ಖಾನಾಪುರದಲ್ಲಿ ಮುಂದುವರಿದ ಮಳೆ ಆವಾಂತರ

| Published : Jul 22 2024, 01:16 AM IST

ಸಾರಾಂಶ

ಖಾನಾಪುರ ತಾಲೂಕಿನಾದ್ಯಂತ ವಾರದಿಂದ ಸುರಿಯುತ್ತಿರುವ ಮಳೆಯ ಅಬ್ಬರ ಭಾನುವಾರವೂ ಮುಂದುವರೆದಿದ್ದು, ಅವಾಂತರ ಸೃಷ್ಟಿಸಿದೆ.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನಾದ್ಯಂತ ವಾರದಿಂದ ಸುರಿಯುತ್ತಿರುವ ಮಳೆಯ ಅಬ್ಬರ ಭಾನುವಾರವೂ ಮುಂದುವರೆದಿದ್ದು, ಅವಾಂತರ ಸೃಷ್ಟಿಸಿದೆ.

ಭಂಡೂರಿ ಹಳ್ಳದ ಪ್ರವಾಹದಿಂದ ದೇಗಾಂವ-ಹೆಮ್ಮಡಗಾ ಮತ್ತು ಪಾಲಿ-ಮೆಂಡಿಲ್ ಗ್ರಾಮಗಳ ನಡುವಿನ ರಸ್ತೆ ಮತ್ತು ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ದೇಗಾಂವ ಮತ್ತು ಮೆಂಡಿಲ್ ಮುಖ್ಯ ವಾಹಿನಿಯಿಂದ ಸಂಪರ್ಕ ಕಳೆದುಕೊಂಡಿದ್ದರೆ, ಮಹದಾಯಿ ನದಿಯಲ್ಲಿ ಪ್ರವಾಹಕ್ಕೆ ನೇರಸಾ-ಗವ್ವಾಳಿ, ಅಮಗಾಂವ-ಚಿಕಲೆ ಮತ್ತು ಘೋಸೆ ಗ್ರಾಮಗಳು ನಡುಗಡ್ಡೆಗಳಂತಾಗಿವೆ.

ತಾಲೂಕಿನ ಚಾಪಗಾಂವ ಗ್ರಾಮದ ಯಲ್ಲಪ್ಪ ಮಾದಾರ ಅವರ ಮನೆಯ ಗೋಡೆ ಭಾನುವಾರ ಕುಸಿದಿದೆ. ಗವ್ವಾಳಿ, ಅಮಗಾಂವ, ಕೃಷ್ಣಾಪುರ, ಹುಳಂದ, ಸಡಾ, ದೇಗಾಂವ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳ ಮೇಲೆ ನೀರಿನ ಹರಿವು ಮುಂದುವರೆದಿದೆ.

ಸಿಂಧನೂರು-ಹೆಮ್ಮಡಗಾ ಹೆದ್ದಾರಿಯ ಅಲಾತ್ರಿ ಹಳ್ಳದ ಸೇತುವೆಯ ಮೇಲೆ ನೀರಿನ ಹರಿವು ಕ್ಷೀಣಿಸಿದ್ದರಿಂದ ಭಾನುವಾರ ಬೆಳಗ್ಗೆಯಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಆರಂಭವಾಗಿದೆ. ಲೋಂಡಾ-ವರ್ಕಡ ಮತ್ತು ಸಾತನಾಳಿ-ಮಾಚಾಳಿ ಮಾರ್ಗ ಮಧ್ಯದ ಹಳ್ಳಗಳ ಸೇತುವೆಗಳ ಮೇಲೆ ನೀರಿನ ಹರಿವು ಮುಂದುವರೆದಿದೆ. ಶಾಸಕ ವಿಠ್ಠಲ ಹಲಗೇಕರ ಅವರ ಸೂಚನೆ ಮೇರೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.