ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂವಿಧಾನ ಶಿಲ್ಪಿ ಡಾ। ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಅವಮಾನ ಮಾಡಿತ್ತು ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಹೇಳೀದ್ದಾರೆ.ಶನಿವಾರ ಭಾರತೀಯ ವಿದ್ಯಾಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಹಾಗೂ ಅಯೋಧ್ಯಾ ಪಬ್ಲಿಕೇಷನ್ಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಿ ಬ್ರಿಟಿಷರು ದೇಶ ತೊರೆಯುವ ಘೋಷಣೆ ಮಾಡಿದ ಸಂದರ್ಭದಲ್ಲಿ ಸಂವಿಧಾನ ರಚಿಸುವ ವಿಚಾರ ಬಂತು. ಮಹಾತ್ಮ ಗಾಂಧೀಜಿ, ರಾಜೇಂದ್ರ ಪ್ರಸಾದ್ ಮೊದಲಾದವರು ಈ ವಿಚಾರವನ್ನು ಮುಂದಿಟ್ಟರು ಎಂದು ಹೇಳಿದರು.
ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಚುನಾಯಿಸಲಿಲ್ಲ. ಇದರಿಂದ ದಲಿತರಿಗೆ ಅಸಮಾಧಾನ ಉಂಟಾಯಿತು. ಯೋಗೇಂದ್ರನಾಥ್ ಮಂಡಲ್, ಡಾ। ಶ್ಯಾಮಪ್ರಸಾದ್ ಮುಖರ್ಜಿ ಮೊದಲಾದವರ ಕೋರಿಕೆ ಮೇರೆಗೆ ಅಂಬೇಡ್ಕರ್ ಅವರು ಬಂಗಾಳದಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾದರು. ಜೈಸೂರು ಖುಲ್ನಾದಿಂದ ಅವರು ವಿಜೇತರಾದರು. ಕೊಲ್ಕತ್ತಾದಲ್ಲಿ ದೊಡ್ಡ ಕಾರ್ಯಕ್ರಮವನ್ನೂ ಆಯೋಜಿಸಲಾಯಿತು ಎಂದು ಹೇಳಿದರು.ಅಂಬೇಡ್ಕರ್ ಅವರನ್ನು ದೇಶಭಕ್ತರಲ್ಲ, ಬ್ರಿಟಿಷರ ಏಜೆಂಟ್ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು. ಅಂಬೇಡ್ಕರ್ ಅವರು ಭಾರತವು ಸ್ವತಂತ್ರವಾಗುವ ಮೊದಲೇ ದೇಶವನ್ನು ಒಂದುಗೂಡಿಸುವ ಮತ್ತು ಶ್ರೇಷ್ಠವನ್ನಾಗಿ ಮಾಡುವ ಮಾತನಾಡಿದ್ದರು ಎಂದು ಹೇಳಿದ ಅವರು, ಬಾಬಾ ಸಾಹೇಬರಿಗೆ ಕಾಂಗ್ರೆಸ್ ಮೋಸ ಮಾಡಿದ ರೀತಿ, ಅವರನ್ನು ಅವಮಾನಿಸಿದ್ದು, ಕಷ್ಟಗಳನ್ನು ಕೊಟ್ಟದ್ದನ್ನು ವಿವರಿಸಿದರು.
ದಲಿತ ಸಮಾಜದ ಮತಕ್ಕಾಗಿ ಕಾಂಗ್ರೆಸ್ ಈಗ ಡಾ। ಅಂಬೇಡ್ಕರ್ ಅವರ ಹೆಸರನ್ನು ಮುಂದಿಡುತ್ತಿದೆ. ನಿಜವಾಗಿ ಕಾಂಗ್ರೆಸ್ಸಿಗರು ಅಂಬೇಡ್ಕರ್ ವಿರುದ್ಧವಾಗಿ ಕೆಲಸ ಮಾಡಿದ್ದರು ಎಂದು ಆರೋಪಿಸಿದರು.ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಲೇಖಕ ವಿಕಾಸ್ ಕುಮಾರ್, ಅಯೋಧ್ಯಾ ಪಬ್ಲಿಕೇಷನ್ಸ್ ನಿರ್ದೇಶಕ ರೋಹಿತ್ ಚಕ್ರತೀರ್ಥ ಉಪಸ್ಥಿತರಿದ್ದರು.