ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಮಳೆ, ನಿಲ್ಲದ ಹಾನಿ

| Published : May 27 2025, 11:46 PM IST

ಸಾರಾಂಶ

ಸೋಮವಾರ ರಾತ್ರಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 95.30 ಮಿ.ಮೀ. ಮಳೆಯಾಗಿದೆ. ಕಾರ್ಕಳ ತಾಲೂಕಿನಲ್ಲಿ ಬರೋಬ್ಬರಿ 122 ಮಿ. ಮೀ. ಮಳೆ ದಾಖಲಾಗಿದೆ. ಹಗಲಿನಲ್ಲಿಯೂ ಇದೇ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೇ ಭಾರೀ ಪ್ರವಾಹ ಸಂಭವಿಸುವ ಸಾಧ್ಯತೆ ಇತ್ತು. ರಾತ್ರಿಯ ಈ ಧಾರಾಕಾರ ಗಾಳಿ-ಮಳೆಗೆ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸೋಮವಾರ ರಾತ್ರಿಯೂ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಪರಿಣಾಮ ಜಿಲ್ಲೆಯಾದ್ಯಂತ ನದಿಗಳು ದಡ ಮೀರುವ ಸ್ಥಿತಿಯಲ್ಲಿದ್ದವು. ಆದರೆ ಮಂಗಳವಾರ ಹಗಲಿನಲ್ಲಿ ಮಳೆ ಕ್ಷೀಣವಾಗಿ ಪ್ರವಾಹ ಸಂಭವಿಸಿಲ್ಲ.ಸೋಮವಾರ ರಾತ್ರಿ ಜಿಲ್ಲೆಯಲ್ಲಿ ಸರಾಸರಿ 95.30 ಮಿ.ಮೀ. ಮಳೆಯಾಗಿದೆ. ಕಾರ್ಕಳ ತಾಲೂಕಿನಲ್ಲಿ ಬರೋಬ್ಬರಿ 122 ಮಿ. ಮೀ. ಮಳೆ ದಾಖಲಾಗಿದೆ. ಹಗಲಿನಲ್ಲಿಯೂ ಇದೇ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೇ ಭಾರೀ ಪ್ರವಾಹ ಸಂಭವಿಸುವ ಸಾಧ್ಯತೆ ಇತ್ತು. ರಾತ್ರಿಯ ಈ ಧಾರಾಕಾರ ಗಾಳಿ-ಮಳೆಗೆ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಭಾರೀ ಮಳೆ ಆತಂಕ ಇನ್ನೂ ಕೆಲವು ದಿನ ಮುಂದುವರಿಯಲಿದೆ. ಇನ್ನೂ 2 ದಿನಗಳ ಕಾಲ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಜೊತೆಗೆ ಗಾಳಿಯೂ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ವನಜ ಶೆಟ್ಟಿ ಅವರ ಮನೆಗೆ 50,000 ರು., ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಜಯಂತಿ ಅವರ ಮನೆಯ ಮೇಲೆ ಮರ ಬಿದ್ದು 20,000 ರು., ಬೆಳ್ಳೆ ಗ್ರಾಮದ ಜಾನಕಿ ಭಂಡಾರ್ತಿ ಅವರ ಮನೆಯ ಮೇಲೆ ಮರಬಿದ್ದು 20,000 ರು., ಪಡು ಗ್ರಾಮದ ಪುಷ್ಪ ನಾಯಕ್ ಅವರ ಮನೆಗೆ ಗಾಳಿ ಮಳೆಯಿಂದ 20,000 ರು., ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಇಂದಿರಾ ರಮೇಶ್ ಅವರ ಮನೆಗೆ ಮಳೆಯಿಂದ 30,000 ರು., ನಿಂಜೂರು ಗ್ರಾಮದ ಸುಶೀಲ ಬೊಗ್ಗುಅವರ ಮನೆಗೆ 20,000 ರು., ಕುಕ್ಕುಂದೂರು ಗ್ರಾಮದ ಕುಲ್ಸು ಅವರ ಮನೆಗೆ 7,000 ರು., ಕುಕ್ಕುಂದೂರು ಗ್ರಾಮದ ಸತೀಶ್ ಅವರ ಮನೆಗೆ 2,500 ರು. ಹಾನಿಯಾಗಿದೆ.ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಭಾಸ್ಕರ ಅವರ ಮನೆ 70,000 ರು., ಉದ್ಯಾವರ ಗ್ರಾಮದ ನರಸಿಂಹ ಮೂರ್ತಿಅವರ ಮನೆಗೆ 20,000 ರು., ಸರಸ್ವತಿ ಮೆಂಡನ್ ಅವರ ಮನೆಗೆ 50,000 ರು., ಅಮಿತಾ ಅವರ ಮನೆಗೆ 60,000 ರು.,

ಅಂಜಾರು ಗ್ರಾಮದ ವಾರಿಜ ಸುಂದರ ಪೂಜಾರಿ ಅವರ ಮನೆಗೆ 20,000 ರು., ಅಲೆವೂರು ಗ್ರಾಮದ ನಬೀಸಾ ಅವರ ಮನೆಗೆ 20,000 ರು. ಮತ್ತು ಬಡಗಬೆಟ್ಟು ಗ್ರಾಮದ ತ್ರೀವೇಣಿ ಶೆಟ್ಟಿಗಾರ್ತಿ ಅವರ ಮನೆಗೆ 60,000 ರು.ಗಳಷ್ಟು ನಷ್ಟವಾಗಿದೆ.

