ಅರೆಭಾಷೆ ಸಾಹಿತ್ಯ ಬೆಳವಣಿಗೆಗೆ ಸಹಕರಿಸಿ: ಭಟ್ಯನ ಈರಪ್ಪ

| Published : Dec 17 2023, 01:45 AM IST

ಸಾರಾಂಶ

ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜ ವತಿಯಿಂದ ಸಂಗಯನಪುರ ಗ್ರಾಮದ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅರೆಭಾಷೆ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಮತ್ತು ಅರೆಭಾಷೆ ಗೌಡ ಸಮುದಾಯದ ಸರ್ವಾಂಗಿಣಿಯ ಬೆಳವಣಿಗೆಗೆ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಪೂರಕವಾಗಿದೆ ಎಂದು ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಗೌರವಾಧ್ಯಕ್ಷ ಭಟ್ಯನ ಈರಪ್ಪ ಅಭಿಪ್ರಾಯ ಪಟ್ಟರು.

ಅವರು ಶುಕ್ರವಾರ ಸಮೀಪದ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜ ವತಿಯಿಂದ ಸಂಗಯನಪುರ ಗ್ರಾಮದ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅರೆಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರೆಭಾಷೆ ಗೌಡ ಸಮಾಜದ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಅರೆಭಾಷೆ ಮಾತನಾಡಿದರೆ ಮಾತ್ರ ಅರೆಭಾಷೆ ಬೆಳೆಯುತ್ತದೆ. ಇದರ ಜೊತೆಯಲ್ಲಿ ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಅರೆಭಾಷೆ ಜನಾಂಗದ ಯುವ ಸಮೂಹ ಹಿರಿಯರಿಂದ ಇವುಗಳನ್ನು ತಿಳಿದುಕೊಳ್ಳುವ ಮೂಲಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರೆಭಾಷೆ ಗೌಡ ಸಮೂಹ ಮತ್ತು ಭಾಷೆ, ಸಾಹಿತ್ಯ, ಸಂಸ್ಕೃತಿ ಉನ್ನತಿಗಾಗಿ ಅಕಾಡೆಮಿ ಸ್ಥಾಪಿತವಾಗಿರುವ ನಿಟ್ಟಿನಲ್ಲಿ ಸಮುದಾಯದ ಬಾಂಧವರು ಇದರ ಬೆಳವಣಿಗೆಗೆ ಸಹಕರಿಸಬೇಕು ಎಂದರು. ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯನ್ನು 2012 ಡಿ. 15 ರಂದು ಆಗಿನ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಗಿತ್ತು ಇದರ ಹಿನ್ನೆಲೆಯಲ್ಲಿ ಪ್ರತಿ ವರ್ಷವು ಅರೆಭಾಷೆ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅರೆಭಾಷೆ ಗೌಡ ಸಮಾಜದ ಕಾರ್ಯದರ್ಶಿ ಕುಯುಮುಡಿ ಜಯಕುಮಾರ್, ಆಡಳಿತ ಮಂಡಳಿ ನಿರ್ದೇಶಕರಾದ ಕೋಟೇರ ಹೊನ್ನಪ್ಪ, ಕುಯುಮುಡಿ ಗಣೇಶ್, ಚೀಯೆಂಡಿ ದೃವಯ್ಯ, ನಂಗಾರು ಹೂವಯ್ಯ, ಪರ್ಲಕೋಟಿ ಸತೀಶ್, ಕಡ್ಯದ ಕುಮಾರ್, ಕೆದಂಬಾಡಿ ಮಧುಶಂಕರ್, ಎಡಕೇರಿ ಪ್ರಸನ್ನ, ಸದಸ್ಯರಾದ ಎಡಕೇರಿ ಜಯರಾಮ್, ತೊತ್ಯನ ಚಂದ್ರಶೇಖರ್ ಹಾಜರಿದ್ದರು.