ಸಾರಾಂಶ
ರಾಣಿಬೆನ್ನೂರು: ಸಾಲ ವಸೂಲಾತಿ ವಿಚಾರವಾಗಿ ಮೈಕ್ರೋ ಫೈನಾನ್ಸ್ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ನಗರದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲಗಾರರಿಗೆ ಕಿರುಕುಳ ನೀಡಿದ ಘಟನೆ ಭಾನುವಾರ ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ ಜರುಗಿದೆ. ಇಲ್ಲಿನ ನಿವಾಸಿ ಶಹಿನಾ ಶಿಡೇನೂರ (ಬಿಎಸ್ಎಸ್) ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಪಡೆದಿದ್ದರು. ಆದರೆ ಕೆಲವೊಂದು ಅನಿವಾರ್ಯ ಕಾರಣಗಳಿಂದ ಸಾಲ ಮರುಪಾವತಿ ವಿಳಂಬವಾಗಿತ್ತು. ಸಾಲ ಪಡೆದ ಮಹಿಳೆಯ ಮನೆಯ ಬಳಿ ಬಂದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮಾರ್ಚ್ ತಿಂಗಳು ವರ್ಷದ ಕೊನೆಯಾಗಿದ್ದು, ಸಾಲದ ಹಣ ಕಟ್ಟಲೇಬೇಕು ಎಂದರು. ಆಕೆ ಕೆಲಸ ಮಾಡಲು ಆಟೋದಲ್ಲಿ ತೆರಳಲು ಮುಂದಾದಾಗ ಅದಕ್ಕೆ ತಡೆ ಹಾಕಿ ಹಣ ನೀಡಿ ಮುಂದಕ್ಕೆ ಹೋಗುವಂತೆ ಬಲವಂತ ಮಾಡಿದರು. ಹೀಗಾಗಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾಗೂ ಮಹಿಳೆಯ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಫೆಬ್ರವರಿ ತಿಂಗಳ ಒಳಗಾಗಿ ಹಣ ಪಾವತಿ ಮಾಡಬೇಕು ಎಂದು ಕರಾರು ಹಾಕಿ ಅಲ್ಲಿಂದ ತೆರಳಿದ್ದಾರೆ. ಇಂದು ಸಭೆ: ಇಂದಿನ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಸೋಮವಾರ (ಫೆ. 3) ನಗರಸಭೆ ಕಚೇರಿಯಲ್ಲಿ ಮೈಕ್ರೋ ಫೈನಾನ್ಸ್ನವರ ಜತೆ ಸಭೆ ಕರೆದಿದ್ದಾರೆ.