ಗೌಡಳ್ಳಿ ಗ್ರಾಮದಲ್ಲಿ ಹರಿಯುವ ಸಣ್ಣ ಹೊಳೆಗೆ ಕಾಫಿ ಪಲ್ಪಿಂಗ್ ತ್ಯಾಜ್ಯದ ನೀರು ಬಿಟ್ಟಿರುವುದರಿಂದ ಹೊಳೆಯ ನೀರು ಕಲುಷಿತಗೊಂಡಿದೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮೀಪದ ಗೌಡಳ್ಳಿ ಗ್ರಾಮದಲ್ಲಿ ಹರಿಯುವ ಸಣ್ಣ ಹೊಳೆಗೆ ಕಾಫಿ ಪಲ್ಪಿಂಗ್ ತ್ಯಾಜ್ಯದ ನೀರು ಬಿಟ್ಟಿರುವುದರಿಂದ ಹೊಳೆಯ ನೀರು ಕಲುಷಿತಗೊಂಡಿದ್ದು, ಜಲಚರಗಳು ಸಾವನ್ನಪ್ಪಿದೆ. ಜಾನುವಾರುಗಳೂ ಸಹ ಇದೇ ನೀರನ್ನು ಸೇವಿಸುವ ಆತಂಕವಿದ್ದು, ತಕ್ಷಣ ಸಂಬಂಧಿಸಿದ ಇಲಾಖೆ ಇತ್ತ ಗಮನ ಹರಿಸಬೇಕು ಎಂದು ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.ಗೌಡಳ್ಳಿ ಗ್ರಾಮದ ಹೊಳೆಗೆ ಕಾಫಿ ಪಲ್ಪರ್ ನೀರು ಬಿಟ್ಟಿರುವುದರಿಂದ ಹೊಳೆಯಲ್ಲಿರುವ ಜಲಚರಗಳು ಸತ್ತು ತೇಲುತ್ತಿವೆ. ಹೊಳೆಗೆ ಇಂತಹ ಕಲುಷಿತ ನೀರು ಬಿಡುತ್ತಿರುವ ಕಾಫಿ ಪಲ್ಪರ್ ಘಟಕದವರಿಗೆ ಮಾನವೀಯತೆಯೂ ಇಲ್ಲವಾಗಿದೆ. ಇದೇ ನೀರನ್ನು ದನಕರುಗಳು ಸಹ ಕುಡಿಯಲಿದ್ದು, ಅವುಗಳ ಪ್ರಾಣಕ್ಕೂ ಸಂಚಕಾರ ತಂದೊಡ್ಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು ಸಂಘಟನೆಯ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪ್ರತಿವರ್ಷವೂ ಇಂತಹ ಕೃತ್ಯ ನಡೆಯುತ್ತಲೇ ಇದೆ. ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಸಂದರ್ಭ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿ ತೆರಳಿದವರು ಮತ್ತೆ ಇತ್ತ ತಲೆಹಾಕಿಲ್ಲ ಎಂದು ಫ್ರಾನ್ಸಿಸ್ ಆರೋಪಿಸಿದ್ದಾರೆ.ಇದೀಗ ಕಾಫಿ ಪಲ್ಪಿಂಗ್ ಸಮಯವಾಗಿದ್ದು, ಕೆಲವೊಂದು ಕಡೆಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯದ ನೀರನ್ನು ಜಲಮೂಲಗಳಿಗೆ ಬಿಡಲಾಗುತ್ತಿದೆ. ಎಲ್ಲಾ ಕಾಫಿ ಪಲ್ಪಿಂಗ್ ಘಟಕಗಳನ್ನು ಪರಿಶೀಲಿಸಿ, ತಪ್ಪುಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಂಡು ಎಚ್ಚರಿಕೆ ನೀಡುವ ಕೆಲಸವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಫ್ರಾನ್ಸಿಸ್ ಡಿಸೋಜ ಮನವಿ ಮಾಡಿದ್ದಾರೆ.