ರಾಣಿಬೆನ್ನೂರು: ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ದಿಢೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಇಲ್ಲಿನ ಗಂಗಾಪುರ ರಸ್ತೆಯ ಕೊಟ್ಟೂರೇಶ್ವರ ನಗರದಲ್ಲಿ ನಡೆದಿದೆ.ಈ ಸಮಯದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನಮ್ಮ ಪ್ರದೇಶದಲ್ಲಿ ವಿನಾಕಾರಣ ಪದೇಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಪಕ್ಕದಲ್ಲಿಯೇ ದೊಡ್ಡ ಕೆರೆಯಿದ್ದು, ಇದರಿಂದಾಗಿ ಪ್ರತಿನಿತ್ಯ ವಿಷದ ಹಾವುಗಳ ಸಂಖ್ಯೆ ಜಾಸ್ತಿಯಾಗಿದ್ದು ಈ ಹಿಂದೆ ಹಾವುಗಳ ಕಡಿತದ ಪ್ರಕರಣಗಳು ಸಂಭವಿಸಿವೆ. ವಿದ್ಯುತ್ ಕಡಿತವಾದಾಗ ನಾವು ಹೆಸ್ಕಾಂ ಇಲಾಖೆಯವರಿಗೆ ಕರೆ ಮಾಡಿದರೆ ಸರಿಯಾದ ಸ್ಪಂದನೆ ಇರುವುದಿಲ್ಲ. ಹೆಸ್ಕಾಂನವರು ಫೋನ್‌ ಸ್ವೀಕರಿಸಲು ಸತಾಯಿಸುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸಿದರೆ ಎರಡು ದಿನ ವಿದ್ಯುತ್ ಬರುವುದಿಲ್ಲ. ನಗರದಲ್ಲಿ ವಯಸ್ಸಾದ ಮತ್ತು ರೋಗಿಗಳು ಹೆಚ್ಚಾಗಿರುವುದರಿಂದ ವಿದ್ಯುತ್ ಇಲ್ಲದಾಗ ತುಂಬಾ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈ ಕೂಡಲೇ ಕೊಟ್ಟೂರೇಶ್ವರದ ನಗರದ ಲೈನ್ ಮ್ಯಾನ್ ಕೋಟೆಪ್ಪ ಬದಲಾಗಿ ಬೇರೆ ಲೈನ್‌ಮ್ಯಾನ್ ಬದಲಾಯಿಸಿ ಬೇರೆಯವರನ್ನು ನಿಯೋಜಿಸಬೇಕು ಹಾಗೂ ಪದೇ ಪದೇ ವಿದ್ಯುತ್ ಕಡಿತಗೊಳಿಸುವುದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಹೆಸ್ಕಾಂ ಸಿಬ್ಬಂದಿ ಸಾರ್ವಜನಿಕರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. ಬಾಬಣ್ಣ ಕೊಪ್ಪದ, ಮುರುಗೇಶ ಬೇತೂರ, ಗಣೇಶ ಸಾಲಿಮನಿ, ಪಂಚಾಕ್ಷರಯ್ಯಾ ಮುದ್ಗಲಮಠ, ಅಜ್ಜಪ್ಪ ಇಚ್ಚಂಗಿ, ರವಿಕುಮಾರ ಗಚ್ಚಿನಮಠ, ಕೊಟ್ರೇಶ್ ಹಾದಿಮನಿ, ಕೋಟೆಪ್ಪ ಕೊಪ್ಪದ, ಚೇತನ್ ರಾಜನಹಳ್ಳಿ, ನಾಗರಾಜ ತಿಮ್ಮಲಾಪುರ, ಹನುಮಂತ ದೊಡ್ಮನಿ ಮತ್ತಿತರರಿದ್ದರು.