ಶಿಕ್ಷಣದಲ್ಲಿ ತಾರತಮ್ಯ ಉಂಟಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಸಮಾನ ಶಿಕ್ಷಣಕ್ಕಾಗಿ ಕಾನ್ವೆಂಟ್ ಗಳನ್ನು ರಾಷ್ಟ್ರೀಕರಣ ಮಾಡಿದರೆ ಬಡವರು, ಕೂಲಿ ಮಾಡುವವನ ಮಗ ಶ್ರೀಮಂತರು ಹಾಗೂ ಐಎಎಸ್ ಓದಿರುವವರ ಮಕ್ಕಳ ಜೊತೆ ಓದಿದಾಗ ಭಾರತದಲ್ಲಿ ಸಮಾನತೆ,ಸಮಾಜವಾದ ಹೆಚ್ಚಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಯೊಬ್ಬರಿಗೂ ಉಚಿತವಾದ ಸಮಾನ ಶಿಕ್ಷಣ ಸಿಗುವಂತಾಗಲು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದ ರೀತಿ ಕಾನ್ವೆಂಟ್‌ಗಳನ್ನು ರಾಷ್ಟ್ರೀಕರಣ ಮಾಡಬೇಕಿದೆ ಎಂದು ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಬಿ.ಎಸ್.ಶಿವಣ್ಣ ಹೇಳಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನ ಮೌಲ್ಯಮಾಪನ ಸಭಾಂಗಣದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ, ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಮಂಡ್ಯ, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದಿಂದ ನಡೆದ ಯುವ ಮನಸ್ಸುಗಳಿಗೆ ಲೋಹಿಯಾ ಸಮಾಜವಾದಿ ಚಿಂತಕ ಡಾ.ರಾಮ ಮನೋಹರ ಲೋಹಿಯಾ ಅವರ 116ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದಲ್ಲಿ ತಾರತಮ್ಯ ಉಂಟಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಸಮಾನ ಶಿಕ್ಷಣಕ್ಕಾಗಿ ಕಾನ್ವೆಂಟ್ ಗಳನ್ನು ರಾಷ್ಟ್ರೀಕರಣ ಮಾಡಿದರೆ ಬಡವರು, ಕೂಲಿ ಮಾಡುವವನ ಮಗ ಶ್ರೀಮಂತರು ಹಾಗೂ ಐಎಎಸ್ ಓದಿರುವವರ ಮಕ್ಕಳ ಜೊತೆ ಓದಿದಾಗ ಭಾರತದಲ್ಲಿ ಸಮಾನತೆ,ಸಮಾಜವಾದ ಹೆಚ್ಚಾಗುತ್ತದೆ ಎಂದರು.

ಲೋಹಿಯಾ, ಗಾಂಧಿ, ಅಂಬೇಡ್ಕರ್ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 2002ರಲ್ಲಿ ಲೋಹಿಯಾ ವಿಚಾರ ವೇದಿಕೆ ನಾನು ಹುಟ್ಟು ಹಾಕಿ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ನನ್ನ ಹುಟ್ಟೂರು ದಡದಪುರದಲ್ಲಿ ಲೋಹಿಯಾ ವಿಚಾರ ವೇದಿಕೆಯಿಂದ 1100 ಬಾತು ರೂಂಗಳನ್ನು ಕಟ್ಟಿಸಿಕೊಡಲಾಗಿದೆ. ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌, 16.500 ವಿದ್ಯಾರ್ಥಿಗಳಿಗೆ ಹೆಲ್ತ್ ಕಿಟ್ಟು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಜಾತ್ಯತೀತ ಹಾಗೂ ಧರ್ಮಾತೀತವಾಗಿ ಗುಣಮಟ್ಟದ ಲ್ಯಾಪ್ ಟಾಪ್ ವಿತರಣೆ ಮಾಡಲಾಗಿದೆ ಎಂದರು.

ಕವಿ ಕೆ.ಪಿ.ಮೃತ್ಯುಂಜಯ ಮಾತನಾಡಿ, ಲೋಹಿಯಾ ಅವರು ಗಾಂಧೀಜಿಯವರ ಪ್ರಿಯ ಶಿಷ್ಯರಾಗಿದ್ದು, ಅಸಾಧಾರಣವಾದ ವ್ಯಕ್ತಿತ್ವ ಹೊಂದಿದವರು. ಕರ್ನಾಟಕ ಹಾಗೂ ಕನ್ನಡಕ್ಕೆ ಲೋಹಿಯಾ ಸಂಪರ್ಕ ಬಹಳ ದೊಡ್ಡದಿದೆ. ವಿಶ್ವ ಶಾಂತಿ ಬಯಸುವ ವಿಶ್ವ ಸರ್ಕಾರ ರಚನೆಯಾಗಬೇಕು ಎಂದು ರಾಮ ಮನೋಹರ ಲೋಹಿಯಾ ಅವರು ಕನಸು ಕಂಡಿದ್ದರು ಎಂದರು.

ಸಮಾರಂಭದಲ್ಲಿ ಮಹಿಳಾ ಸರ್ಕಾರಿ ಕಾಲೇಜು ಪ್ರಾಂಶುಪಾಲ ಪ್ರೊ.ಗುರುರಾಜ್ ಪ್ರಭು ಕೆ. ಅಧ್ಯಕ್ಷತೆ ವಹಿಸಿದರು. ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಚಿಂತಕ ಅರವಿಂದ ಪ್ರಭು, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥ ಪ್ರೊ.ಭರತ್‌ರಾಜ್ ಎಂ.ಜಿ., ಸಹ ಪ್ರಾಧ್ಯಾಪಕರಾದ ದಾನೇಗೌಡ, ಪೂರ್ಣಿಮಾ ಎಲ್., ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳಾದ ಸಂತಕಸಲಗೆರೆ ಬಸವರಾಜು, ಚನ್ನನಕೆರೆ ಲಿಂಗಪ್ಪ, ರಾಜೂಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.