ಕನ್ನಡಪ್ರಭ ವಾರ್ತೆ ಶಿರಸಿ
ಗುತ್ತಿಗೆದಾರರು, ಅಧಿಕಾರಿಗಳ ಸಮರ್ಥ ನಿರ್ವಹಣೆ ಮಾಡುವಲ್ಲಿ ವಿಫಲರಾಗಿರುವುದರಿಂದ ಶಿರಸಿ-ಹುಬ್ಬಳ್ಳಿ ಮತ್ತು ಹಾವೇರಿ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ ಮಾಡಿದರು.ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಕ್ಷೇತ್ರದ ಸಂಸದನಾಗಿ ಎಲ್ಲಾ ರೀತಿಯಿಂದಲೂ ಏನು ಮಾಡಬೇಕು ಅದನ್ನು ನಾನು ಮಾಡಿದ್ದೇನೆ. ಈ ವಿಷಯದ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆಯಲ್ಲಿ ಚರ್ಚಿಸಲಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತೇವೆ. ಸುಮಾರು 8 ಈಗಾಗಲೇ ಕಿಲೋಮೀಟರ್ ಜಲ್ಲಿ ಕಲ್ಲು ಹಾಕಿ ನಿರ್ಮಾಣ ಮಾಡಿರುವ ರಸ್ತೆಗೆ ಮೇ ತಿಂಗಳ ಅಂತ್ಯದೊಳಗಾಗಿ ಡಾಂಬರೀಕರಣ ಮಾಡಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಸುಗಮವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕೆಂದು ಈಗಾಗಲೇ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.ಈ ಸಂದರ್ಭ ರೇಖಾ ಹೆಗಡೆ, ಉಷಾ ಹೆಗಡೆ, ನಿರ್ಮಲಾ ಶೆಟ್ಟಿ, ಶರ್ಮಿಳಾ ಮಾದನಗಿರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಹಿಳೆಯರಿಗೆ ಅವಮಾನಮಹಿಳೆಯರ ಮೀಸಲಾತಿ ಕಸಿದುಕೊಂಡ ಇಂಡಿಯಾ ತಂಡಕ್ಕೆ ಮಹಿಳೆಯರ ಬಗ್ಗೆ ಕಿಂಚಿತ್ತು ಗೌರವ ಇಲ್ಲ. ಒಂದು ಕಡೆ ಮಹಿಳೆಯರನ್ನು ಎತ್ತಿ ಕಟ್ಟುವುದು ಇನ್ನೊಂದು ಕಡೆ ಮಹಿಳೆಯರನ್ನು ಕಡೆಗಣಿಸುವುದು ಮೊದಲಿನಿಂದಲೂ ಅವರ ಖಯಾಲಿ ಆಗಿದೆ ಎಂದು ಹೇಳಿದರು.ಕಾಂಗ್ರೆಸ್ ನೇತೃತ್ವದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮತ್ತು ಅವರ ಮಿತ್ರ ಪಕ್ಷಗಳ ತಂಡ ಬಿಲ್ ಪರವಾಗಿ ಮತ ಹಾಕದೆ ಮಹಿಳೆಯರಿಗೆ, ಸಂಸತ್ತಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳನ್ನೆಲ್ಲ ಕಾಂಗ್ರೆಸ್ ಹಾಗೂ ಇಂಡಿಯಾ ತಂಡ ವಿರೋಧಿಸುತ್ತಾ ಬಂದಿದೆ ಎಂದರು.