ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರು ನೀಡಿರುವ ಮನವಿಯನ್ನು ಸ್ವೀಕರಿಸಿದ್ದೇನೆ. ನಾನು ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಿತಿ ಸದಸ್ಯರ ಕಮಿಟಿಯಲ್ಲಿ ಇದ್ದೇನೆ. ನೌಕರರಿಗೆ ಕನಿಷ್ಠ ವೇತನ ದರ, ಗ್ರಾಚ್ಯೂಟಿ ನೀಡುವ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಕಮಿಟಿಯಿಂದ ಸಲ್ಲಿಸಲಾಗಿದೆ ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ವಿಶ್ವೇಶ್ವರಯ್ಯ ನಗರದ ಶ್ರೀರಾಮಮಂದಿರದ ಆವರಣದಲ್ಲಿ 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಚಾಲನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಪೋಷಣ್ ಅಭಿಯಾನ ಮೂಲಕ ಮಹಿಳೆಯರು, ಮಕ್ಕಳು ಸೇರಿ ಸಾರ್ವಜನಿಕರಿಗೆ ಪೌಷ್ಠಿಕಾಂಶದ ಆಹಾರ ಸೇವನೆ ಮಾಡುವ ಕುರಿತು ಅರಿವು ಮೂಡಿಸುತ್ತಿದೆ. ಈ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಸಿಗುತ್ತಿದ್ದ ಪೌಷ್ಠಿಕಾಂಶದ ಆಹಾರ ಈಗ ನಮಗೆ ದೊರೆಯುತ್ತಿಲ್ಲ. ಗರ್ಭಿಣಿ, ಬಾಣಂತಿಯರು, ಮಕ್ಕಳಲ್ಲಿ ಅಪೌಷ್ಠಿಕತೆ ಕಾಡುತ್ತಿದೆ. ಪೌಷ್ಠಿಕತೆ ಆಹಾರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಿದ್ದಾರೆ ಎಂದರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರು ನೀಡಿರುವ ಮನವಿಯನ್ನು ಸ್ವೀಕರಿಸಿದ್ದೇನೆ. ನಾನು ಸಹ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಿತಿ ಸದಸ್ಯರ ಕಮಿಟಿಯಲ್ಲಿ ಇದ್ದೇನೆ. ನೌಕರರಿಗೆ ಕನಿಷ್ಠ ವೇತನ ದರ, ಗ್ರಾಚ್ಯೂಟಿ ನೀಡುವ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಕಮಿಟಿಯಿಂದ ಸಲ್ಲಿಸಲಾಗಿದೆ ಎಂದು ಭರವಸೆ ನೀಡಿದರು.

ಸಿಡಿಪಿಒ ಪೂರ್ಣಿಮಾ ಮಾತನಾಡಿ, ಆಹಾರ ಸೇವನೆಯಲ್ಲಿ ವೈವಿದ್ಯತೆ ಕಾಪಾಡಿಕೊಳ್ಳಬೇಕು, ಬರಿ ರಾಗಿಮುದ್ದೆ, ಚಪಾತಿ ಸೇವನೆ ಮಾಡುವುದನ್ನು ಬಿಟ್ಟು ಸೊಪ್ಪು, ತರಕಾರಿ, ಮೊಳಕೆ ಕಟ್ಟಿದ ಕಾಳು, ಹಣ್ಣುಗಳನ್ನು ಸೇವನೆ ಮಾಡಬೇಕು, ಜಂಕ್ ಫುಡ್ ಸೇವನೆ ಕಡಿಮೆ ಮಾಡಬೇಕು. ಹೆಚ್ಚಾಗಿ ಬಿಸಿಯೂಟ ಸೇವನೆ ಮಾಡಬೇಕು ಎಂದು ತಿಳಿಸಿದರು.

ಯೋಗ, ಪ್ರೋಟಿನ್ ಯುಕ್ತ ಆಹಾರ ಬಳಕೆಯತ್ತ ಗರ್ಭಿಣಿಯರು, ಮಕ್ಕಳು, ಬಾಣಂತಿಯರು ಗಮನ ಹರಿಸಬೇಕು, ಮನೆಯಂಗಳದಲ್ಲಿ ಕೈತೋಟ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ರುಕ್ಮಿಣಿ ಮಾತನಾಡಿ, ಅಂಗನವಾಡಿ ನೌಕರರ ಸಮಸ್ಯೆಗಳ ಬಗ್ಗೆ ಶಾಸಕರು ಸದನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಗರ್ಭಿಣಿಯರಿಗೆ ಇಲಾಖೆ ವತಿಯಿಂದ ಸೀಮಂತ ಶಾಸ್ತ್ರ ಮಾಡಲಾಯಿತು. ಜತೆಗೆ ಪೌಷ್ಠಿಕ ಆಹಾರಗಳು, ಹಣ್ಣು, ತರಕಾರಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕಾರ್ಯಕ್ರಮದಲ್ಲಿ ವೃತ್ತದ ಮೇಲ್ವಿಚಾರಕಿ ಲಕ್ಷ್ಮೀ ದೇಶಪಾಂಡೆ, ಮೇಲ್ವಿಚಾರಕಿ ಜಾಕೀಯಬಾನು, ಪೋಷಣ್ ತಾಲೂಕು ಸಂಯೋಜಕಿ ಅನುಷ, ಡಾ.ಕಿಶೋರ್ ಹಾಗೂ ಕ್ಯಾತನಹಳ್ಳಿ ಮತ್ತು ಟೌನ್ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗರ್ಭಿಣಿ, ಬಾಣಂತಿಯರು ಹಾಜರಿದ್ದರು.