- ಷಹಾಜಿರಾಜೆ ಭೋಸ್ಲೆ ಮಹಾರಾಜ್‌, ಛತ್ರಪತಿ ಸಂಭಾಜಿ ಮಹಾರಾಜ್‌ ಜಯಂತ್ಯುತ್ಸವ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಕ್ಷತ್ರಿಯ ಮರಾಠ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮರಾಠ ಅಭಿವೃದ್ಧಿ ನಿಗಮ ಅಧ್ಯಕ್ಷನಾದ ಮೇಲೆ ಎಂಜಿನಿಯರಿಂಗ್ ವ್ಯಾಸಂಗ ಮಾಡುವ ಸಮಾಜದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ₹2 ಲಕ್ಷ ನೀಡುವ ಯೋಜನೆ ಪ್ರಾರಂಭಿಸಲಾಗಿದೆ ಎಂದು ಕ್ಷತ್ರಿಯ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಚ್. ಮರಿಯೋಜಿ ರಾವ್ ಹೇಳಿದರು.

ಭಾನುವಾರ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಷಹಾಜಿ ರಾಜೆ ಭೋಂಸ್ಲೆ ಅವರ ಸ್ಮಾರಕ ಆವರಣದಲ್ಲಿ ರಾಜ್ಯ ಕ್ಷತ್ರಿಯ ಮರಾಠ ಸ್ಮಾರಕಗಳ ಅಭಿವೃದ್ಧಿ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಮಂತ ಶ್ರೀ ಷಹಾಜಿರಾಜೆ ಭೋಸ್ಲೆ ಮಹಾರಾಜರ ಮತ್ತು ಸ್ವರಾಜ್ ರಕ್ಷಕ್ ಶ್ರೀ ಛತ್ರಪತಿ ಸಂಭಾಜಿ ಮಹಾರಾಜರ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ನಿಗಮದ ಅಧ್ಯಕ್ಷನಾದ ಬಳಿಕ 2600 ಹೊಲಿಗೆ ಯಂತ್ರಗಳನ್ನು ಸಮಾಜದ ಮಹಿಳೆಯರಿಗೆ ನೀಡಲು ಅರ್ಜಿ ಆಹ್ವಾನಿಸಿದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಜಾವು ಜಲಭಾಗ್ಯ ಯೋಜನೆಯಲ್ಲಿ ಸಣ್ಣ ರೈತರಿಗೆ 3684 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 1500 ಬೋರ್‌ ಕೊರೆಸಲು ಉದ್ದೇಶಿಸಲಾಗಿದೆ ಎಂದರು.

ಮಧ್ಯ ಕರ್ನಾಟಕ ಭಾಗದಲ್ಲಿರುವ ಷಹಾಜಿ ಮಹಾರಾಜರ ಸ್ಮಾರಕವನ್ನು ಅಭಿವೃದ್ಧಿಪಡಿಸಲು ಸಮಾಜದ ಸ್ವಾಮೀಜಿಗಳು ಮುಂದೆ ಬರಬೇಕಾಗಿದೆ. ಹೊದಿಗೆರೆ ಗ್ರಾಮದಲ್ಲಿ ಸಮಾಜಕ್ಕೆ ಆಸ್ತಿ ಮಾಡಿ ಸ್ಮಾರಕದ ಅಭಿವೃದ್ಧಿಗೆ ಮುಂದಾಗಬೇಕು. ರಾಜ್ಯದಲ್ಲಿರುವ ಇಡೀ ಸಮಾಜ ನಿಮ್ಮ ಬೆನ್ನಿಗೆ ನಿಲ್ಲಲಿದೆ. ರಾಜ್ಯದಲ್ಲಿರುವ ಮರಾಠಿಗರು ಮಹಾರಾಷ್ಟ್ರದವರಲ್ಲ. ನಾವೆಲ್ಲರೂ ಕನ್ನಡಿಗರಾಗಿದ್ದು, ನಮ್ಮ ಸಮುದಾಯದ ಬಹಷ್ಟು ಜನರಿಗೆ ಮರಾಠಿ ಭಾಷೆಯೇ ಬರುವುದಿಲ್ಲ. ನಮ್ಮ ರಕ್ತದಲ್ಲಿ ಕನ್ನಡ ಬೆರೆತುಹೋಗಿದೆ ಎಂದರು.

ಕೆಪಿಸಿಸಿ ವಕ್ತಾರ ಹೊದಿಗೆರೆ ರಮೇಶ್ ಮಾತನಾಡಿ, ಷಹಾಜಿ ಮಹಾರಾಜರ ಸ್ಮಾರಕ ನಮ್ಮ ಗ್ರಾಮದಲ್ಲಿರುವುದು ನಮ್ಮಗಳ ಪುಣ್ಯವಾಗಿದೆ. ಈ ಸ್ಮಾರಕವನ್ನು ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಂದ ₹5 ಕೋಟಿ ಅನುದಾನವನ್ನು ತಂದು ಕೆಲಸ ಪ್ರಾರಂಭಿಸಿದರೆ ಪುರಾತತ್ವ ಇಲಾಖೆಯವರು ನೋಟಿಸ್ ನೀಡಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಈ ಕಾಮಗಾರಿ ಪುನಃ ಪ್ರಾರಂಭಿಸಲು ಈಗಾಗಲೇ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಬೆಂಗಳೂರು ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಸುರೇಶ ಭಾರತೀನಂದ ಸ್ವಾಮಿಗಳು, ಪುಣೆಣೆಯ ಶ್ರೀ ದಾದಾ ಮಹಾರಾಜ್ ನಗರಕರ್ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಾಸಕಿ ಶಾರದಾ ಪೂರ್ಯಾನಾಯ್ಕ್, ತಾಲೂಕು ಮರಾಠ ಸಮಾಜದ ಅಧ್ಯಕ್ಷ ಎಂ.ಬಿ. ಶಿವಾಜಿ ರಾವ್, ಜೀವ ವೈವಿಧ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್, ಬ್ರಾಹ್ಮಣ ನಿಗಮದ ಅಧ್ಯಕ್ಷ ಆಸೋಡ ಜಯಸಿಂಹ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ವೈ.ಎಂ. ರಾಮಚಂದ್ರ ರಾವ್, ತೇಜಸ್ವಿ ಪಟೇಲ್, ಎಚ್.ಎಸ್. ಶಿವಕುಮಾರ್, ಸತೀಶ್ ಎಂ. ಪವಾರ್ ಮೊದಲಾದವರು ಹಾಜರಿದ್ದರು.

- - -

(ಕೋಟ್‌) ಭಾರತ ದೇಶದ ಮೇಲೆ ಅನೇಕರು ದಾಳಿ ಮಾಡಿ ಸನಾತನ ಧರ್ಮವನ್ನು ನಾಶಪಡಿಸಲು ಪ್ರಯತ್ನ ನಡೆಸಿದರೂ ಛತ್ರಪತಿ ಶಿವಾಜಿ ಮಹಾರಾಜರಂತಹ ವೀರರಿಂದ ಈ ನೆಲದಲ್ಲಿ ಇನ್ನು ಸನಾತನ ಧರ್ಮ ಜೀವಂತವಾಗಿ ಉಳಿದಿದೆ.

- ಬಿ.ಪಿ.ಹರೀಶ್‌, ಶಾಸಕ, ಹರಿಹರ ಕ್ಷೇತ್ರ.

- - -

-17ಕೆಸಿಎನ್‌ಜಿ1: