ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಪಂ ವ್ಯಾಪ್ತಿಯ ಚೂರಿಕಾಡು ಬಳಿ ಭೂ ಕುಸಿತ ತಡೆಯುವ ಹಿನ್ನೆಲೆಯಲ್ಲಿ 50 ಲಕ್ಷ ರು. ವೆಚ್ಚದ ತಡೆಗೋಡೆ ಕಾಮಗಾರಿಗೆ ಶಾಸಕ ಎ.ಎಸ್. ಪೊನ್ನಣ್ಣ ಶುಕ್ರವಾರ ಚಾಲನೆ.

ಮಡಿಕೇರಿ: ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಪಂ ವ್ಯಾಪ್ತಿಯ ಚೂರಿಕಾಡು ಬಳಿ ಭೂ ಕುಸಿತ ತಡೆಯುವ ಹಿನ್ನೆಲೆಯಲ್ಲಿ 50 ಲಕ್ಷ ರು. ವೆಚ್ಚದ ತಡೆಗೋಡೆ ಕಾಮಗಾರಿಗೆ ಶಾಸಕ ಎ.ಎಸ್. ಪೊನ್ನಣ್ಣ ಶುಕ್ರವಾರ ಚಾಲನೆ ನೀಡಿದರು.

2002ರಿಂದಲೇ ಈ ಭಾಗದಲ್ಲಿ ಭೂ ಕುಸಿತವಾಗಿ ಕೃಷಿ ಜಮೀನು ನಾಶವಾಗುವುದಲ್ಲದೆ ಸನಿಹದಲ್ಲಿರುವ ರಸ್ತೆ ಕೂಡ ಹಾಳಾಗುತ್ತಿದ್ದು, ತಡೆಗೋಡೆ ನಿರ್ಮಾಣದ ಮೂಲಕ ರಕ್ಷಣೆ ಮಾಡುವಂತೆ ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪೊನ್ನಣ್ಣ ಅವರು ಪ್ರಚಾರಕ್ಕೆ ಬಂದಾಗ ಅಲ್ಲಿನ ನಿವಾಸಿಗಳು ತಡೆಗೋಡೆ ನಿರ್ಮಾಣಕ್ಕೆ ಕೋರಿಕೆ ಸಲ್ಲಿಸಿದ್ದರು.ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು ಗ್ರಾಮಸ್ಥರು ಸಲ್ಲಿಸಿದ ಕೋರಿಕೆ ಡೇರಿಸುವ ಭರವಸೆಯನ್ನು ತಾವು ನೀಡಿದ್ದು, ಕೃಷಿ ಭೂಮಿ ರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ1.6 ಕೋಟಿ ರು. ವಿಶೇಷ ಅನುದಾನವನ್ನು ಸಣ್ಣ ನೀರಾವರಿ ಇಲಾಖೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜ್ ಒದಗಿಸಿದ್ದು, ಅದರಲ್ಲಿ 50 ಲಕ್ಷ ರು.ಗಳನ್ನು ಕಾಮಗಾರಿಗೆ ನೀಡಲಾಗಿದೆ ಎಂದು ವಿವರಿಸಿದರು. ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹೊಸೂರು ಸೂರಜ್, ತಾ.ಪಂ. ಮಾಜಿ ಸದಸ್ಯ ಅಪ್ರು ರವೀಂದ್ರ, ಸ್ಥಳೀಯ ಮುಖಂಡರಾದ ಪಿಯೂಸ್ ಫೆರೆರಾ, ಗ್ರಾಪಂ ಮಾಜಿ ಅಧ್ಯಕ್ಷ ಯತೀಶ್, ಗ್ರಾಪಂ ಮಾಜಿ ಸದಸ್ಯೆ ಶೈನಿ, ಪ್ರಮುಖರಾದ ನಾರಾಯಣ್, ಸಣ್ಣ ನೀರಾವರಿ ಇಲಾಖೆ ಕಾರ್‍ಯಪಾಲಕ ಅಭಿಯಂತರರಾದ ಕುಮಾರ ಸ್ವಾಮಿ ಮತ್ತಿತರರಿದ್ದರು.