ಸಾರಾಂಶ
ಅರಸೀಕೆರೆ: ನಗರದ ಬಸ್ ಡಿಪೋದ ಬಲಭಾಗದಲ್ಲಿರುವ ಬಡಾವಣೆಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರ ವಿಜಯ್ ಕುಮಾರ್ (45)ನನ್ನು ಆತನ ಬಳಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ವಿಕ್ರಂ ಮತ್ತು ಸಚಿನ್ ಎಂಬುವರು ಭೀಕರವಾಗಿ ರಾಡಿನಿಂದ ತಲೆಗೆ ಹೊಡೆದು, ಕೊಲೆ ಮಾಡಿ ನಂತರ ಆತನ ಮೇಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ರಾತ್ರಿ ಸುಮಾರು 11.30ರ ಸಮಯದಲ್ಲಿ ನಮ್ಮಿಬ್ಬರ ನಡುವೆ ಜಗಳವಾಗುತ್ತಿದೆ, ನೀವು ಬಂದು ಬಿಡಿಸಿ ಎಂದು ಗುತ್ತಿಗೆದಾರ ವಿಜಯ್ ಕುಮಾರ್ ಗೆ ಫೋನ್ ಕರೆ ಮಾಡಿದ ದುರುಳರು, ವಿಜಯಕುಮಾರ್ ರನ್ನು ಅಲ್ಲಿಗೆ ಕರೆಸಿಕೊಂಡು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಗುತ್ತಿಗೆದಾರನ ಮೈಮೇಲಿದ್ದ ಒಂದು ಚಿನ್ನದ ಸರ ಹಾಗೂ ಕೈಬೆರಳಲ್ಲಿದ್ದ ಉಂಗುರಗಳು ಬರದಿದ್ದರಿಂದ ಬೆರಳನ್ನೇ ತುಂಡರಿಸಿ ಬೆರಳು ಸಮೇತ ಚಿನ್ನದ ಉಂಗುರ ಆಭರಣ ದೋಚಿಕೊಂಡು ಪರಾರಿಯಾಗಿದ್ದರು. ವಿಜಯಕುಮಾರ್ ನಗರದ ಸುಬ್ರಹ್ಮಣ್ಯ ನಗರದ ವಾಸಿಯಾಗಿದ್ದು, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತರ ಶವವನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ನಗರದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.