದಿರುವ ಕಂಪನಿಗಳಿಗೆ ಇದುವರೆಗೂ ಹಣವನ್ನು ಬಿಡುಗಡೆ ಮಾಡಿಲ್ಲ. ಇದೊಂದು ವಿಫಲ ಯೋಜನೆಯಾಗಿದೆ. ಗದಗ-ಬೆಟಗೇರಿ ಅವಳಿ ನಗರದ ಬಡವರಿಗೆ ಕನಸಿನ ಗೋಪುರ ಕಟ್ಟಿಕೊಟ್ಟಿದ್ದಾರೆ ಅಷ್ಟೇ ಎಂದು ಜೆಡಿಎಸ್‌ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ

ಹೇಳಿದರು.