------------------ಅಣೆಕಟ್ಟು ಭಾಗಗಳಲ್ಲಿ ಕೃತಕ ನೆರೆ ಹಾವಳಿ

ಕನ್ನಡಪ್ರಭ ವಾರ್ತೆ ಕಾಪು

ಅಣೆಕಟ್ಟೆಗೆ ಹಾಕಲಾಗಿದ್ದ ಹಲಗೆಗಳನ್ನು ಸಕಾಲದಲ್ಲಿ ತೆರವುಗೊಳಿಸುವಲ್ಲಿ ನೀರಾವರಿ ಇಲಾಖೆಯ ನಿರ್ಲಕ್ಷದಿಂದಾಗಿ ಇಲ್ಲಿನ ಶಿರ್ವ - ಪಂಜಿಮಾರು - ಬೆಳ್ಳೆ ಗ್ರಾಮಗಳಲ್ಲಿ ಹರಿಯುತ್ತಿರುವ ಪಾಪನಾಶಿನಿ ನದಿಯಿಂದ ಅಕ್ಕಪಕ್ಕದ ಕೃಷಿಭೂಮಿಗೆ ನೆರೆನೀರು ನುಗ್ಗಿದೆ.ಕಳೆದ ಮೂರ್ನಾಲ್ಕು ದಿನಗಳಿಂದ ಬಿಡದೇ ಸುರಿದ ಮಳೆಗೆ ಪಾಪನಾಶಿನಿ ತುಂಬಿದೆ. ಜೊತೆಗೆ ಇಲ್ಲಿನ ಅಣೆಕಟ್ಟೆಯ ಹಲಗೆ ತೆಗೆಯದೆ, ನೀರು ಹೊರಗೆ ಹರಿಯದೆ ಸುತ್ತಲಿನ ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಇದರಿಂದ ಬೆಳ್ಳೆ ಪಂಚಾಯಿತಿ ವ್ಯಾಪ್ತಿಯ ಕುರುಡಾ, ಶಿರ್ವ ಪಂಚಾಯಿತಿ ವ್ಯಾಪ್ತಿಯ ಪಂಜಿಮಾರು, ಡಿಂಡೊಟ್ಟು, ಅಟ್ಟಿಂಜ, ಗಂಗೇಲ, ತರ್ಪಜಾಲು, ಮಟ್ಟಾರು ಭಾಗಗಳಲ್ಲಿ ರೈತರು ಬೇಸಾಯಕ್ಕೆಂದು ಗದ್ದೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಗೊಬ್ಬರ, ಸಸಿ ಮಾಡಲೆಂದು ಬಿತ್ತನೆ ಮಾಡಿದ ಬೀಜ ಕೃತಕ ನೆರೆಯಲ್ಲಿ ಕೊಚ್ಚಿ ಹೋಗಿದೆ.

ಮಳೆಗಾಲಕ್ಕೆ ಮೊದಲೇ ಅಣೆಕಟ್ಟೆ ಹಲಗೆ ತೆರವು ಮಾಡಬೇಕೆಂಬ ನಿಯಮವಿದ್ದರೂ, ಹವಾಮಾನದ ವೈಪರೀತ್ಯ, ಚಂಡಮಾರುತದ ಮುನ್ಸೂಚನೆ ಇದ್ದರೂ ನೀರಾವರಿ ಇಲಾಖೆಯು ಹಲಗೆ ತೆರವಿಗೆ ಕ್ರಮ ಕೈಗೊಂಡಿಲ್ಲ. ಇಲಾಖೆಯ ನಿರ್ಲಕ್ಷದಿಂದ ಕೃತಕ ನೆರೆ ಸಂಭವಿಸಿದೆ. ಪಾಪನಾಶಿನಿ ನದೀ ತೀರದ ರೈತರು ಮೊದಲ ಬೆಳೆಯ ಆದಿಯಲ್ಲಿಯೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲಾಖೆ ಇನ್ನಾದರೂ ಶೀಘ್ರವಾಗಿ ಸ್ಪಂದಿಸಬೇಕು ಎಂದು ಸ್ಥಳೀಯ ಪ್ರಗತಿಪರ ರೈತ ಲೂಕಾಸ್ ಡಿಸೋಜ ಆಗ್ರಹಿಸಿದ್ದಾರೆ.