ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ಮಾಡಬಾರದು. ಟೆಂಡರ್ ಮತ್ತು ಅಂದಾಜು ಪಟ್ಟಿಯ ಪ್ರಕಾರವೇ ಕೆಲಸ ನಡೆಯಬೇಕು ಎಂದು ಗುತ್ತಿಗೆದಾರ ಕೃಷ್ಣಪ್ಪ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಿರೋಧ ಪಕ್ಷದವರು ಸರ್ಕಾರದಲ್ಲಿ ಹಣವಿಲ್ಲ, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ನಿಂತಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ ಶಾಸಕ ಬಾಲಕೃಷ್ಣ ಅವರು ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ಸಹಕಾರದೊಂದಿಗೆ ನಿರಂತರವಾಗಿ ಕೋಟ್ಯಂತರ ರುಪಾಯಿ ಅನುದಾನ ತರುತ್ತಿರುವುದೇ ಇದಕ್ಕೆ ಉತ್ತರ.
ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಸಾತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಡಿನಪಾಳ್ಯ ಮತ್ತು ದೋಣಕುಪ್ಪೆ ಗ್ರಾಮಗಳಲ್ಲಿ ಸುಮಾರು ₹60 ಲಕ್ಷ ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪೂಜಾರಿಪಾಳ್ಯ ಕೃಷ್ಣಮೂರ್ತಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ನಂತರ ಅವರು ಮಾತನಾಡಿ, ಶಾಸಕರಾದ ಬಾಲಕೃಷ್ಣರವರು ಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ, ಕಾವೇರಿ ನೀರಾವರಿ ನಿಗಮದಿಂದ ಮಂಜೂರಾಗಿರುವ ₹60 ಲಕ್ಷ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಶಾಸಕರಿಗೆ ಕೆಲಸದ ಒತ್ತಡವಿದ್ದರೂ ಅಭಿವೃದ್ಧಿ ಕುಂಠಿತವಾಗಬಾರದೆಂಬ ದೃಷ್ಟಿಯಿಂದ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಆರಂಭಿಸಲು ಸೂಚಿಸಿದ್ದಾರೆ. ಸಾತನೂರು ಪಂಚಾಯಿತಿ ವ್ಯಾಪ್ತಿಗೆ ಕಳೆದ ಮೂರು ವರ್ಷಗಳಲ್ಲಿ ಶಾಸಕರು ಸುಮಾರು ₹10 ಕೋಟಿಗೂ ಅಧಿಕ ಅನುದಾನ ತಂದಿದ್ದಾರೆ, ಗುಣಮಟ್ಟದ ಕೆಲಸವಾಗಬೇಕು ಎಂಬುದು ಶಾಸಕರ ಆಶಯವಾಗಿದ್ದು, ಗ್ರಾಮಸ್ಥರು ಹಾಗೂ ಮುಖಂಡರು ಕಾಮಗಾರಿಯ ಮೇಲ್ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ತಾಲೂಕಿನ ಹಲಸಬೆಲೆಯಲ್ಲಿ ಎಸ್ಸಿಪಿ ಯೋಜನೆಯಡಿ ಈಗಾಗಲೇ ₹50 ಲಕ್ಷ ವೆಚ್ಚದ ಕೆಲಸ ಮುಗಿದಿದ್ದು, ಈಗ ಹೊಸದಾಗಿ ₹70 ಲಕ್ಷ ವೆಚ್ಚದ ಕಾಮಗಾರಿಗೆ ಪೂಜೆ ನಡೆಯಬೇಕಿದೆ, ಬೈರನಹಳ್ಳಿಯಲ್ಲಿ ₹30 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಮತ್ತು ಹೆಚ್ಚುವರಿಯಾಗಿ ₹40 ಲಕ್ಷ ಅಂದಾಜು ವೆಚ್ಚದ ಪಟ್ಟಿ ಸಲ್ಲಿಕೆಯಾಗಿದೆ. ಕೊಂಡಹಳ್ಳಿಯಲ್ಲಿ ಈಗಾಗಲೇ ₹1.5 ಕೋಟಿ ವೆಚ್ಚದ ಟಾರ್ ರಸ್ತೆ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಾತನೂರಲ್ಲಿ ಸುಮಾರು ₹1 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಾಲಶೆಟ್ಟಹಳ್ಳಿಯಲ್ಲಿ ₹40 ಲಕ್ಷ ವೆಚ್ಚದ ಕಾಮಗಾರಿ ಮತ್ತು ಕೆಂಸಾಗರದ ಕೋಡಿ ದುರಸ್ತಿಗೆ ₹80 ಲಕ್ಷ ಮಂಜೂರಾಗಿದೆ ಎಂದು ವಿವರಿಸಿದರು,ವೈಜಿ ಗುಡ್ಡದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಈಗ ನಬಾರ್ಡ್ ವ್ಯಾಪ್ತಿಗೆ ಸೇರಿಸಲಾಗಿದೆ. ಸರ್ಕಾರದ ಹಣಕಾಸಿನ ಮಿತಿಯಿಂದಾಗಿ ಈ ಮೊದಲು ವಿಳಂಬವಾಗಿದ್ದ ಈ ಯೋಜನೆಯು ಈಗ ನಬಾರ್ಡ್ನಿಂದ ನೇರ ಅನುದಾನ ಪಡೆದು ಶೀಘ್ರ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳ್ಳಲಿದೆ ಎಂದು ಕೃಷ್ಣಮೂರ್ತಿ ಭರವಸೆ ನೀಡಿದರು.
ಗುತ್ತಿಗೆದಾರರಿಗೆ ಸೂಚನೆ:ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ಮಾಡಬಾರದು. ಟೆಂಡರ್ ಮತ್ತು ಅಂದಾಜು ಪಟ್ಟಿಯ ಪ್ರಕಾರವೇ ಕೆಲಸ ನಡೆಯಬೇಕು ಎಂದು ಗುತ್ತಿಗೆದಾರ ಕೃಷ್ಣಪ್ಪ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಿರೋಧ ಪಕ್ಷದವರು ಸರ್ಕಾರದಲ್ಲಿ ಹಣವಿಲ್ಲ, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ನಿಂತಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ ಶಾಸಕ ಬಾಲಕೃಷ್ಣ ಅವರು ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ಸಹಕಾರದೊಂದಿಗೆ ನಿರಂತರವಾಗಿ ಕೋಟ್ಯಂತರ ರುಪಾಯಿ ಅನುದಾನ ತರುತ್ತಿರುವುದೇ ಇದಕ್ಕೆ ಉತ್ತರ ಎಂದು ಕೃಷ್ಣಮೂರ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಣ್ಣ (ತಾತ), ಬಸಂತಿ, ಬಸಂತರಾಜು, ಚೆಲುವಣ್ಣ, ಡೈರಿ ರಾಮಣ್ಣ, ಚಂದ್ರಣ್ಣ, ರಾಜಣ್ಣ ಗುತ್ತಿಗೆದಾರರಾದ ಕೃಷ್ಣಪ್ಪ ಸೇರಿದಂತೆ ದಂಡಿನಪಾಳ್ಯ ಮತ್ತು ದೋಣಕುಪ್ಪೆ ಗ್ರಾಮಸ್ಥರು ಭಾಗವಹಿಸಿದ್ದರು.